Wednesday, February 5, 2014

ಇಂಥದ್ದೊಂದು ಕಾಯ್ದೆ ಮನೋರಮಾ, ಶರ್ಮಿಳರನ್ನಲ್ಲದೆ ಇನ್ನಾರನ್ನು ಸೃಷ್ಟಿಸಬಲ್ಲುದು?

1. ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವವರ ಮೇಲೆ ಗುಂಡು ಹಾರಿಸಬಹುದು.
2. ಅನುಮಾನಿತ ವ್ಯಕ್ತಿಗಳನ್ನು ವಾರಂಟ್ ಇಲ್ಲದೆಯೇ ಬಂಧಿಸಬಹುದು.
3. ಶಂಕಿತ ಯಾವುದೇ ವಾಹನವನ್ನು ತಡೆಗಟ್ಟಿ, ತಪಾಸಿಸಬಹುದು.
4. ಯೋಧರು ಯಾವ ಕಾರಣಕ್ಕೂ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ ಅವರ ಮೇಲೆ ಕೇಸು ದಾಖಲಿಸುವ, ವಿಚಾರಣೆಗೆ ಒಳಪಡಿಸುವುದಕ್ಕೆ ಅವಕಾಶ ಇಲ್ಲ.
    ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕಾರಿಯಾಗಿದ್ದ ನವನೀತಮ್ ಪಿಳ್ಳೆಯವರಿಂದ; ‘ಕ್ರೂರ ಕಾನೂನು, ಪುರಾತನ ಕಾಲದ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ಸರಿ ಹೊಂದದ ಕಾನೂನು..’ ಎಂದು ಕರೆಸಿಕೊಂಡಿದ್ದ ‘ಸಶಸ್ತ್ರ ಪಡೆ ಗಳ ವಿಶೇಷಾಧಿಕಾರ ಕಾಯ್ದೆಯಲ್ಲಿರುವ’ (AFSPA) ಅಂಶಗಳಿವು. 2012 ಮಾರ್ಚ್ 31ರಂದು ಸ್ವತಃ ವಿಶ್ವಸಂಸ್ಥೆಯೇ AFSPA  ಕಾಯ್ದೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪ್ರಜಾತಂತ್ರ ದೇಶವಾದ ಭಾರತದಲ್ಲಿ ಇಂಥ ಕಾನೂನಿಗೆ ಅವಕಾಶ ಇರಬಾರದು ಅಂದಿತು. ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ ವಿಶ್ವಸಂಸ್ಥೆಯ ವಿಶೇಷಾಧಿಕಾರಿ ಕ್ರಿಸ್ಟೋಫರ್ ಹೆನ್ಸ್ ಅಂತೂ, AFSPA ವನ್ನು ಕ್ರೂರ ಮತ್ತು ದ್ವೇಷ ಮನೋಭಾವದ ಕಾಯ್ದೆ ಅಂದರು. ವಿಕಿಲೀಕ್ಸ್ ಬಿಡುಗಡೆಗೊಳಿಸಿರುವ ವರದಿಯಲ್ಲಿ - AFSPA  ಕಾಯ್ದೆಯಲ್ಲಿ ಸೇನೆಗೆ ನೀಡಲಾಗಿರುವ ಅಪರಿಮಿತ ಅಧಿಕಾರದಿಂದಾಗಿ ಮಣಿಪುರ ಮತ್ತು ಕಾಶ್ಮೀರಗಳಲ್ಲಿ ಹತ್ಯೆ, ಅತ್ಯಾಚಾರಗಳು ನಡೆಯುವುದಕ್ಕೆ ಕಾರಣವಾಗಿವೆ’ ಎಂದು ಹೇಳಲಾಗಿದೆ. ‘ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳಿ..’ ಎಂದು ಒತ್ತಾಯಿಸಿ ಕಳೆದ ಒಂದು ದಶಕದಿಂದ ಮಣಿಪುರದ ಇರೋಮ್ ಶರ್ಮಿಳಾ ನಿರಾಹಾರ ಉಪವಾಸ ಆಚರಿಸುತ್ತಿದ್ದಾರೆ. ಆದರೂ ಇತ್ತೀಚೆಗೆ ಕೇಂದ್ರ ಸರಕಾರ ಮಣಿಪುರದಲ್ಲಿ ಜಾರಿಯಲ್ಲಿರುವ AFSPA  ಕಾಯ್ದೆಯನ್ನು ಒಂದು ವರ್ಷಕ್ಕೆ ಮುಂದುವರಿಸಿತು.
   ನಿಜವಾಗಿ, Armed Forces (Special Powers) Act  (AFSPA) ಎಂಬ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿಯೇ ಚರ್ಚೆ ಗೊಳಪಡಿಸಿದ್ದು ಮಣಿಪುರದ ತಂಗ್ಜಮ್ ಮನೋರಮ.
   2004 ಜುಲೈ 10ರಂದು ಮಧ್ಯರಾತ್ರಿ ಅಸ್ಸಾಮ್ ರೈಫಲ್ಸ್ ನ ಯೋಧರು 32 ವರ್ಷದ ತಂಗ್ಜಮ್ ಮನೋರಮಾರ ಮನೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ತಂಗ್ಜಮ್ ಮತ್ತು ಮನೆಯವರು ಗಾಢ ನಿದ್ದೆಯಲ್ಲಿದ್ದರು. ಬಾಗಿಲು ಒಡೆದು ಒಳನುಗ್ಗಿದ ಯೋಧರು ಆಕೆಯನ್ನು ಎಳೆದು ಹೊರತರುತ್ತಾರೆ. ಕುಟುಂಬ ಸದಸ್ಯರ ಎದುರೇ ಥಳಿಸುತ್ತಾರೆ. ಬಂಧಿಸಿ ಕರೆದೊಯ್ಯುತ್ತಾರೆ. ಜುಲೈ 11ರಂದು ಸಂಜೆ ಆಕೆಯ ಅರೆನಗ್ನ ಮೃತದೇಹ ಮನೆಯಿಂದ 4 ಕಿಲೋಮೀಟರ್ ದೂರದ ರಸ್ತೆ ಬದಿಯಲ್ಲಿ ಪತ್ತೆಯಾಗುತ್ತದೆ. ಇದರಿಂದಾಗಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತವೆ. ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ಧರಣಿ ನಡೆಸುತ್ತವೆ. ‘ನಮ್ಮನ್ನು ಅತ್ಯಾಚಾರ ಮಾಡಿ ..' ಎಂಬ ಬ್ಯಾನರ್ ಹಿಡಿದು ಅಸ್ಸಾಮ್ ರೈಫಲ್ಸ್ ನ ಪ್ರಧಾನ ಕಚೇರಿ ಎದುರು ಮಹಿಳೆಯರು ಸಂಪೂರ್ಣ ನಗ್ನವಾಗಿ ಅಬ್ಬರಿಸುತ್ತಾರೆ. ಪ್ರತಿಭಟನೆಯ ಕಾವು ಹೆಚ್ಚಿದಂತೆಯೇ ಕೇಂದ್ರ ಗೃಹಸಚಿವರು ಮಣಿಪುರಕ್ಕೆ ಭೇಟಿ ನೀಡುತ್ತಾರೆ. ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಪ್ರಧಾನಿ ಮನ್‍ಮೋಹನ್ ಸಿಂಗ್ ಭರವಸೆ ನೀಡುತ್ತಾರೆ. ಪ್ರಕರಣದ ತನಿಖೆಗಾಗಿ ಮಣಿಪುರ ಸರಕಾರವು ಉಪೇಂದ್ರ ಆಯೋಗವನ್ನು ರಚಿಸುತ್ತದೆ. ಆದರೆ ಆಯೋಗದ ವಿಚಾರಣೆಗೆ ಸೇನೆಯು ಯಾವ ಬಗೆಯ ಸಹಕಾರವನ್ನೂ ನೀಡುವುದಿಲ್ಲ. ಸಮನ್ಸ್ ನ ಮೇಲೆ ಸಮನ್ಸ್ ಕಳುಹಿಸಿದರೂ ಸೇನೆ ನಿರ್ಲಕ್ಷ್ಯ  ತೋರುತ್ತದೆ. AFSPA  ಕಾಯ್ದೆಯಂತೆ- ಯೋಧರನ್ನು ಮುಟ್ಟುವ, ವಿಚಾರಣೆಗೆ ಒಳಪಡಿಸುವ ಅಧಿಕಾರ ಯಾವುದೇ ಆಯೋಗ ಅಥವಾ ನ್ಯಾಯಾಂಗಕ್ಕೆ ಇಲ್ಲವಾದ್ದರಿಂದ ಉಪೇಂದ್ರ ಆಯೋಗಕ್ಕೆ ಏನು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಆಯೋಗವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಅದನ್ನು ಈವರೆಗೂ ಬಹಿರಂಗಪಡಿಸಲಾಗಿಲ್ಲ.
