Monday, September 23, 2013

ಅಂಥ ವಿಚಾರಧಾರೆ ಹಿಟ್ಲರ್ ನ ಜರ್ಮನಿಯನ್ನಲ್ಲದೆ ಗಾಂಧೀಜಿಯ ಭಾರತವನ್ನು ನಿರ್ಮಿಸಬಲ್ಲುದೆ?

ಜರ್ಮನಿ
ಇಟಲಿ
   ಫ್ಯಾಸಿಝಮ್‍ನ ವಿಶ್ಲೇಷಣೆಗೆ ಜಗತ್ತು ಯಾವಾಗಲೂ ಉದಾಹರಣೆಯಾಗಿ ಎತ್ತಿಕೊಳ್ಳುವುದು ಈ ಎರಡು ದೇಶಗಳನ್ನು. ಹಿಟ್ಲರ್ ಜರ್ಮನಿಯಲ್ಲಿದ್ದ. ಮುಸೊಲಿನಿ ಇಟಲಿಯನ್ನು ಆಳಿದ. ಇವರಿಬ್ಬರ ಮನಸ್ಥಿತಿ, ವಿಚಾರಧಾರೆ ಎಷ್ಟು ಅಪಾಯಕಾರಿಯಾಗಿ ತ್ತೆಂದರೆ, ಎರಡನೇ ವಿಶ್ವಯುದ್ಧದ ಕೇಂದ್ರ ಬಿಂದು ಇವರೇ. ಹಿಟ್ಲರ್ ಜರ್ಮನಿಯಲ್ಲಿ ಆರ್ಯನ್ ಜನಾಂಗವಾದವನ್ನು ಪ್ರತಿಪಾದಿಸಿದ. ತಾನು ಸಸ್ಯಾಹಾರಿಯಾಗಿರುವುದನ್ನು ಎಲ್ಲರಿಗೂ ಗೊತ್ತುಪಡಿಸಿದ. ತನ್ನ ಜನಾಂಗಕ್ಕಾಗಿ ಹೆಮ್ಮೆಪಟ್ಟ. ಜರ್ಮನಿಯ ಮಂದಿ ನಿಧಾನವಾಗಿ ಹಿಟ್ಲರ್‍ನನ್ನು ತಮ್ಮ ಜನಾಂಗದ ವ್ಯಕ್ತಿಯಾಗಿ ಮತ್ತು ಆ ಕಾರಣದಿಂದಲೇ ತಾವು ಸುರಕ್ಷಿತರು ಎಂದು ಅಂದುಕೊಳ್ಳುವುದಕ್ಕೆ ತೊಡಗಿದರು. ಅವರು ಸಹಜವಾಗಿ ಆರ್ಯನ್ ಜನಾಂಗವಾದದಲ್ಲಿ ಧ್ರುವೀಕರಣಗೊಂಡರು. ಜೊತೆಜೊತೆಗೇ ಅನಾರ್ಯರ ಬಗ್ಗೆ ಒಂದು ರೀತಿಯ ದ್ವೇಷವೂ ಇಂಜೆಕ್ಟ್ ಆಗತೊಡಗಿತು. ಅದು ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸಿತು. ಈ ದೇಶದ ಪ್ರತಿ ಸಮಸ್ಯೆಗೂ ಅನಾರ್ಯರು ಕಾರಣ ಎಂಬ ಬೀಜ ಮೊಳಕೆಯೊಡೆದು ಮರವಾಗಿ ಹೂ ಬಿಡಲು ಪ್ರಾರಂಭಿಸಿದ ಬಳಿಕ ಜರ್ಮನಿ ಪೂರ್ಣ ಪ್ರಮಾಣದಲ್ಲಿ ಹಿಟ್ಲರ್‍ನದ್ದಾಯಿತು. ಆ ಬಳಿಕ ಹಿಟ್ಲರ್ ತನ್ನನ್ನು ವಿರೋಧಿಸಿದ ಆರ್ಯನ್ ಕಮ್ಯುನಿಸ್ಟರನ್ನು ಹಿಂಸಿಸಿದಾಗಲೂ ಜನರು ಮಾತಾಡಲಿಲ್ಲ. ಎಲ್ಲಿಯವರೆಗೆಂದರೆ, ಹಿಟ್ಲರ್‍ನಿಂದ ಸಾಮೂಹಿಕ ಹತ್ಯಾಕಾಂಡ ನಡೆಯುತ್ತಿದ್ದರೂ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ನಿಜವಾಗಿ, ಫ್ಯಾಸಿಝಮ್‍ನ ಕಾರ್ಯ ಚಟುವಟಿಕೆಯೇ ಹೀಗೆ. ಅದು, ‘ಹತ್ಯಾಕಾಂಡಗಳಲ್ಲಿ ಪಾಲುಗೊಳ್ಳಿ’ ಎಂದು ಜನರಿಗೆ ನೇರವಾಗಿ ಕರೆ ಕೊಡುವುದಿಲ್ಲ. ಆದರೆ ಸಮಾಜವನ್ನು ಧರ್ಮದ ಆಧಾರದಲ್ಲಿ ಧ್ರುವೀಕರಣಗೊಳಿಸಿ, ಜನರು ಹತ್ಯಾಕಾಂಡದಲ್ಲಿ ಭಾಗವಹಿಸುವುದಕ್ಕೆ ಪ್ರೇರಕವಾಗುವ ಯೋಗ್ಯ ವಾತಾವರಣವನ್ನು ನಿರ್ಮಿಸುತ್ತದೆ. ಮೋದಿ ಮತ್ತು ಬಳಗವು ಈ ದೇಶದಲ್ಲಿ ಸದ್ಯ ನಿರ್ವಹಿಸುತ್ತಿರುವ ಪಾತ್ರ ಇದುವೇ. 20%ಕ್ಕಿಂತ ಕಡಿಮೆ ಇರುವ ಮುಸ್ಲಿಮರ ವಿರುದ್ಧ 80%ದಷ್ಟಿರುವ ಬೃಹತ್ ವರ್ಗವನ್ನು ಧ್ರುವೀಕರಣಗೊಳಿಸುವ ಕನಸಿನೊಂದಿಗೆ ಈ ಬಳಗವು ಅಖಾಡಕ್ಕೆ ಇಳಿದಿದೆ. ಗುಜರಾತ್‍ನಲ್ಲಿ ಯಶಸ್ವಿಯಾಗಿರುವ ಈ ತಂತ್ರವನ್ನು ಅಲ್ಲಿಂದ ಹೊರಗೂ ಪ್ರಯೋಗಿಸಿ ನೋಡುವ ಪ್ರಯತ್ನಗಳು ಈಗಾಗಲೇ ನಡೆದಿವೆ. ‘2002 ಫೆ. 27ರಂದು ಗೋಧ್ರಾದಲ್ಲಿ ಸಬರ್ಮತಿ ರೈಲಿಗೆ ಬೆಂಕಿ ಹತ್ತಿಕೊಳ್ಳುವ 5 ದಿನಗಳ ಮೊದಲೇ ಗೋಧ್ರಾ ರೈಲು ನಿಲ್ದಾಣದಲ್ಲಿ ಮುಸ್ಲಿಮರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಬೆಳಗ್ಗೆ 3ರ ಬಳಿಕ ಗಡ್ಡದಾರಿ ಮುಸ್ಲಿಮರು ಕಾಣಿಸಿ ಕೊಳ್ಳದಂತೆ ವ್ಯವಸ್ಥೆ ಮಾಡಲಾಗಿತ್ತು.’ ಯಾಕೆಂದರೆ ಅಯೋಧ್ಯೆಯಿಂದ ಹಿಂತಿರುಗುವ ಕರಸೇವಕರು ಗಡ್ಡವನ್ನು ಕಂಡು ಉರಿದು ಬಿಟ್ಟಾರೆಂಬ ಅಂಜಿಕೆ. ‘ಆದ್ದರಿಂದಲೇ ಕರಸೇವಕರು ಇದ್ದ ಸಬರ್ಮತಿ ರೈಲಿಗೆ ಫೈಜಾಬಾದ್‍ನಲ್ಲಿ ಬುರ್ಖಾಧಾರಿ ಮಹಿಳೆಯೋರ್ವರು ಹತ್ತಿದಾಗ ಬುರ್ಖಾ ಕಳಚುವಂತೆ ಒತ್ತಡ ಹೇರಲಾಗಿತ್ತು’ (ದಿ ಹಿಂದೂ 2013 ಸೆ. 19). ಅಷ್ಟಕ್ಕೂ,
