Tuesday, January 14, 2025

ನಾನು ಪತ್ನಿಯೊಂದಿಗೆ ಸಮಾಲೋಚನೆಯನ್ನೇ ನಡೆಸುವುದಿಲ್ಲ...






ಪ್ರಶ್ನೆ:
ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ಪತ್ನಿ ಯೊಂದಿಗೆ ಸಮಾಲೋಚನೆ ನಡೆಸುವುದಿಲ್ಲ.  ಕೆಲವೊಮ್ಮೆ ಸಮಾಲೋಚನೆ ನಡೆಸ ಬೇಕು ಎಂದು ಅನಿಸುತ್ತದೆ. ಆದರೆ ಪತ್ನಿಯೊಂದಿಗೆ ಎಂಥಾ ಸಮಾಲೋಚನೆ ಎಂದು  ಒಳಮನಸ್ಸು ಹೇಳುತ್ತದೆ. ಅದು ನನ್ನ ಅಹಂಕಾರವೋ, ಸ್ವಾಭಿಮಾನವೋ ಕೀಳರಿಮೆಯೋ ಗೊತ್ತಿಲ್ಲ. ಆದರೆ ನನ್ನ  ಗೆಳೆಯರಲ್ಲಿ ನಾನು ಸಮಾಲೋಚನೆ ನಡೆಸುತ್ತೇನೆ. ಕೆಲವೊಮ್ಮೆ ಅವರ ಅಭಿಪ್ರಾಯವನ್ನು ಮನ್ನಿಸಿ ನನ್ನ ಅಭಿಪ್ರಾಯವನ್ನು  ತ್ಯಾಗ ಮಾಡುವುದೂ ಇದೆ. ಹಾಗೆಯೇ, ನನ್ನ ಪತ್ನಿಗೆ ನನ್ನ ಈ ವರ್ತನೆಯ ವಿಷಯದಲ್ಲಿ ತೀವ್ರ ಆಕ್ಷೇಪವೂ ಇದೆ.  ಕೆಲವೊಮ್ಮೆ ಆಕೆ ಎಷ್ಟು ಪ್ರಬುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾಳೆಂದರೆ, ನನ್ನ ಮತ್ತು ಗೆಳೆಯರ ಅಭಿಪ್ರಾಯಕ್ಕಿಂತಲೂ  ಆಕೆಯ ಸಲಹೆ ಉತ್ತಮವಾಗಿರುತ್ತದೆ. ನನ್ನ ಒಳಮನಸ್ಸು ಆಕೆಯ ತಿಳುವಳಿಕೆ, ಪ್ರಬುದ್ಧತೆಯ ಕುರಿತು ಸದಭಿಪ್ರಾಯವನ್ನೇ  ಹೊಂದಿದೆ. ಆದರೆ, ಯಾಕೋ ಆಕೆಯೊಂದಿಗೆ ಸಮಾಲೋಚನೆ ಮಾಡಲು ಮನಸ್ಸು ಕೇಳುತ್ತಿಲ್ಲ. ಇದರಿಂದಾಗಿ ಹಲವು  ಬಾರಿ ನಮ್ಮ ನಡುವೆ ವಾಗ್ವಾದವೂ ನಡೆದಿದೆ. ಯಾಕೆ ಹೀಗೆ ಎಂದು ಗೊತ್ತಾಗುತ್ತಿಲ್ಲ...’

