
`..ಉತ್ತರ ಕನ್ನಡ ಜಿಲ್ಲೆಯ ಕರಾವಳಿ ನಗರವಾದ ಭಟ್ಕಳವು ಸ್ಫೋಟಕಗಳು ತುಂಬಿರುವ ಗೋದಾಮಿನಂತೆ ಕಾಣಿಸುತ್ತಿದೆ. ದಕ್ಷಿಣ ಭಾರತದ ಬೃಹತ್ ನಗರಗಳನ್ನು ನಾಶ ಮಾಡಬಹುದಾದಷ್ಟು ಪ್ರಮಾಣದ RDX ಸಹಿತ, ಸ್ಫೋಟಕ ವಸ್ತುಗಳ ಗೋದಾವೊಂದು ನಗರದಲ್ಲಿದೆ. ಇನ್ನೂ ಗುರುತಿಸಲಾಗದ ಮನೆಯೊಂದರಲ್ಲಿ ಅದನ್ನು ದಾಸ್ತಾನಿರಿಸಲಾಗಿದೆಯೆಂದು ನಂಬಲಾಗಿದ್ದು, ಶಂಕಿತ ಭಯೋತ್ಪಾದಕರನ್ನು ಕರೆತಂದು ವಿಚಾರಿಸಲಾಗಿದೆ. ಬೆಂಗಳೂರು ATS ಮತ್ತು ದೆಹಲಿ ಪೊಲೀಸರನ್ನೊಳಗೊಂಡ ವಿಶೇಷ ತಂಡವು ನಾಲ್ವರು ಶಂಕಿತ ಭಯೋತ್ಪಾದಕರ ನೆರವಿನಿಂದ ದಾಸ್ತಾನು ಕೇಂದ್ರವನ್ನು ಪತ್ತೆ ಹಚ್ಚಲು ಶ್ರಮ ಪಟ್ಟಿದೆಯಾದರೂ ಸಂಜೆವರೆಗೂ ಅವರು ಅದರಲ್ಲಿ ಯಶಸ್ವಿಯಾಗಿಲ್ಲ. ಸ್ಫೋಟಕಗಳನ್ನು ಭಟ್ಕಳಕ್ಕೆ ತಂದು ಸುರಿದಿರುವನೆಂದು ನಂಬಲಾದ ತಡಿಯಂಡವಿಡೆ ನಾಸಿರ್ ಸದ್ಯ ಪೊಲೀಸರ ಜೊತೆ ಭಟ್ಕಳದಲ್ಲೇ ಇದ್ದಾನೆ. ಆದರೆ ದಾಸ್ತಾನು ಕೇಂದ್ರವನ್ನು ತೋರಿಸಲು ಆತ ವಿಫಲನಾಗಿದ್ದಾನೆ. ಆತ ಈ ಹಿಂದೆ ಅಲ್ಲಿಗೆ ಭೇಟಿ ಕೊಡುವಾಗ ಕತ್ತಲಾಗಿತ್ತಾದ್ದರಿಂದ ಅದು ಈಗ ಎಲ್ಲಿದೆ ಮತ್ತು ನೋಡಲು ಆ ದಾಸ್ತಾನು ಕೇಂದ್ರ ಹೇಗಿದೆ ಎಂಬುದನ್ನು ಅಂದಾಜಿಸಲಾಗುತ್ತಿಲ್ಲ ಎಂದಿದ್ದಾನೆ. ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಗಳಾದ ಯಾಸೀನ್ ಭಟ್ಕಳ್ ಮತ್ತು ರಿಯಾಝ್ ಭಟ್ಕಳ್ ರು ಸ್ಫೋಟಕಗಳನ್ನು ಭಟ್ಕಳದಲ್ಲಿ ಅಡಗಿಸಿಟ್ಟಿರಬಹುದೆಂದು ಮೂಲಗಳು ಹೇಳಿವೆ. ಅಲ್ಲದೆ 2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸ್ಫೋಟ ಮತ್ತು ಕಳೆದ ವರ್ಷ ದೆಹಲಿ ಹೈಕೋರ್ಟ್ ಬಳಿಯಲ್ಲಿ ನಡೆದ ಸ್ಫೋಟ ಸೇರಿದಂತೆ ದೇಶದಲ್ಲಾದ ಅನೇಕಾರು ಭಯೋತ್ಪಾದನಾ ದಾಳಿಗಳಿಗೆ ಭಟ್ಕಳದಿಂದಲೇ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ನಂಬಲಾಗಿದೆ..'