   ದಾಡಿಯನ್ನು ಕಂಡರೆ ಕರಸೇವಕರಿಗೆ ಸಿಟ್ಟಾದರೂ ಯಾಕೆ ಬರುತ್ತದೆ? ಅಯೋಧ್ಯೆಯಲ್ಲಿ ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಹಿಂತಿರುಗುವ ಕರಸೇವಕರಲ್ಲಿ ಮುಸ್ಲಿಮರನ್ನು ದ್ವೇಷಿಸುವಷ್ಟು ಅಸಹನೆಯಿರುತ್ತದೆ ಎಂದು ಒಂದು ವ್ಯವಸ್ಥೆ ನಂಬಬೇಕಾದರೆ, ಅದಕ್ಕೆ ಕಾರಣಗಳು ಏನು? ಯಾವ ಆಧಾರದಲ್ಲಿ? ‘ಎಲ್ಲ ಸಮಸ್ಯೆಗಳ ಮೂಲ ಮುಸ್ಲಿಮರೇ’ ಎಂಬ ಫ್ಯಾಸಿಸ್ಟ್ ವಿಚಾರಧಾರೆಯನ್ನು ಕರಸೇವಕರ ಸಹಿತ ಗುಜರಾತ್‍ನಾದ್ಯಂತ ಯಶಸ್ವಿಯಾಗಿ ಬಿತ್ತಲಾಗಿದೆ ಎಂಬುದರ ಸೂಚನೆಯಲ್ಲವೇ ಇದು? ಗಡ್ಡ, ಟೋಪಿ, ಬುರ್ಖಾಗಳೆಲ್ಲ ಒಂದು ಸಮುದಾಯದ ಐಡೆಂಟಿಟಿ. ಅದನ್ನು ಸಹಿಸಿಕೊಳ್ಳುವ ವಾತಾವರಣ ಒಂದು ರಾಜ್ಯದಲ್ಲಿ ಇಲ್ಲ ಎಂದರೆ ಆ ರಾಜ್ಯದಲ್ಲಿರುವ ವಿಚಾರಧಾರೆಯಾದರೂ ಯಾವುದು? ಹಾಗಂತ ಕರಸೇವಕರೇನೂ ಜರ್ಮನಿ, ಇಟಲಿಯಿಂದ ಬರುವುದಲ್ಲವಲ್ಲ. ಒಂದೇ ರಾಜ್ಯದ ಜನರ ಮಧ್ಯೆ ಈ ಮಟ್ಟದ ವಿಭಜನೆಯನ್ನು ಮಾಡಿಟ್ಟದ್ದು ಯಾವ ವಿಚಾರಧಾರೆ? ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಸಂಘ ಪರಿವಾರದ ಪ್ರಯತ್ನವನ್ನು 1990ರಲ್ಲಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್‍ರು ವಿಫಲಗೊಳಿಸಿದಾಗ, ಮುಲಾಯಂರನ್ನು ಇದೇ ಬಿಜೆಪಿ, ‘ಮೌಲಾನಾ ಸಿಂಗ್’ ಎಂದು ಹಂಗಿಸಿತ್ತು. ಗುಜರಾತ್‍ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಸದ್ಭಾವನಾ ಯಾತ್ರೆಯಲ್ಲಿ ಮೌಲಾನರು ಕೊಟ್ಟ ಟೋಪಿ ಧರಿಸಲು ಮೋದಿ ನಿರಾಕರಿಸಿದ್ದರು. ಗಡ್ಡ, ಟೋಪಿ, ಮೌಲಾನರನ್ನೆಲ್ಲ ಮೋದಿ ಮತ್ತು ಬಳಗ ಧಾರಾಳ ಕುಚೇಷ್ಟೆಗೆ ಬಳಸಿಕೊಂಡಿದೆ. ವ್ಯಂಗ್ಯವಾಗಿ ಇರಿದಿದೆ. ಭಯೋತ್ಪಾದನೆಯ ಸಂಕೇತವಾಗಿ ಪ್ರತಿಬಿಂಬಿಸಿದೆ. ಭಾರತೀಯ ಮುಸ್ಲಿಮರು ಇಲ್ಲಿನ ಸಂಸ್ಕøತಿ, ಹೆಸರು, ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ಭಾರತೀಯತೆ ಮೆರೆಯಬೇಕೆಂದು ಸಂಘಪರಿವಾರ ಆಗಾಗ ಆಗ್ರಹಿಸುತ್ತಲೇ ಬಂದಿದೆ. ನಿಮ್ಮ ಪೂರ್ವಜರು ಹಿಂದೂಗಳು ಎಂದೂ ಅದು ನೆನಪಿಸುತ್ತಿದೆ. ಆದರೆ ಇದೇ ಪರಿವಾರದ ಕಣ್ಮಣಿ ಮೋದಿಯು, ತನ್ನ ರಾಲಿಗಳಲ್ಲಿ ಟೋಪಿ, ಗಡ್ಡ, ಬುರ್ಖಾ ಧರಿಸಿದ ಮುಸ್ಲಿಮ್ ಸ್ತ್ರೀ-ಪುರುಷರನ್ನು ಕರೆತಂದು ಸಭೆಯ ಮುಂಭಾಗದಲ್ಲಿ ಕೂರಿಸುತ್ತಿದ್ದಾರೆ. ಇಷ್ಟಿದ್ದೂ, ಸಂಸ್ಕøತಿಯ ಬಗ್ಗೆ ಮಾತಾಡುವ ಸಂಘಪರಿವಾರ ಮೌನವಾಗಿದೆಯಲ್ಲ, ಯಾಕೆ? ‘ಬುರ್ಖಾ ಸೆಕ್ಯುಲರಿಸಮ್’ ಎಂದು ವ್ಯಂಗ್ಯವಾಡಿದ್ದ ಮೋದಿ ಇದೀಗ ಅದೇ ಬುರ್ಖಾವನ್ನು ನೆಚ್ಚಿಕೊಂಡಿರುವುದನ್ನು ಯಾಕೆ ಮೋದಿ ಬೆಂಬಲಿಗರು ಪ್ರಶ್ನಿಸುತ್ತಿಲ್ಲ? ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸುವ ಮುಲಾಯಂರನ್ನು, ಟೋಪಿ ಹಾಕಿಕೊಳ್ಳುವ ನಿತೀಶ್‍ರನ್ನು ‘ಸೋಗಲಾಡಿ ಸೆಕ್ಯುಲರಿಸ್ಟ್ ಗಳು’ ಎಂದೆಲ್ಲಾ ಮೂದಲಿಸುವ ಮೋದಿ ಬ್ರಿಗೇಡ್‍ಗಳು ಸುಮ್ಮನಿರುವುದೇಕೆ? ಒಂದು ವೇಳೆ, ‘ಬುರ್ಖಾ, ಗಡ್ಡ, ಟೋಪಿಯೊಂದಿಗೆ ರಾಲಿಗೆ ಬನ್ನಿ..’ ಎಂಬ ಕರೆಯನ್ನು ಮೋದಿಯ ಬದಲು ರಾಹುಲ್ ಗಾಂಧಿಯೋ ಸೋನಿಯಾರೋ ನೀಡುತ್ತಿದ್ದರೆ ಮೋದಿ ಅದನ್ನು ಹೇಗೆ ವ್ಯಾಖ್ಯಾ ನಿಸುತ್ತಿದ್ದರು? ಅವರ ಅಭಿಮಾನಿಗಳು ಫೇಸ್‍ಬುಕ್, ಟ್ವೀಟರ್‍ಗಳಲ್ಲಿ ಅಬ್ಬರಿಸುವ ರೀತಿ ಹೇಗಿರುತ್ತಿತ್ತು? ಮೋದಿ ಹೇಳಿದರೆ ಸಹ್ಯ ಅನ್ನಿಸುವುದೂ ಅದನ್ನೇ ರಾಹುಲ್ ಹೇಳಿದರೆ ಅಸಹ್ಯ ಅನ್ನಿಸುವುದೆಲ್ಲ ಯಾವ ಮನಸ್ಥಿತಿಯ ಪ್ರತಿಬಿಂಬ? ನಿಜವಾಗಿ, ಮೋದಿಗೆ ಬಹು ಸಂಖ್ಯಾತರನ್ನು ಬಿಟ್ಟು ಉಳಿದವರೊಂದಿಗೆ ಹೇಗೆ ಬೆರೆಯಬೇಕು ಎಂಬ ಬಗ್ಗೆಯೇ ಗೊಂದಲವಿದೆ. ಗಡ್ಡ, ಟೋಪಿ, ಪೈಜಾಮದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಎದುರಾದರೆ ಹೇಗೆ ವಂದಿಸಬೇಕು, ಎಷ್ಟು ಅಂತರ ಕಾಯ್ದುಕೊಳ್ಳಬೇಕು, ಯಾವ ಭಾಷೆಯಲ್ಲಿ ಮಾತಾಡಬೇಕು, ಎಷ್ಟು ಪರ್ಸೆಂಟ್ ನಗಬೇಕು, ಯಾವ ಭಂಗಿಯಲ್ಲಿ ಕ್ಯಾಮರಾಕ್ಕೆ ಫೋಸು ಕೊಡಬೇಕು.. ಎಂಬಿತ್ಯಾದಿಗಳು ಅವರನ್ನು ತೀವ್ರವಾಗಿ ಕಾಡುತ್ತಿರುವಂತೆ ಕಾಣುತ್ತಿದೆ. ಯಾಕೆಂದರೆ ಅವರ ವರ್ಚಸ್ಸು ಅಡಗಿರುವುದೇ ಮುಸ್ಲಿಮರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬ ಆಧಾರದಲ್ಲಿ. ‘ಬುರ್ಖಾ ಸೆಕ್ಯುಲರಿಸಮ್’, ‘ನಾಯಿಕುನ್ನಿ’, ‘ಕ್ರಿಯೆ-ಪ್ರತಿಕ್ರಿಯೆ’..ಗಳೇ ನಿಜವಾದ ಮೋದಿ. ಅದರ ಹೊರತಾದ ಮೋದಿಯನ್ನು ಅವರ ಅಭಿಮಾನಿಗಳು ಇಷ್ಟಪಡುವ ಸಾಧ್ಯತೆ ಇಲ್ಲ. ಇದು ಮೋದಿಗೂ ಗೊತ್ತು. ಆದ್ದರಿಂದ, ಮುಖ್ಯ ಮಂತ್ರಿ ಮೋದಿಯು ಪ್ರಧಾನಮಂತ್ರಿ ಮೋದಿಯಾಗಿ ಬದಲಾದರೂ ಅವರ ಮನಃಸ್ಥಿತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಅಗತ್ಯ ಕಂಡು ಬಂದಾಗ ಕಾರಿನಡಿಗೆ 'ನಾಯಿಕುನ್ನಿ'ಯನ್ನು ಬೀಳಿಸಿ ಸಾಯಿಸಲು ಅವರು ಶ್ರಮಿಸಿಯಾರೇ ಹೊರತು ರಕ್ಷಿಸಲಲ್ಲ. ಅವರಲ್ಲಿ ತನ್ನದೇ ರಾಷ್ಟ್ರದ ಮನುಷ್ಯರ ಬಗ್ಗೆಯೇ ಗೊಂದಲಪೂರಿತ ನಿಲುವು ಇದೆ. ಅಲ್ಲದೇ ಇವರ ಅಭಿಮಾನಿಗಳೆನಿಸಿಕೊಂಡವರ ಭಾಷೆ, ಬರಹ, ಆವೇಶವನ್ನು ನೋಡಿದರಂತೂ ದಿಗಿಲಾಗುತ್ತದೆ. ಇವರನ್ನು ಮುಂದಿಟ್ಟುಕೊಂಡು ಮೋದಿಯನ್ನು ತೂಗಿದರಂತೂ, ಮೋದಿಯ ಕೈಯಲ್ಲಿ ಭಾರತವು ಹಿಟ್ಲರ್‍ನ ಜರ್ಮನಿಯಲ್ಲದೇ ಗಾಂಧೀಜಿಯ ಭಾರತವಂತೂ ಆಗಲಾರದು ಅನ್ನಿಸುತ್ತದೆ.