   ಸಮಾಧಿ ಕಲ್ಲುಗಳು ಮೌನವಾಗುವುದಿಲ್ಲ (Tombstones) ಎಂಬ ಶೀರ್ಷಿಕೆಯಲ್ಲಿ ರಾಹುಲ್ ಪಂಡಿತ್ ಎಂಬವರು 2014 ಜನವರಿ 27ರಂದು ದಿ ಹಿಂದೂವಿನಲ್ಲಿ ಒಂದು ಲೇಖನ ಬರೆದಿದ್ದರು. ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳು, AFSPA ಕಾಯ್ದೆಯ ದುರುಪಯೋಗ, ಜನರ ಭ್ರಮನಿರಸನಗಳ ಬಗ್ಗೆ ಅವರು ಲೇಖನದಲ್ಲಿ ಬೆಳಕು ಚೆಲ್ಲಿದ್ದರು. 2000 ಮಾರ್ಚ್ 26ರಂದು ಅಮೇರಿಕದ ಅಧ್ಯಕ್ಷ  ಬಿಲ್ ಕ್ಲಿಂಟನ್‍ರು ಭಾರತಕ್ಕೆ ಬರುವ ಹೊತ್ತಲ್ಲೇ ಕಾಶ್ಮೀರದ ಪತ್ರಿಬಾಲ್ ಸಮೀಪದ ಚತ್ತೀಸ್ ಸಿಂಗ್‍ಪುರ್‍ನಲ್ಲಿ ಉಗ್ರಗಾಮಿಗಳು 35 ಸಿಕ್ಖರನ್ನು ಗುಂಡಿಟ್ಟು ಕೊಂದಿದ್ದರು. ಈ ಕ್ರೌರ್ಯದಲ್ಲಿ ಭಾಗಿಯಾದ ಐವರು ಉಗ್ರರನ್ನು ತಾವು ಮುಖಾಮುಖಿ ಹೋರಾಟದಲ್ಲಿ (ಎನ್‍ಕೌಂಟರ್) ಕೊಂದಿರುವುದಾಗಿ 5 ದಿನಗಳ ಬಳಿಕ ಸೇನೆಯು ಘೋಷಿಸಿತು. ಆದರೆ ಕಾಶ್ಮೀರಿಗಳು ಈ ಬಗ್ಗೆ ತೀವ್ರ ಬಗೆಯ ಪ್ರತಿಭಟನೆ ನಡೆಸಿದರು. ಕಾಶ್ಮೀರದಲ್ಲಿ ಯೋಧರು ಮನೆಗೆ ಅಕ್ರಮವಾಗಿ ಪ್ರವೇಶಿಸುವುದು, ವಿಚಾರಣೆಯ ನೆಪದಲ್ಲಿ ಜನರನ್ನು ಕೊಂಡೊಯ್ಯುವುದು ಸಾಮಾನ್ಯ. AFSPA  ಕಾಯ್ದೆಯು ಅಂಥದ್ದೊಂದು ಅವಕಾಶವನ್ನು ಸೇನೆಗೆ ಒದಗಿಸಿಕೊಟ್ಟಿದೆ. ಮಾರ್ಚ್ 23-24ರ ಮಧ್ಯೆ ಸೇನೆಯು ಪತ್ರಿಬಾಲ್‍ನಿಂದ ಐವರನ್ನು ವಿಚಾರಣೆಯ ನೆಪದಲ್ಲಿ ಕೊಂಡೊಯ್ದಿತ್ತು. ಆ ಬಳಿಕ ಅವರ ಪತ್ತೆಯೇ ಇರಲಿಲ್ಲ. ಪ್ರತಿಭಟನಾಕಾರರು ಆ ಎನ್‍ಕೌಂಟರ್‍ನ ಬಗ್ಗೆ ಬಲವಾದ ಅನುಮಾನವನ್ನು ವ್ಯಕ್ತಪಡಿಸಿದರು. ಜನಾಕ್ರೋಶ ಎಷ್ಟು ತೀವ್ರತೆಯನ್ನು ಪಡೆದುಕೊಂಡಿತೆಂದರೆ, ಎನ್‍ಕೌಂಟರ್ ಗೀಡಾದವರ ಶವವನ್ನು ಸಮಾಧಿಯಿಂದ ಹೊರ ತೆಗೆಯುವಂತೆ ಸರಕಾರವೇ ಆದೇಶಿಸಿತು. ಎನ್‍ಕೌಂಟರ್ ನಕಲಿ ಎಂಬ ಅನುಮಾನಕ್ಕೆ ಬಲ ಸಿಗುತ್ತಿದ್ದಂತೆಯೇ ಇಡೀ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸಲಾಯಿತು. 