ರಾಜೀವ್ ಕಲ್ಕೊಡ್ ಎಂಬ ಪತ್ರಕರ್ತ ತಯಾರಿಸಿದ ಈ ವರದಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಟ್ಕಳಕ್ಕೆ ಸ್ಫೋಟಕಗಳ ಕಾರ್ಖಾನೆಯೆಂದು ಮುದ್ರೆಯೊತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಯಿತು. ಮೂಲಗಳನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಲಾಯಿತು. ಉತ್ತರ ಕನ್ನಡದ ಜಿಲ್ಲಾ ವರಿಷ್ಠಾಧಿಕಾರಿ ಕೆ.ಬಿ. ಬಾಲಕೃಷ್ಣರು ಇಡೀ ಸುದ್ದಿಯನ್ನೇ ಹುಸಿ ಅಂದುಬಿಟ್ಟರು. RDX ಎಂದರೆ ಗೊಬ್ಬರದ ದಾಸ್ತಾನಲ್ಲ, ಕೇಂದ್ರ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇನ್ನಿತರ ಏಜೆನ್ಸಿಗಳಿಗೆ ತಿಳಿಯದ ವಿಚಾರ ಪತ್ರಿಕೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು. ಇವೆಲ್ಲ ಮಾಧ್ಯಮದ ವದಂತಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು. ಭಟ್ಕಳದ ಡಿಎಸ್ಪಿಯಾದ ಎಂ. ನಾರಾಯಣ ಅವರು, ಇಲ್ಲಿ ಅಂಥದ್ದೊಂದು ಶೋಧ ಕಾರ್ಯಾಚರಣೆಯೇ ನಡೆದಿಲ್ಲ ಅಂದರು. ಒಂದು ರೀತಿಯಲ್ಲಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಮಾರ್ಚ್ 26ರಂದು, 'Bhatkal is not a town of culprits - ಭಟ್ಕಳವು ಪಾತಕಿಗಳ ನಗರವಲ್ಲ - ಎಂಬ ಶೀರ್ಷಿಕೆಯಲ್ಲಿ ಟೈಮ್ಸ್ ಪತ್ರಿಕೆ ಸ್ಪಷ್ಟೀಕರಣವನ್ನು ಕೊಟ್ಟಿತು. ತಮ್ಮ ಉದ್ದೇಶ ಪ್ರಾಮಾ ಣಿಕವಾಗಿತ್ತು ಅಂತ ಹೇಳಿಕೊಂಡಿತು..
ಇವೆಲ್ಲವನ್ನೂ ಈಗ ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ..
2012 ಜೂನ್ 5
ಜೂನ್ 6 ಇಲ್ಲವೇ 7ರಂದು ಎಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದ್ದರೂ ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಸುದ್ದಿಗೆ ಜಾಗವೇ ಸಿಕ್ಕಿಲ್ಲ..
