Tuesday, January 28, 2014

ವಿಳಾಸವೇ ಇಲ್ಲದ ಅವರನ್ನು ಸೃಷ್ಟಿಸಿದ್ದು ತಕ್ಷಣದ ಪ್ರತಿಕ್ರಿಯೆಗಳೇ?

 1. ಜುನಾಗಢ್
 2. ನವ್‍ಸಾರಿ
 3. ನರ್ಮದಾ
 4. ಡಾಂಗ್ಸ್
  2002ರ ಗುಜರಾತ್ ಹತ್ಯಾಕಾಂಡದ ವೇಳೆ ಈ ನಾಲ್ಕು ಕ್ಷೇತ್ರಗಳಲ್ಲಿ ಹಿಂಸಾಚಾರ ಕಾಣಿಸಿಕೊಳ್ಳದೇ ಇದ್ದುದಕ್ಕೆ ಏನು ಕಾರಣ? ಹಿಂಸಾಚಾರ ಅತ್ಯಂತ ತೀವ್ರವಾಗಿದ್ದ ಆನಂದ್ ಮತ್ತು ಖೇಡಾ ಕ್ಷೇತ್ರಗಳ ಆಸು-ಪಾಸಿನಲ್ಲೇ ಈ ಕ್ಷೇತ್ರಗಳು ಇದ್ದೂ ಇಂಥದ್ದೊಂದು ಬೆಳವಣಿಗೆ ಯಾಕಾಯಿತು? ಈ ಹತ್ಯಾಕಾಂಡವು ಕ್ರಿಯೆಗೆ ಪ್ರತಿಕ್ರಿಯೆ ಎಂದಾದರೆ ಈ ಪ್ರತಿಕ್ರಿಯೆ ಕೆಲವು ನಿರ್ದಿಷ್ಟ ಕ್ಷೇತ್ರ ಮತ್ತು ಪ್ರದೇಶಗಳಲ್ಲಿ ಮಾತ್ರ ಯಾಕೆ ಕಾಣಿಸಿಕೊಂಡಿತು? ಕೆಲವು ಆಯ್ದ ಪ್ರದೇಶಗಳ ಮಂದಿ ಮಾತ್ರ ಯಾಕೆ ತಕ್ಷಣ ಪ್ರಚೋದನೆಗೊಂಡರು? ಹೀಗಿರುವಾಗ, ಕ್ರಿಯೆಗೆ ಪ್ರತಿಕ್ರಿಯೆ, ತಕ್ಷಣದ ಪ್ರಚೋದನೆ.. ಎಂಬೆಲ್ಲ ವ್ಯಾಖ್ಯಾನಗಳನ್ನು ಕೊಟ್ಟು ಈ  ಹತ್ಯಾಕಾಂಡವನ್ನು ಸರಳೀಕೃತಗೊಳಿಸುತ್ತಿರುವವರ ವಾದವನ್ನು ಒಪ್ಪಬಹುದೇ? ಅಷ್ಟಕ್ಕೂ, ಮೋದಿ ಸರಕಾರವು ಕರಸೇವಕರ ಮೃತ ದೇಹಗಳನ್ನು ಮೆರವಣಿಗೆಯಲ್ಲಿ ಅಹ್ಮದಾಬಾದ್‍ಗೆ ಕರೆತಂದಿತ್ತು. ಗುಜರಾತ್‍ಗಿಂತ ತೀರಾ ದೂರ ಇರುವ ಕರ್ನಾಟಕದ ಮಾಧ್ಯಮಗಳಲ್ಲೂ ಕಸೇವಕರ ಸಾವು ಪ್ರಮುಖ ಸುದ್ದಿಯಾಗಿ ಬಿತ್ತರವಾಗಿತ್ತು. ಅಂದರೆ, ಗೋಧ್ರಾ
ಪ್ರಕರಣವು ಬರೇ ಗುಜರಾತ್‍ನ ದುರಂತವಾಗಿಯಷ್ಟೇ ಗುರುತಿಸಿಕೊಂಡದ್ದಲ್ಲ, ಇಡೀ ದೇಶಕ್ಕೇ ಆಘಾತದ ಸುದ್ದಿಯಾಗಿತ್ತು. ಹೀಗಿರುವಾಗ, ಕನಿಷ್ಠ ಇಡೀ ಗುಜರಾತ್‍ನಲ್ಲಾದರೂ ಹಿಂಸಾತ್ಮಕ ಪ್ರತಿಕ್ರಿಯೆ ಕಾಣಿಸಿಕೊಳ್ಳಬೇಕಿತ್ತಲ್ಲವೇ?