2006 ಮೇಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ಸಿಬಿಐಯು, ಪ್ರಕರಣವನ್ನು ನಕಲಿ ಎನ್‍ಕೌಂಟರ್ ಎಂದು ಘೋಷಿಸಿತು. ಅಲ್ಲದೇ ಅದರಲ್ಲಿ ಭಾಗಿಯಾದ 7 ಯೋಧರನ್ನೂ ಗುರುತಿಸಿತು. ಆದರೆ ಸೇನೆ ಸಿಬಿಐ ಚಾರ್ಜ್‍ಶೀಟನ್ನೇ ಒಪ್ಪಿಕೊಳ್ಳಲಿಲ್ಲ. ತನ್ನ ಬಗ್ಗೆ ತನಿಖೆ ನಡೆಸುವುದಕ್ಕೆ ಸಿಬಿಐಗೆ ಅಧಿಕಾರ ಇಲ್ಲ ಎಂದು ಅದು ವಾದಿಸಿತು. 2012ರಲ್ಲಿ ಈ ಪ್ರಕರಣ ಸುಪ್ರೀಮ್ ಕೋರ್ಟ್‍ನಲ್ಲಿ ವಿಚಾರಣೆಗೆ ಒಳಪಟ್ಟಾಗ, ‘ತಾನೇ ವಿಚಾರಣೆ ನಡೆಸುವ ಅಥವಾ ನಾಗರಿಕ ನ್ಯಾಯಾಲಯಕ್ಕೆ ಪ್ರಕರಣವನ್ನು ಒಪ್ಪಿಸುವ’ ಆಯ್ಕೆಯ ಸ್ವಾತಂತ್ರ್ಯವನ್ನು ಕೋರ್ಟು ಸೇನೆಗೆ ಒದಗಿಸಿತು. ಸೇನೆಯು ತಾನೇ ತನಿಖೆ ಮಾಡುವುದಾಗಿ ಹೇಳಿಕೊಂಡಿತು. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎನ್‍ಕೌಂಟರ್‍ಗೀಡಾದ ವ್ಯಕ್ತಿಯೊಬ್ಬನ ತಂದೆಗೆ ಸೇನಾ ನ್ಯಾಯಾಲಯ ಸಮನ್ಸ್ ಕಳುಹಿಸಿತು. ವಿಶೇಷ ಏನೆಂದರೆ, ಆ ತಂದೆ ಆ ಎನ್‍ಕೌಂಟರ್‍ಗಿಂತ 6 ವರ್ಷಗಳ ಮೊದಲೇ ಮೃತಪಟ್ಟಿದ್ದರು. ಇಂಥ ಅಸಂಬದ್ಧಗಳ ಮಧ್ಯೆ ಸೇನೆ ವಿಚಾರಣೆಯನ್ನು ಮುಗಿಸಿ ಕಳೆದವಾರ ಜನವರಿ 23ರಂದು ತೀರ್ಪನ್ನೂ ನೀಡಿದೆ. ಆ ಎನ್‍ಕೌಂಟರ್‍ನಲ್ಲಿ ಭಾಗಿಯಾದ ಎಲ್ಲ 7 ಯೋಧರನ್ನೂ ಅದು ದೋಷಮುಕ್ತಗೊಳಿಸಿದೆಯಲ್ಲದೇ ಎನ್‍ಕೌಂಟರ್ ಅನ್ನು ಸಕ್ರಮ ಎಂದಿದೆ. ಒಂದು ರೀತಿಯಲ್ಲಿ ಇಡೀ ವಿಚಾರಣಾ ಪ್ರಕ್ರಿಯೆಯೇ ಒಂದು ಪ್ರಹಸನದಂತೆ ನಡೆದು ಹೋಗಿದೆ. ಸುಪ್ರೀಮ್ ಕೋರ್ಟ್‍ನ ಮುಂದೆ ಸಿಬಿಐನ ಚಾರ್ಜ್‍ಶೀಟ್ ಇದ್ದರೂ, ಕಾಣೆಯಾದ ಐವರು ಕಾಶ್ಮೀರಿಗಳು ಎಲ್ಲಿ ಎಂಬ ಬಹುಮುಖ್ಯ ಪ್ರಶ್ನೆ ಎದ್ದಿದ್ದರೂ ಯಾವುದೂ ಪ್ರಯೋಜನವಾಗಿಲ್ಲ. AFSPA  ಕಾಯ್ದೆಯ ಈ ಕ್ರೂರ ಮುಖವನ್ನು ಪರಿಗಣಿಸಿಯೇ - ‘ಪತ್ರಿಬಾಲ್ ಪ್ರಕರಣವನ್ನು ಮತ್ತೆ ತನಿಖೆ ಗೊಳಪಡಿಸಿ’ ಎಂದು ದಿ ಹಿಂದೂವಿನಂಥ ಪತ್ರಿಕೆಗಳು ಸಂಪಾದಕೀಯ ಬರೆದಿರುವುದು.