   ಇತ್ತೀಚೆಗೆ ಫೇಸ್‍ಬುಕ್ ಗೆಳೆಯರೊಬ್ಬರು ಒಂದು ಘಟನೆಯನ್ನು ಹೀಗೆ ಹಂಚಿಕೊಂಡಿದ್ದರು:
ನಾನು ನನ್ನ ನವಿಲು ಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಫ್ಲೆಕ್ಸ್  ಪ್ರಿಂಟ್ ಹಾಕಿಸುತ್ತಿದ್ದೆ. ಒಂದಿಬ್ಬರು ಕಾಲೇಜು ಹುಡುಗರು ಮೋದಿಯ ಹುಟ್ಟು ಹಬ್ಬಕ್ಕೆ ಫ್ಲೆಕ್ಸ್  ಮಾಡಿಸುತ್ತಿದ್ದರು. ಮೋದಿಯ ಜೊತೆಗೆ ಗಾಂಧೀಜಿಯ ಫೋಟೋವನ್ನೂ ಹಾಕಿಸುತ್ತಿದ್ದರು. ನಾನು ಕೇಳಿದೆ, ‘ಗಾಂಧಿ ಯಾರು ಗೊತ್ತಾ?’ ‘ಓಹ್ ಸಾರ್, ನಮ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟೋರು’ ಎಂದು ಖುಷಿಯಾಗಿ ಹೇಳಿದ ಒಬ್ಬ. ‘ಸರಿ, ಮೋದಿ ಯಾರು ಗೊತ್ತಾ’ ಅಂದೆ. ‘ಆ ಕಿತಾಪತಿ ಮಾಡ್ತಿರೋ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂತಲೇ ಹುಟ್ಟಿರೋ ಮಹಾನ್ ವ್ಯಕ್ತಿ’ ಎಂದ. ದಂಗಾದ ನಾನು, 'ಅದು ಹೇಗೆ ಬುದ್ಧಿ ಕಲಿಸ್ತಾರಪ್ಪ ನಿಮ್ಮ ಮೋದಿ' ಅಂದರೆ, 'ನೋಡಿ ಸರ್, ಗೆದ್ದ ತಕ್ಷಣ ಯುದ್ಧ ಮಾಡೇ ಮಾಡ್ತಾರೆ..' ಅಂದ.
   ಮೋದಿಯ ಬಗ್ಗೆ ಜನರಲ್ಲಿ ಒಂದು ಬಗೆಯ ಭ್ರಮೆ, ಕುತೂಹಲ ಇದೆ. ಅವರು ಪಾಲ್ಗೊಳ್ಳುವ ಸಣ್ಣ ಸಭೆಯನ್ನೂ ಲೈವ್ ಆಗಿ ತೋರಿಸುವ ಮಾಧ್ಯಮಗಳೇ ಈ ಭ್ರಮೆ ಹರಡುವಲ್ಲಿ ಪ್ರಮುಖ ಪಾತ್ರಧಾರಿಗಳು. ಅವರನ್ನು ರಾಂಬೋ ಆಗಿ ಹೊತ್ತುಕೊಂಡು ತಿರುಗಾಡುವ ಅಭಿಮಾನಿಗಳಿಗೆ ಅವರ ಬಾಂಬೂ ಕ್ರೇಜೇ. ಹತ್ಯಾಕಾಂಡವೂ ಕ್ರೇಜೇ. ಅಷ್ಟಕ್ಕೂ, ಈ ದೇಶದಲ್ಲಿರುವುದು ಅಮೇರಿಕನ್ ಮಾದರಿಯ ಅಧ್ಯಕ್ಷೀಯ ಪದ್ಧತಿಯಲ್ಲವಲ್ಲ. ಮೋದಿ v/s ರಾಹುಲ್ ಗಾಂಧಿ ಎಂಬ ಮಾಧ್ಯಮ ಹುಟ್ಟು ಹಾಕಿರುವ ಚರ್ಚೆಯು ಅಮೇರಿಕಕ್ಕೆ ಸೂಕ್ತವೇ ಹೊರತು ಭಾರತಕ್ಕಲ್ಲ. ಆದರೆ ಮೋದಿಯನ್ನು ಪ್ರಧಾನಿ ಮಾಡಿಯೇ ಸಿದ್ಧ ಎಂದು ಹಠ ತೊಟ್ಟಿರುವ ಕಾರ್ಪೊರೇಟ್ ವಲಯವು ಪ ಕ್ಷ  ಆಧಾರಿತವಾಗಿ ಆಗಬೇಕಾಗಿದ್ದ ಚರ್ಚೆಯನ್ನು ವ್ಯಕ್ತಿ ಆಧಾರಿತವಾಗಿ ಮಾರ್ಪಡಿಸಿಬಿಟ್ಟಿವೆ. ಹಾಗಂತ, ಓರ್ವ ಪ್ರಧಾನಿಗೆ ಇರಬೇಕಾದ ಅರ್ಹತೆಗಳೇನು