 ಇಂಥದ್ದೊಂದು ಅನುಮಾನವನ್ನು ಆಕ್ಸ್ ಫರ್ಡ್‍ ನ  ಸಮಾಜಶಾಸ್ತ್ರಜ್ಞ ಮೈಕೆಲ್ ಬಿಗ್ಸ್ ಮತ್ತು ಭಾರತದ ಸಂಶೋಧಕ ರಾಹಿಲ್ ದತ್ತಿವಾಲರು ದಿ ಹಿಂದೂ ಪತ್ರಿಕೆಯಲ್ಲಿ ಇತ್ತೀಚೆಗೆ ವ್ಯಕ್ತಪಡಿಸಿದ್ದರು.
 ನಿಜವಾಗಿ, ಯಾವುದೇ ಹತ್ಯಾಕಾಂಡವೂ ‘ಸಹಜ' ಆಗಿರುವುದಿಲ್ಲ. ಹತ್ಯಾಕಾಂಡಗಳಿಗೆ ಅವುಗಳದ್ದೇ ಆದ ಹಿನ್ನೆಲೆ, ಯೋಜನೆ, ಗುರಿಗಳಿರುತ್ತವೆ. ಗುಜರಾತ್ ಹತ್ಯಾಕಾಂಡದ ವೇಳೆ ಜುನಾಗಢ್ ಮತ್ತು ನವ್‍ಸಾರಿ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದವರು ಬಿಜೆಪಿ ಶಾಸಕರು. ಹಾಗೆಯೇ ನರ್ಮದಾ ಮತ್ತು ಡಾಂಗ್ಸ್ ಕ್ಷೇತ್ರಗಳಲ್ಲಿ ಬಿಜೆಪಿ ತೀರಾ ದುರ್ಬಲ ಆಗಿತ್ತು. ಒಂದು ವೇಳೆ ಹತ್ಯಾಕಾಂಡವು ಗೋಧ್ರಾ ಘಟನೆಗೆ ಸಹಜ ಪ್ರತಿಕ್ರಿಯೆಯೇ ಆಗಿರುತ್ತಿದ್ದರೆ, ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಹಿಲ್ ದತ್ತಿವಾಲರು ಹೊಸ ಬಗೆಯ ಸರ್ವೇಗೆ ಮುಂದಾದರು. 1998ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳು ಮತ್ತು ಆ ಬಳಿಕದಿಂದ ಈ ವರೆಗಿನ ಅದರ ಸ್ಥಾನಗಳನ್ನು ಅವರು ವಿಶ್ಲೇಷಣೆಗೆ ಒಳಪಡಿಸಿದರು. ಹಿಂಸಾಪೀಡಿತ ಮತ್ತು ಹಿಂಸಾರಹಿತ ಕ್ಷೇತ್ರಗಳನ್ನು ತುಲನೆ ಮಾಡಿ ನೋಡಿದರು. ಈ ಹಿಂದೆ ಇದೇ ಬಗೆಯ ಮಾನದಂಡವನ್ನು ಅಳವಡಿಸಿಕೊಂಡು ಖ್ಯಾತ ಸಮಾಜ ಶಾಸ್ತ್ರಜ್ಞ ಪೌಲ್ ಬ್ರಾಸ್ ಎಂಬವರು ಅಧ್ಯಯನ ನಡೆಸಿದ್ದರು. ಭಾರತದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿ, 1. ದಿ ಪ್ರೊಡಕ್ಷನ್ ಆಫ್ ಹಿಂದೂ-ಮುಸ್ಲಿಮ್ ವಯಲೆನ್ಸ್ ಇನ್ ಕಾಂಟೆಂಪರರಿ ಇಂಡಿಯಾ 2. ಫಾರ್ಮ್ ಆಫ್ ಕಲೆಕ್ಟಿವ್ ವಯಲೆನ್ಸ್ ರಯೆಟ್ಸ್, ಪೊಗ್ರಾಮ್ಸ್ ಆಂಡ್ ಜೆನೋಸೈಡ್ ಇನ್ ಮಾಡರ್ನ್ ಇಂಡಿಯಾ, 3. ಎತ್‍ನಿಕ್ ಗ್ರೂಪ್ಸ್ ಆಂಡ್ ಸ್ಟೇಟ್.. ಮುಂತಾದ ಬಹುಪ್ರಭಾವಿ ಕೃತಿಗಳನ್ನು ಬರೆದಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಈ ಪ್ರೊಫೆಸರ್‍ರ ಸರ್ವೇ ವಿಧಾನವು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿವೆ. ದತ್ತಿವಾಲ ಈ ವಿಧಾನವನ್ನೇ ಅನುಸರಿಸಿ ಗುಜರಾತ್ ಹತ್ಯಾಕಾಂಡದ ಸತ್ಯಗಳನ್ನು ಹುಡುಕುವ ಪ್ರಯತ್ನ ಮಾಡಿದರು. ದಂಗುಬಡಿಸುವ ಸಂಗತಿ ಏನೆಂದರೆ, ಬಿಜೆಪಿ ಅಭ್ಯರ್ಥಿಗಳ ಸೋಲಿನಲ್ಲಿ ಮುಸ್ಲಿಮರ ಪಾತ್ರ ಎಲ್ಲಿ ನಿರ್ಣಾಯಕವಾಗಿತ್ತೋ ಅಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಬಿಜೆಪಿ ಪ್ರಬಲ ವಾಗಿರುವ ಕ್ಷೇತ್ರಗಳು ಹಿಂಸಾರಹಿತವಾಗಿರುವಂತೆಯೇ ಬಿಜೆಪಿ ಅಭ್ಯರ್ಥಿಗಳಿಗೆ 20ರಿಂದ 30% ಮತದಾನವಾದ ಕ್ಷೇತ್ರಗಳೂ ಹಿಂಸೆಯಿಂದ ದೂರವಿದ್ದುವು. ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಎದುರಿಸಿದ ಮತ್ತು 30-40% ಓಟು ಪಡೆದ ಕ್ಷೇತ್ರಗಳೇ ಹಿಂಸೆಯ ಕೇಂದ್ರಗಳಾಗಿದ್ದುವು. ಮಾತ್ರವಲ್ಲ, ಎಲ್ಲೆಲ್ಲಾ ಹಿಂಸಾಚಾರ ನಡೆದಿತ್ತೋ ಅಲ್ಲೆಲ್ಲಾ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆಯಲ್ಲಿ ತೀವ್ರ ಮಟ್ಟದ ಏರಿಕೆ ಕಾಣಸಿಕೊಂಡಿತ್ತು.
 ಅಷ್ಟಕ್ಕೂ, ಇಂಥದ್ದು ಕೇವಲ ಭಾರತದಲ್ಲಿ ಮಾತ್ರ ನಡೆಯುವುದಲ್ಲ.