ಅಂದಹಾಗೆ, ಮೂಲಗಳನ್ನಾಧರಿಸಿದ ವದಂತಿಯ ಸುದ್ದಿಗೆ ಮುಖ ಪುಟವನ್ನು ಮೀಸಲಿಡುವ ಪತ್ರಿಕೆಗಳಿಗೆ, ಮಾನವೀಯತೆಯನ್ನು ಸಾರುವ ಸುದ್ದಿಗಳೇಕೆ ಅಸ್ಪøಶ್ಯ ಅನ್ನಿಸಿಕೊಳ್ಳುತ್ತವೆ? ಯಾಸೀನ್ ಭಟ್ಕಳ್ ನನ್ನೋ, ರಿಯಾಜ್ ನನ್ನೋ ಮುಖಪುಟದಲ್ಲಿಟ್ಟು ತಿಂಗಳುಗಟ್ಟಲೆ ಸುತ್ತಾಡಿದ ಪತ್ರಿಕೆಗಳಿಗೆ ಆ ಊರಲ್ಲಿ ಮನುಷ್ಯ ಪ್ರೇಮಿಗಳೂ ಇದ್ದಾರೆ ಅನ್ನುವ ಸಂದೇಶವನ್ನು ಸಾರುವ ಸಂದರ್ಭ ಸಿಕ್ಕಾಗಲೆಲ್ಲಾ ನುಣುಚಿಕೊಳ್ಳುವುದೇಕೆ? ಭಯೋತ್ಪಾದಕನಿಗೆ ಗಡ್ಡ ಕಡ್ಡಾಯ ಅಂತ ಹೇಳಿಕೊಟ್ಟದ್ದೂ ಮಾಧ್ಯಮವೇ. ಆದರೆ ಇಲ್ಲಿ ಓರ್ವ ಹೆಣ್ಣು ಮಗಳ ಜೀವವನ್ನು ಉಳಿಸಿದ್ದು, ಮಾನವೀಯತೆಯ ಉತ್ಕೃಷ್ಟ ಮಾದರಿಯನ್ನು ತೋರಿಸಿದ್ದೂ ಓರ್ವ ಗಡ್ಡಧಾರಿಯೇ. ಯಾಕೆ ಇದು ಮಾಧ್ಯಮ ಮಿತ್ರರ ಗಮನ ಸೆಳೆದಿಲ್ಲ? ಒಂದೋ ಎರಡೋ ಪತ್ರಿಕೆಗಳನ್ನು ಬಿಟ್ಟರೆ ಉಳಿದವು ಯಾಕೆ ರಈಸ್ ನ ಪೋಟೋ ಪ್ರಕಟಿಸಿಲ್ಲ? ಸಿಕ್ಕ ಸಿಕ್ಕವರಿಗೆ ಗಡ್ಡ ಅಂಟಿಸಿ, ಅವರಿಗೂ, ಭಟ್ಕಳಕ್ಕೂ, ಭಯೋತ್ಪಾದನೆಗೂ ಸಂಬಂಧವನ್ನು ಕಲ್ಪಿಸಿ, ದೇಶಾದ್ಯಂತ ಭಟ್ಕಳದ ಹೆಸರನ್ನು ಹೊತ್ತು ತಿರುಗಿದ ಮತ್ತು ಅದರ ವರ್ಚಸ್ಸಿಗೆ ಧಕ್ಕೆ ತಂದ ಮಾಧ್ಯಮಗಳಿಗೇಕೆ, ಅದೇ ಭಟ್ಕಳದ ತರುಣನೊಬ್ಬನ ಮಾನವೀಯತೆ ಮಹತ್ವಪೂರ್ಣ ಅನ್ನಿಸಲಿಲ್ಲ?
ಅಂದ ಹಾಗೆ, ಭಟ್ಕಳ್ ಅಂದರೆ ಒಂದು ನಗರದ ಹೆಸರು. ಅದನ್ನೇಕೆ ಭಯೋತ್ಪಾದನೆಯ ಆರೋಪ ಹೊತ್ತುಕೊಂಡವರ ಹೆಸರಿನ ಮುಂದೆ ಜೋಡಿಸಲಾಗುತ್ತದೆ? ಮಕ್ಕಾ ಮಸೀದಿ, ಸಂಜೋತಾ ಎಕ್ಸ್ ಪ್ರೆಸ್ ಸಹಿತ ಹತ್ತಾರು ಭಯೋತ್ಪಾದನಾ ಕೃತ್ಯಗಳ ಆರೋಪಿಗಳಾದ ಇಂದ್ರೇಶ್ ಕುಮಾರ್, ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಕಾಲ್ ಸಂಗ್ರಾರನ್ನೆಲ್ಲಾ ಅವರ ಊರಿನ ಹೆಸರಿನೊಂದಿಗೆ ಮಾಧ್ಯಮಗಳು ಗುರುತಿಸುತ್ತವಾ? ಮತ್ತೇಕೆ ಯಾಸೀನ್ ಭಟ್ಕಳ್, ರಿಯಾಝ್ ಭಟ್ಕಳ್, ಇಕ್ಬಾಲ್ ಭಟ್ಕಳ್? ಇವೇನು ಶ್ರೀ, ಜನಾಬ್, ಮಿಸ್ಟರ್ ನಂತೆ ಗೌರವ ಸೂಚಕ ಪದವಾ? ಪದೇಪದೇ ಭಟ್ಕಳ ಅನ್ನುವ ಪದವನ್ನು ಓದುವ, ಆಲಿಸುವ ವ್ಯಕ್ತಿಯೊಬ್ಬ ಭಟ್ಕಳ ಅಂದರೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆ ಎಂದು ಅಂದುಕೊಳ್ಳುವ ಸಾಧ್ಯತೆ ಇಲ್ಲವೇ?
ಇಷ್ಟಕ್ಕೂ, ಇದು ಯಾವುದಾದರೊಂದು ನಿರ್ದಿಷ್ಟ ಪತ್ರಿಕೆಯ ಅಥವಾ ನಿರ್ದಿಷ್ಟ ಸಂದರ್ಭದ ಕುರಿತಂತೆ ಇರುವ ಆಕ್ಷೇಪವೇನೂ ಅಲ್ಲ..