ಎಂದು ಚರ್ಚಿಸುವುದು ತಪ್ಪು ಎಂದಲ್ಲ. ಹಾಗೇನಾದರೂ ಗಂಭೀರ ಚರ್ಚೆಯೊಂದು ನಡೆದರೆ ಅಲ್ಲಿ ಮೋದಿಗಿಂತ ರಾಹುಲ್ ಗಾಂಧಿಯೇ ಸೂಕ್ತ ಎಂದು ವ್ಯಕ್ತವಾಗಬಹುದು. ಯಾಕೆಂದರೆ, ಪ್ರಧಾನಿಗಿರುವ ಅರ್ಹತೆ ಬಾಂಬ್ ಹಾಕುವುದು, ಹತ್ಯಾಕಾಂಡ ನಡೆಸುವುದು, ಟಾಟಾ-ಅದಾನಿಗಳಿಗೆ ಭೂಮಿ ಬಿಟ್ಟು ಕೊಡುವುದೇ ಅಲ್ಲವಲ್ಲ. ರಾಜ್ಯಗಳ ಸಮಗ್ರ ಅಭಿವೃದ್ಧಿಯ ಪಟ್ಟಿಯಲ್ಲಿ ಗುಜರಾತ್‍ಗೆ 5ಕ್ಕಿಂತ ಕೆಳಗಿನ ಸ್ಥಾನವಿದೆಯೆಂಬುದು ಈಗ ಎಲ್ಲರಿಗೂ ಗೊತ್ತು. ಆದರೆ ಮೊದಲ 5 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇಲ್ಲದ ಜನಪ್ರಿಯತೆಯನ್ನು ಮೋದಿ ಮಾಧ್ಯಮಗಳ ಮುಖಾಂತರ ಪಡಕೊಂಡಿದ್ದಾರೆ. ಈ ಮಾಧ್ಯಮ ತಂತ್ರವನ್ನು ಮೋದಿ ಬಳಸಿಕೊಳ್ಳದೇ ಇರುತ್ತಿದ್ದರೆ ಇವತ್ತು ನಿತೀಶ್, ಚೌಹಾನ್, ಮಾಣಿಕ್ ಸರ್ಕಾರ್‍ಗಳೆಲ್ಲ ಮುಂಚೂಣಿ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದರು. ಅಂದಹಾಗೆ, ಕೇವಲ ಜನಪ್ರಿಯತೆಯೊಂದೇ ಒಂದು ದೇಶದ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಅರ್ಹತೆ ಎಂದಾದರೆ ಅಮಿತಾಬ್ ಬಚ್ಚನ್, ತೆಂಡುಲ್ಕರ್‍ಗಳೆಲ್ಲ ಅಭ್ಯರ್ಥಿಗಳಾಗುತ್ತಿದ್ದರಲ್ಲವೇ? ಜನಪ್ರಿಯತೆಗಿಂತ ಆಚೆ ಕೆಲವು ಮಾನವೀಯ ಗುಣಗಳು ಓರ್ವ ಅಭ್ಯರ್ಥಿಯಲ್ಲಿರ
ಹಿಟ್ಲರ್
ಬೇಕಾದುದು ಅತೀ ಅಗತ್ಯ. ಮೋದಿ ಈ ನಿಟ್ಟಿನಲ್ಲಿ ತೀವ್ರ ವೈಫಲ್ಯ ಅನುಭವಿಸಿದ್ದಾರೆ. ಗುಜರಾತ್‍ನ ರಸ್ತೆ, ವಿದ್ಯುತ್ ಅಥವಾ ಅವರ ಮಾತುಗಾರಿಕೆಯನ್ನು ತೋರಿಸಿ ಮೋದಿಯನ್ನು ‘ಪರಿಹಾರ’ ಎಂದು ಬಿಂಬಿಸುವವರಿಗೆ ನಾವು ಗೋಧ್ರಾವನ್ನು ತೋರಿಸಬೇಕಾಗಿದೆ. ಪಶ್ಚಾತ್ತಾಪ ಪಡದ ಅವರ ಮನಸ್ಥಿತಿಯನ್ನು ಬಿಂಬಿಸಬೇಕಾಗಿದೆ. ಮುಸ್ಲಿಮರ ಕುರಿತಂತೆ ಅವರು ವ್ಯಕ್ತಪಡಿಸಿರುವ ಅಸಹ್ಯ ಪದ ಪ್ರಯೋಗಗಳತ್ತ ಗಮನ ಹರಿಸಬೇಕಾಗಿದೆ. ಯಾಕೆಂದರೆ, ಓರ್ವ ವ್ಯಕ್ತಿ 'ಪರಿಹಾರ' ಆಗುವುದು ಮತ್ತು ಆಗಬೇಕಾದದ್ದು ಆತನ ಮನುಷ್ಯ ಪರ ನಿಲುವಿಗಾಗಿ. ಮನುಷ್ಯರನ್ನು ಧರ್ಮದ ಆಧಾರದಲ್ಲಿ ಒಡೆಯುವ ಮತ್ತು ಒಂದು ವರ್ಗವನ್ನು ಮಾತ್ರ ಗೌರವಿಸುವ ವ್ಯಕ್ತಿ ಎಷ್ಟೇ ಜನಪ್ರಿಯರಾಗಿದ್ದರೂ ಆತ ‘ಪರಿಹಾರ’ ಆಗಲಾರ, ಆಗಬಾರದು.