    ಅಷ್ಟಕ್ಕೂ, ಕ್ವಿಟ್ ಇಂಡಿಯಾ ಚಳವಳಿಯನ್ನು ಮಟ್ಟಹಾಕಲು ಬ್ರಿಟಿಷ್ ಸರಕಾರವು 1942 ಆಗಸ್ಟ್ 15ರಂದು ಜಾರಿಗೆ ತಂದ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ’ಯ (The Armed Forces Special Powers Ordinance ) ಬಹುತೇಕ ಅಂಶಗಳನ್ನೇ AFSPA  ಒಳಗೊಂಡಿದೆ ಎಂದರೆ ನೀವು ನಂಬುತ್ತೀರಾ?
    1951ರಲ್ಲಿ ನಾಗಾ ನ್ಯಾಶನಲ್ ಕೌನ್ಸಿಲ್ (NNC) ಸಂಘಟನೆಯು ಸ್ವತಂತ್ರ ನಾಗಾಲ್ಯಾಂಡ್ ರಾಷ್ಟ್ರದ ಬೇಡಿಕೆಯನ್ನಿಟ್ಟಿತು. 99% ಮಂದಿ ಸ್ವತಂತ್ರ ನಾಗಾಲ್ಯಾಂಡ್‍ಗಾಗಿ ಮತ ಚಲಾಯಿಸಿದ್ದಾರೆ ಅಂದಿತು. ಅದರಂತೆ  1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿತು. ಮಾತ್ರವಲ್ಲ, ಸರಕಾರಿ ಶಾಲೆ, ಅಧಿಕಾರಿಗಳ ಮೇಲೂ ಬಹಿಷ್ಕಾರ ಘೋಷಿಸಿತು. 1956 ಮಾರ್ಚ್ 26ರಂದು The Fedaral Government of Nagaland  ಎಂಬ ಪರ್ಯಾಯ ಸರಕಾರದ ರಚನೆಯನ್ನೂ ಮಾಡಿತು. ರಾಜ್ಯ ಸರಕಾರಕ್ಕೆ ಕೇಂದ್ರದ ಸಹಾಯವನ್ನು ಬೇಡದೇ ಬೇರೆ ದಾರಿಯಿರಲಿಲ್ಲ. ಇದನ್ನನುಸರಿಸಿ ಕೇಂದ್ರ ಸರಕಾರವು ಬ್ರಿಟಿಷ್ ಕಾಯ್ದೆಯನ್ನು ಮುಂದಿಟ್ಟುಕೊಂಡು ಕಾನೂನು ರಚಿಸಲು ಮುಂದಾಯಿತು. ಹೀಗೆ ರಚಿತವಾದ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಗೆ’ 1958 ಮೇ 22ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಸಹಿ ಹಾಕಿದರು. ಅಲ್ಲದೇ 1983 ಅಕ್ಟೋಬರ್ 6ರಂದು ಇದೇ ಕಾಯ್ದೆಯನ್ನು ಪಂಜಾಬ್ ಮತ್ತು ಚಂಡೀಗಢದಲ್ಲೂ ಜಾರಿಗೊಳಿಸಲಾಯಿತು.