`ಭಯೋತ್ಪಾದನಾ ಸಂಬಂಧದಿಂದ ಕಳಂಕಿತಗೊಂಡಿರುವ ಭಟ್ಕಳ - Bhatkal town tainted by terror links' - ಎಂಬ ಹೆಡ್ ಲೈನಿನೊಂದಿಗೆ 2010 ಜುಲೈ 23ರಂದು CNN-IBN ಟಿವಿ ಚಾನೆಲ್ ವರದಿಯೊಂದನ್ನು ಪ್ರಸಾರ ಮಾಡಿತ್ತು. ಅದರ ವರದಿಗಾರ ಶುಹೈಬ್ ಅಹ್ಮದ್ ಭಟ್ಕಳಕ್ಕೆ ತೆರಳಿ, ಸಾರ್ವಜನಿಕರ ಬಾಯಿಗೆ ಮೈಕ್ರೋ ಪೋನ್ ಇಟ್ಟಿದ್ದ. ವಿಕಿಪೀಡಿಯಾದಲ್ಲಿ, `ರಿಯಾಝ್ ಭಟ್ಕಳ್ ಅಲಿಯಾಸ್ ಶಾ ರಿಯಾಝ್ ಅಹ್ಮದ್ ಮುಹಮ್ಮದ್' ಎಂಬ ಮೈಲು ಉದ್ದದ ಹೆಸರು ಮತ್ತು ವಿವರವಿದೆ. `ಮುಂಬೈ ಸ್ಫೋಟದ ಹಿಂದೆ ಭಟ್ಕಳದ ಇಂಡಿಯನ್ ಮುಜಾಹಿದೀನ್ ನ ಪಾತ್ರ' - Bhatkal's IM module behind 13/7 blasts' - ಎಂಬ ದಾಟಿಯ ಶೀರ್ಷಿಕೆಗಳು ಮತ್ತು ವರದಿಗಳು ಈ ದೇಶದ ಪತ್ರಿಕೆಗಳ ಮುಖಪುಟದಲ್ಲಿ ಧಾರಾಳ ಪ್ರಕಟವಾಗಿವೆ. ಹೀಗಿರುವಾಗ ಅದಕ್ಕೆ ಭಿನ್ನವಾದ ಘಟನೆಯೊಂದು ಭಟ್ಕಳದಿಂದ ದೊರೆತರೆ ಅದೇಕೆ ಒಳಪುಟದ್ದೋ, ಒಂದು ಕಾಲಮ್ ನದ್ದೋ ಸುದ್ದಿಯಾಗಿ ಪ್ರಕಟವಾಗಬೇಕು? ನಿಜವಾಗಿ ಮಾಸಲು ಬಟ್ಟೆ ಧರಿಸಿದ, ಬಟ್ಟೆಯ ಗಂಟನ್ನು ಹೇರಿಕೊಂಡು ವಲಸೆ ಬರುವ ಬಡ ಕೂಲಿ ಕಾರ್ಮಿಕೆಗೂ ಇತರರಿಗೂ ವ್ಯತ್ಯಾಸ ಇದೆ. ಬಡವರ ಬಗ್ಗೆ ಕಣ್ಣೀರು ಸುರಿಸಿ ಪುಟಗಟ್ಟಲೆ ಬರೆಯುವವರು ಕೂಡ ಅಂಥವರ ಬಳಿ ಕೂರುವುದಕ್ಕೆ ಕೆಲವೊಮ್ಮೆ ಹಿಂಜರಿಯುವುದಿದೆ. ಹೀಗಿರುವಾಗ, ದಾರಾಸಿಂಗ್ ಕುಟುಂಬದ ಬಡತನ, ತುಂಬು ಗರ್ಭಿಣಿಯನ್ನು ಕೆಲಸಕ್ಕೆ ಕರಕೊಂಡು ಬರುವಷ್ಟು ದಯನೀಯ ಸ್ಥಿತಿ ಮತ್ತು ರೈಲು ಬೋಗಿಯಲ್ಲಿರಬಹುದಾದ ಭಯೋತ್ಪಾದನಾ ವಿರೋಧಿ ಮನುಷ್ಯರೆಲ್ಲರ ಹಿಂಜರಿಕೆಯ ಮಧ್ಯೆಯೂ ಓರ್ವ ಗಡ್ಡಧಾರಿ ಮನುಷ್ಯ ಮಾನವೀಯತೆ ತೋರುವುದು ಯಾಕೆ ಮಾಧ್ಯಮಗಳ ಪಾಲಿಗೆ ಚರ್ಚಾ ವಸ್ತುವಾಗುತ್ತಿಲ್ಲ? ಕನ್ನಡದ ಅಥವಾ ಇಂಗ್ಲಿಷ್ ನ ಯಾವೊಬ್ಬ ಅಂಕಣಗಾರರೂ ಯಾಕೆ ಈ ವಿಚಾರವಾಗಿ ಅಂಕಣ ಬರೆದಿಲ್ಲ? ಅವರೆಲ್ಲ ಬಾಂಬ್ ಸ್ಫೋಟಕ್ಕೆ ಕಾಯುತ್ತಿದ್ದಾರಾ?
No comments:
Post a Comment