2 comments:

  1. Hitler nannu ..kadeganisadri...jeevanadalli saadhyavaadare Germany ge omme bheti koDi ...Ivattu germany nalli yaavade system desciplined aagide andare adakke hitler kaarana... Germany railway system, Automotive Industries, Steel industries and many more...develop aagiddu hitler na kaaladalliye ...sumne baayi bandide anta maathaDodalla... omme bhaarata ithihaasa thiruvidare gottagabahudu ...mangolian aagi banda muslimaru bharatha kke haagu illina samskruti ge estu dhakke maadiaarendu ...eega saha terrorism hesaralli athava..pakkada paakistana dinda thondaregalu kadimeye ..? naachike aagbeku nimgoo..istella aadru enoo keralodilla andare ...illi yaaru bharatiyaraada muslimaranna dweshisuttilla...ade reeti paakistana or china kke oLLe paaTa kaliso avashyakate kooda ide..adu deshada bagge swabhimaana

    ReplyDelete
  2. ನೀವು ಕಾಶ್ಮೀರಿ ಪ೦ಡಿತರ ಬಗ್ಗೆ, ಅಸ್ಸಾ೦ನ ಬೂಡೋಗಳ ಬಗ್ಗೆ, ಪಾಕಿಸ್ತಾನ ಬಾ೦ಗ್ಲಾದೇಶದ ಹಿ೦ದೂಗಳ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದೀರಾ?! ಅದೆಲ್ಲ ಬಿಡಿ. ಗೋಧ್ರಾದಲ್ಲಿ ಸುಮಾರು ೨೫೦ ಹಿ೦ದೂಗಳೂ ಪ್ರಾಣ ಕಳೆದುಕೊ೦ಡಿದ್ದರು. ಸಬರಮತಿ ಬೋಗಿಗೆ ಬೆ೦ಕಿ ಹಚ್ಚಿದ್ದ ಮುಸಲ್ಮಾನರು. ಅವರಿಗೆ ತಕ್ಕ ಶಾಸ್ತಿ ಆಗಿದೆ ಅಷ್ಟೇ.

    ReplyDelete