 2007ರಲ್ಲಿ ಕೀನ್ಯಾದಲ್ಲಿ ಭೀಕರ ಹಿಂಸಾಚಾರ ನಡೆಯಿತು. ಅಧ್ಯಕ್ಷ  ಕಿಬಕಿಯವರು ಹಿಂಸಾಚಾರಕ್ಕೆ ರಾಜಕಾರಣಿ ಭಾಷೆಯಲ್ಲಿ ವ್ಯಾಖ್ಯಾನಗಳನ್ನು ಕೊಟ್ಟರು. ಪಾರ್ಟಿ ಆಫ್ ನ್ಯಾಶನಲ್ ಯೂನಿಟಿ ಮತ್ತು ಓರೇಂಜ್ ಡೆಮಾಕ್ರಟಿಕ್ ಮೂವ್‍ಮೆಂಟ್ ಪಕ್ಷಗಳ ಅಧಿಕಾರ ದಾಹದಿಂದ ಹುಟ್ಟಿಕೊಂಡ ಹಿಂಸಾಚಾರಕ್ಕೆ 1,133 ಮಂದಿ ಬಲಿಯಾದರು. ಮೂರೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ನಿರಾಶ್ರಿತರಾದರು. Spoutaneous or pre-meditated post-election violence in Kenya -  ಎಂಬ ಅಧ್ಯಯನಾಧಾರಿತ ಬರಹದಲ್ಲಿ ಆ ಹಿಂಸಾಚಾರದ ರಾಜಕೀಯ ಪ್ರಭಾವವನ್ನು ಬಿಚ್ಚಿಡಲಾಗಿದೆ. ಅಂದಹಾಗೆ, ನಿತ್ಯ ಮಾತಾಡಿ ಕುಶಲೋಪರಿ ಹಂಚಿಕೊಳ್ಳುವ ಅಕ್ಕ-ಪಕ್ಕದ ಮಂದಿ ಎಲ್ಲೋ ನಡೆದ ಒಂದು ದಿಢೀರ್ ಪ್ರಕರಣವನ್ನು ಎತ್ತಿಕೊಂಡು ಸಂಬಂಧವೇ ಇಲ್ಲದವರಂತೆ ವರ್ತಿಸುವುದನ್ನು ಹೇಗೆ ಸಹಜ ಎಂದು ಒಪ್ಪಿಕೊಳ್ಳುವುದು? ಗೋಧ್ರಾ ಪ್ರಕರಣ ಅಥವಾ ಮುಝಫರ್ ನಗರದ ಘಟನೆ ತೀರಾ ಅನಿರೀಕ್ಷಿತವಾದದ್ದು. ಅದಕ್ಕೂ ತನ್ನ ನೆರೆಮನೆಯ ಮುಸ್ಲಿಮರಿಗೂ ಸಂಬಂಧ ಇದೆ ಎಂದು ಮುಝಫರ್ ನಗರದಲ್ಲಿ ಅಥವಾ ಪಂಚಮಹಲ್, ಗುಲ್ಬರ್ಗ್ ಸೊಸೈಟಿಯ ಹತ್ಯಾಕಾಂಡದಲ್ಲಿ ಭಾಗಿಯಾದವರು ತೀರ್ಮಾನಿಸುವುದಕ್ಕೆ ಸಾಧ್ಯವೇ ಇಲ್ಲ. ಒಂದು ಬೆಳಗಾತ ನಡೆದ ಗೋಧ್ರಾ ಘಟನೆಯನ್ನು ಮುಂದಿಟ್ಟುಕೊಂಡು ತನ್ನ ನೆರೆಮನೆಯ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರಕ್ಕೆ ಗುರಿಪಡಿಸಲು ಸಾಧ್ಯವೇ? ಎಲ್ಲೋ ನಡೆದ ಕ್ರಿಯೆಗೆ ಇನ್ನೆಲ್ಲೋ ಇರುವ ಮತ್ತು ತನಗೆ ತೀರಾ ಪರಿಚಿತ ಇರುವ ವ್ಯಕ್ತಿಯ ಮೇಲೆ ಹಿಂಸಾತ್ಮಕ ಪ್ರತಿಕ್ರಿಯೆ ತೋರುವುದನ್ನು ಸಹಜ ಅನ್ನಲಾದೀತೇ?  