   ನಿಜವಾಗಿ, ಪರಮಾಧಿಕಾರ ಎಂಬುದು ಯಾವುದೇ ವ್ಯವಸ್ಥೆಯನ್ನೂ ಹಾಳು ಮಾಡಿ ಬಿಡುತ್ತದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ 2013ರಲ್ಲಿ ಸುಪ್ರೀಮ್ ಕೋರ್ಟು ಆಯೋಗವೊಂದನ್ನು ರಚಿಸಿ ಮಣಿಪುರದಲ್ಲಿ ನಡೆದ 6 ಎನ್‍ಕೌಂಟರ್‍ಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿರುವುದಕ್ಕೆ ಈ ಪರಮಾಧಿಕಾರದ ದುರುಪಯೋಗವೇ ಕಾರಣ. ಮಾಜಿ ಚುನಾವಣಾ ಆಯುಕ್ತ ಲಿಂಗ್ಡೊ ಮತ್ತು ಇನ್ನೋರ್ವ ಪೊಲೀಸಧಿಕಾರಿ ಒಳಗೊಂಡಿದ್ದ ಈ ಆಯೋಗವು ಆ ಎನ್‍ಕೌಂಟರ್‍ಗಳನ್ನು ಬಹುತೇಕ ನಕಲಿ ಎಂದೇ ಹೇಳಿತ್ತು. ಎನ್‍ಕೌಂಟರ್‍ಗೀಡಾದವರಿಗೆ ಕ್ರಿಮಿನಲ್ ಹಿನ್ನೆಲೆ ಇದ್ದಿರಲಿಲ್ಲವೆಂದೂ ಅದು ಅಭಿಪ್ರಾಯಪಟ್ಟಿತ್ತು. ಹಾಗೆಯೇ ಜೀವನ್ ರೆಡ್ಡಿ ಆಯೋಗ, ವರ್ಮಾ ಆಯೋಗಗಳಂಥ ತನಿಖಾ ಸಮಿತಿಗಳು ರಚನೆಯಾಗಿರುವುದು ಮತ್ತು ಅವೆಲ್ಲ ಯೋಧರನ್ನು ಕಾನೂನಿನ ವ್ಯಾಪ್ತಿಗೆ ತರಬೇಕೆಂದು ಹೇಳಿರುವುದೆಲ್ಲ AFSPA  ಕಾಯ್ದೆಯ ಕ್ರೌರ್ಯವನ್ನೇ ಹೇಳುತ್ತದೆ. ಅಂದಹಾಗೆ, ದೇಶದ ಸಾರ್ವಭೌಮತೆಗೆ ಸವಾಲೊಡ್ಡುವ ಪ್ರಕರಣಗಳಿಗೆ ಸಂಬಂಧಿಸಿ ವಿಶೇಷ ಕಾಯ್ದೆ ರಚನೆಯಾಗಬೇಕಾದದ್ದು ಅಗತ್ಯವೇ ಆದರೂ ಆ ಕಾಯ್ದೆಯು ಚಳುವಳಿ ಇನ್ನಷ್ಟು ತೀವ್ರಗೊಳ್ಳುವುದಕ್ಕೆ, ನಾಗರಿಕರು ಚಳವಳಿಯೊಂದಿಗೆ ಸೇರಿಕೊಳ್ಳುವುದಕ್ಕೆ ಪ್ರೋತ್ಸಾಹ  ಕೊಡುವಂತೆ ಇರಬಾರದಲ್ಲ. ಕಾಶ್ಮೀರವಾಗಲಿ, ಮಣಿಪುರದಂಥ ಈಶಾನ್ಯ ರಾಜ್ಯಗಳಲ್ಲಾಗಲಿ
 AFSPA  ಇವತ್ತು ಸುದ್ದಿ ಮಾಡುತ್ತಿರುವುದು ಅದರ ಮನುಷ್ಯ ವಿರೋಧಿ ವರ್ತನೆಗಳಿಗಾಗಿ. ಈ ದೇಶದ ನಾಗರಿಕರಿಗಿಲ್ಲದ ಪರಮಾಧಿಕಾರ, ನ್ಯಾಯಾಂಗ ವಿನಾಯಿತಿಯನ್ನು ಪಡಕೊಂಡವರ ದುರ್ವರ್ತನೆಗಾಗಿ.
   ಪತ್ರಿಬಾಲ್ ಪ್ರಕರಣ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

No comments:

Post a Comment