ಒಂದು ವೇಳೆ, ಇಂಥ ಪ್ರತಿಕ್ರಿಯೆಗಳು ಸಹಜ ಎಂದಾದರೆ ಭೂಮಿಯಲ್ಲಿ ಹಿಂಸೆಯ ಹೊರತು ಬೇರೆ ಯಾವ ವಾತಾವರಣವಿದ್ದೀತು? ಅಷ್ಟಕ್ಕೂ, ರಾಜಕೀಯ ಬೆರೆತುಕೊಂಡ ಅಥವಾ ನಿರ್ದಿಷ್ಟ ಪಕ್ಷವೊಂದಕ್ಕೆ ಲಾಭ ತರಬಲ್ಲಂಥ ಘಟನೆಗಳಿಗೆ ಮಾತ್ರ ಯಾಕೆ ಹಿಂಸಾತ್ಮಕ ಪ್ರತಿಕ್ರಿಯೆಗಳು ಲಭ್ಯವಾಗುತ್ತಿವೆ? ಘಟನೆಯೊಂದರ ಭೀಭತ್ಸತೆಯನ್ನು ನೋಡಿಕೊಂಡು ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತ ವಾಗುತ್ತದೆಂದಾದರೆ, ಅತ್ಯಾಚಾರಕ್ಕೀಡಾಗಿ ಸಾವಿಗೀಡಾದ ನಿರ್ಭಯಳ ಪ್ರಕರಣದಲ್ಲೂ ಅದು ಕಾಣಿಸಿಕೊಳ್ಳಬೇಕಿತ್ತಲ್ಲವೇ? ಆ ಭೀಕರ ಕ್ರಿಯೆಗೆ ಪ್ರತಿಭಟನೆಯಂಥ ತೀರಾ ಅಹಿಂಸಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಲು ಕಾರಣವೇನು? ಅದರ ಬಳಿಕವೇ ಮುಝಫರ್ ನಗರದಲ್ಲಿ ಚುಡಾವಣೆ ಪ್ರಕರಣ ನಡೆದಿದೆ. ನಿರ್ಭಯ ಪ್ರಕರಣಕ್ಕೆ ಹೋಲಿಸಿದರೆ ಏನೇನೂ ಅಲ್ಲದ ಘಟನೆಯೊಂದು 62 ಮಂದಿಯ ಸಾವಿಗೆ ಮತ್ತು 50 ಸಾವಿರದಷ್ಟು ಮಂದಿಯ ನಿರಾಶ್ರಿತ ಬದುಕಿಗೆ ಕಾರಣವಾಗುವಷ್ಟು ಭೀಕರ ಅನ್ನಿಸಿಕೊಂಡಿತೇಕೆ? ಪ್ರತಿಕ್ರಿಯೆಯೊಂದು ಹಿಂಸಾತ್ಮಕ ಅಥವಾ ಶಾಂತವಾಗುವುದಕ್ಕೆ ಕ್ರಿಯೆ ನಡೆಸಿದವರ ಧರ್ಮ ಮತ್ತು ಹೆಸರುಗಳು ಮುಖ್ಯವಾಗುತ್ತದೆ ಎಂದಲ್ಲವೇ ಇದರರ್ಥ. ಹಾಗಾದರೆ, ಅಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಬೆಳೆಸಿದವರು ಯಾರು? ನಮ್ಮ ಶಿಕ್ಷಣ ಕ್ರಮದ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈ ಮಟ್ಟದ ಹಿಂಸಾಚಾರಕ್ಕೆ ಅದುವೇ ಮೂಲ ಕಾರಣ ಎಂದು ಯಾರೂ ಹೇಳುತ್ತಿಲ್ಲ. ಒಂದು ಧರ್ಮದವರನ್ನು ಹತ್ಯಾಕಾಂಡಕ್ಕೆ ಒಳಪಡಿಸುವಂತೆ ಪ್ರಚೋದಿಸುವ ಅಂಶಗಳು ನಮ್ಮ ಶೈಕ್ಷಕ ಪಠ್ಯಕ್ರಮಗಳಲ್ಲಿ ಈ ವರೆಗೆ ಅಳವಡಿಕೆಯಾಗಿಲ್ಲ. ಹಾಗಂತ, ಪಠ್ಯಕ್ರಮಗಳೇ ಇದಕ್ಕೆ ಮುಖ್ಯ ಕಾರಣ ಎಂದಾದರೆ, ಈ ಹಿಂಸಾಚಾರಗಳಲ್ಲಿ ವೈದ್ಯರು, ಇಂಜಿನಿಯರ್‍ಗಳು, ವಿಜ್ಞಾನಿಗಳು, ಉನ್ನತ ಅಧಿಕಾರಿಗಳು ಮುಂತಾದ ಶಿಕ್ಷಿತರು ನೇರವಾಗಿ ಪಾಲುಗೊಳ್ಳಬೇಕಿತ್ತು. ಆದರೆ ಯಾವ ಪ್ರಕರಣಗಳಲ್ಲೂ ಇಂಥವರ ನೇರ ಪಾಲುದಾರಿಕೆ ಕಾಣಿಸುತ್ತಿಲ್ಲ. ಗುಜರಾತ್ ಹತ್ಯಾಕಾಂಡ ಅಥವಾ ಇನ್ನಿತರ ಯಾವುದೇ ಹತ್ಯಾಕಾಂಡಗಳಲ್ಲೂ ಆದಿವಾಸಿಗಳು, ಹಿಂದುಳಿದ ವರ್ಗಗಳ ಸಾಮಾನ್ಯ ಮಂದಿಯೇ ಪಾಲುಗೊಂಡಿದ್ದಾರೆ. ಇವೆಲ್ಲ ಸೂಚಿಸುವುದು ಏನನ್ನು? ತಮ್ಮ ನೆರೆಯ, ಪರಿಚಿತ ಮಂದಿಯನ್ನೇ ಹತ್ಯೆ ಮಾಡುವಷ್ಟು, ಅತ್ಯಾಚಾರ ಮಾಡಿ ಹೆಮ್ಮೆ ಪಡುವಷ್ಟು ಹೀನ ಮಟ್ಟಕ್ಕೆ ಇವರನ್ನು ತಲುಪಿಸಿದ್ದು ಯಾರು? ಅವರ ಉದ್ದೇಶವೇನು?
 ಯಾವುದೇ ಹತ್ಯಾಕಾಂಡ ಬರೇ ಸಾವು-ನೋವುಗಳನ್ನಷ್ಟೇ ಸೃಷ್ಟಿಸುವುದಲ್ಲ. ಒಂದು ದೊಡ್ಡ ಜನಸಮೂಹದ ಐಡೆಂಟಿಟಿಯನ್ನೇ ಅದು ಕಿತ್ತುಕೊಂಡು ಬಿಡುತ್ತದೆ. ಹಿಂಸಾಚಾರ ಸ್ಫೋಟಿಸಿದ ಬೆನ್ನಿಗೇ ಜನರ ವಲಸೆ ಪ್ರಾರಂಭವಾಗುತ್ತದೆ. ಹಾಗೆ ವಲಸೆ ಹೋಗುವವರಿಗೆ ಮನೆ, ಬಟ್ಟೆ, ಸಂಪತ್ತು ಸಹಿತ ಏನನ್ನೂ ಒಯ್ಯಲಾಗುವುದಿಲ್ಲ. ಹಾಗೆ ಹೋಗುವವರಲ್ಲಿ ಗರ್ಭಿಣಿಯರು, ಬಾಣಂತಿಯರು, ರೋಗಿಗಳು, ವೃದ್ಧರು, ಮಕ್ಕಳು.. ಎಲ್ಲರೂ ಇರುತ್ತಾರೆ. ವಲಸೆ ಹೋಗುವಾಗ ನಿರ್ದಿಷ್ಟ ಗುರಿಯೂ ಇರುವುದಿಲ್ಲ. ಅಂತೂ ಬದುಕಿ ಉಳಿಯುವುದಕ್ಕಾಗಿ ಎಲ್ಲೋ ಟೆಂಟು ಹಾಕುತ್ತಾರೆ. ಅಲ್ಲಿ ಶುದ್ಧ ನೀರು, ಆಹಾರ, ಶೌಚಾಲಯ, ಔಷಧ.. ಯಾವುದರ ವ್ಯವಸ್ಥೆಯೂ ಇರುವುದಿಲ್ಲ. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ.. ಎಲ್ಲವನ್ನೂ ಕಳಕೊಂಡ ಸಾವಿರಾರು ಮಂದಿಯ ಗುಂಪಿಗೆ ಸರಕಾರ ಎಷ್ಟೇ ನೆರವಿನ ವಾಗ್ದಾನ ಮಾಡಿದರೂ ಒಂದು ಹಂತದ ಬಳಿಕ ವಲಸಿಗರು ಒಂಟಿಯಾಗುತ್ತಾ ಹೋಗುತ್ತಾರೆ. ಅವರು ನಿರಾಶ್ರಿತ ಶಿಬಿರಗಳಲ್ಲಿ ಹೆಚ್ಚು ಸಮಯ ಠಿಕಾಣಿ ಹೂಡುವುದನ್ನು ಸರಕಾರವೂ ಇಚ್ಛಿಸುವುದಿಲ್ಲ. ಯಾಕೆಂದರೆ, ತನ್ನದೇ ಪ್ರಜೆಗಳು ನಿರಾಶ್ರಿತ ಶಿಬಿರಗಳಲ್ಲಿ ಬದುಕುವುದೆಂದರೆ ಯಾವ ಸರಕಾರಕ್ಕೇ ಆಗಲಿ ಅದು ಕಪ್ಪು ಚುಕ್ಕೆ. ಅವರನ್ನು ಎತ್ತಿಕೊಂಡು ವಿರೋಧ ಪಕ್ಷಗಳು ರಾಜಕೀಯ ಮಾಡಬಹುದು. ಮಾಧ್ಯಮಗಳು ಸರಕಾರದ ವೈಫಲ್ಯಕ್ಕೆ ಪುರಾವೆಯಾಗಿ ಆ ಶಿಬಿರಗಳನ್ನು ತೋರಿಸಬಹುದು. ಆದ್ದರಿಂದ ಒಂದಷ್ಟು ಪರಿಹಾರವನ್ನು ಘೋಷಿಸಿ ಅವರನ್ನು ಶಿಬಿರದಿಂದ ಎತ್ತಿ ಹೊರಹಾಕಲಾಗುತ್ತದೆ. ಹೀಗೆ ಮೊದಲು ತನ್ನ ಊರಿನಿಂದ ಬಳಿಕ ನಿರಾಶ್ರಿತ ಶಿಬಿರಗಳಿಂದ ಹೊರಬೀಳುವ ಮಂದಿ ಅಂತಿಮವಾಗಿ ಎಲ್ಲೆಲ್ಲೋ ಟೆಂಟು ಹಾಕಿ ಬದುಕತೊಡಗುತ್ತಾರೆ. ಅವರಿಗೆ ತಮ್ಮದೆಂದು ಹೇಳಿಕೊಳ್ಳುವುದಕ್ಕೆ ಸರಿಯಾದ ಐಡೆಂಟಿಟಿಯೇ ಇರುವುದಿಲ್ಲ. ರೇಶನ್ ಕಾರ್ಡ್, ಗುರುತಿನ ಚೀಟಿ, ವಿಳಾಸ.. ಯಾವುದೂ ಇರುವುದಿಲ್ಲ. ಮಕ್ಕಳಿಗೆ ಶಿಕ್ಷಣವೂ ಇರುವುದಿಲ್ಲ. ಒಂದಷ್ಟು ಸಮಯ ಒಂದು ಕಡೆಯಾದರೆ ಇನ್ನೊಂದಷ್ಟು ಸಮಯ ಇನ್ನೊಂದು ಕಡೆ. ಒಂದು ವೇಳೆ ಈ ದೇಶದ ಸ್ಲಂಗಳ ಮೂಲವನ್ನು ಹುಡುಕ ಹೊರಟರೆ ಇಂಥ ನೂರಾರು ಕತೆಗಳು ಸಿಗಬಲ್ಲುದು.
 ಮುಝಫರ್ ನಗರದ ನಿರಾಶ್ರಿತ ಶಿಬಿರಗಳನ್ನು ಉತ್ತರ ಪ್ರದೇಶ ಸರಕಾರವು ಇತ್ತೀಚೆಗೆ ಬುಲ್ಡೋಜರ್‍ನಿಂದ ಕೆಡವಿದ ಬಳಿಕ ದಿಕ್ಕಾಪಾಲಾದ ಸಂತ್ರಸ್ತರು ರಸ್ತೆಯ ಬದಿ, ರೈಲ್ವೆ ನಿಲ್ದಾಣದ ಸಮೀಪ ಅಲ್ಲಲ್ಲಿ ಶಿಬಿರಗಳನ್ನು ಹಾಕಿಕೊಂಡಿದ್ದಾರೆ ಎಂಬ ವರದಿಗಳೇ ಇವಕ್ಕೆ ಪುರಾವೆಯಾಗಿವೆ.

No comments:

Post a Comment