ನಿಜವಾಗಿ ಇದು ಒಬ್ಬರ ಸಮಸ್ಯೆಯಲ್ಲ. ಪತ್ನಿಯ ಹೊರತಾಗಿ ಇತರೆಲ್ಲರನ್ನೂ ಬುದ್ಧಿವಂತರೆಂದು  ನಂಬುವ ಮತ್ತು ಅವರಲ್ಲಿ  ಚರ್ಚೆ, ಸಮಾಲೋಚನೆ ನಡೆಸಿ ಸಲಹೆಗಳು ಕೇಳುವ ಮಂದಿ ನಮ್ಮ ನಡುವೆ ಧಾರಾಳ ಇದ್ದಾರೆ. ಮಗಳನ್ನು ಯಾವ  ಶಾಲೆಗೆ ಸೇರಿಸಬೇಕು ಎಂಬಲ್ಲಿಂದ  ತೊಡಗಿ ಮನೆಗೆ ಯಾವೆಲ್ಲ ದಿನಸಿ ಸಾಮಾನುಗಳನ್ನು ತರಬೇಕು ಎಂಬಲ್ಲಿವರೆಗೆ  ಪ್ರತಿಯೊಂದನ್ನೂ ಪತಿಯೇ ನಿರ್ಧರಿಸುವ ಅಸಂಖ್ಯ ಮನೆಗಳು ನಮ್ಮ ನಡುವೆ ಇವೆ. ಪತ್ನಿ ಏನಾದರೂ ಸಲಹೆ ಹೇಳಿದರೆ  ಅದು ಉತ್ತಮವಾಗಿದ್ದರೂ ತಿರಸ್ಕರಿಸುವ ಪತಿಯಂದಿರೂ ಧಾರಾಳ ಇದ್ದಾರೆ. ‘ನಿನಗೇನು ಗೊತ್ತು’ ಎಂದು ಅವಮಾ ನಿಸುವವರೂ ಇದ್ದಾರೆ. ಈಗಿನ ಆಧುನಿಕ ಕಾಲದಲ್ಲಂತೂ ಇಂಥ ವಿಷಯಗಳೇ ವಾಗ್ವಾದಕ್ಕೆ ಕಾರಣವಾಗಿ ವಿಚ್ಛೇದನದ  ಹಂತಕ್ಕೂ ಹೋಗುವುದಿದೆ. ಯಾಕೆ ಹೀಗೆ? ಗೆಳೆಯರೊಂದಿಗೆ ಸಮಾಲೋಚನೆ ನಡೆಸುವ ವ್ಯಕ್ತಿ ಯಾಕೆ ಪತ್ನಿಯೊಂದಿಗೆ  ಸಮಾಲೋಚನೆ ನಡೆಸಬಾರದು. ಆತನನ್ನು ಇದರಿಂದ ತಡೆಯುತ್ತಿರುವವರು ಯಾರು? ಪತ್ನಿಯೊಂದಿಗೆ ಸಮಾಲೋಚನೆ  ನಡೆಸಬಾರದು ಎಂದು ಪತಿಯನ್ನು ಒಪ್ಪಿಸಿರುವುದು ಯಾವುದು? ಧರ್ಮವೇ? ಬೆಳೆದು ಬಂದ ವಾತಾವರಣವೇ,  ಮೇಲರಿಮೆಯೇ? ಅಹಂಕಾರವೇ?

ಪ್ರವಾದಿ ಮುಹಮ್ಮದರು(ಸ) ಉಮ್ರಾ ಮಾಡುವ ಉದ್ದೇಶವನ್ನಿಟ್ಟುಕೊಂಡು ಮದೀನಾದಿಂದ ಮಕ್ಕಾಕ್ಕೆ ಹೊರಡುತ್ತಾರೆ.  ಅವರ ಜೊತೆ ಅವರ ಪತ್ನಿಯರೂ ಮತ್ತು ಸಾವಿರಕ್ಕಿಂತಲೂ ಅಧಿಕ ಅನುಯಾಯಿಗಳೂ ಇದ್ದರು. ಮಕ್ಕಾದಲ್ಲಿದ್ದ ಅವರ  ವಿರೋಧಿಗಳಿಗೆ ಪ್ರವಾದಿಯವರ(ಸ) ಈ ಪ್ರಯಾಣದ ಸುದ್ದಿ ಸಿಕ್ಕಿತು. ತಾವೇ ಕಿರುಕುಳ ಕೊಟ್ಟು ವಲಸೆ ಹೋಗುವಂತೆ  ಮಾಡಿದ ವ್ಯಕ್ತಿ ಮರಳಿ ಮಕ್ಕಾಕ್ಕೆ ಬರುವುದನ್ನು ಅವರು ಇಷ್ಟಪಡಲಿಲ್ಲ. ಹಾಗಂತ, ಪ್ರವಾದಿಯವರು(ಸ) ಮಕ್ಕಾದ ಮೇಲೆ  ದಂಡೆತ್ತಿ ಬರುತ್ತಿಲ್ಲ ಎಂಬುದು ಇವರಿಗೆ ಖಚಿತವಾಗಿ ಗೊತ್ತಾದ ಬಳಿಕವೂ ಪ್ರವಾದಿ ಯನ್ನು ಮಕ್ಕಾದೊಳಗೆ ಬಿಟ್ಟುಕೊಡಲು  ಅವರು ಸಿದ್ಧರಿರಲಿಲ್ಲ. ಆದ್ದರಿಂದ ಪ್ರವಾದಿ(ಸ) ಜೊತೆ ಸಮಾಲೋಚನೆಗಾಗಿ ಓರ್ವ ದೂತನನ್ನು ಅವರು  ಕಳುಹಿಸಿಕೊಟ್ಟರು. ಅವರ ಹೆಸರು ಸುಹೈಲ್ ಬಿನ್ ಅಮ್ರ್. ಅವರು ಹುದೈಬಿಯಾ ಎಂಬಲ್ಲಿ ಪ್ರವಾದಿಯವರನ್ನು  ಭೇಟಿಯಾದರು. ಅಲ್ಲಿ ಮಾತುಕತೆಗಳೂ ನಡೆದುವು. ಒಪ್ಪಂದವನ್ನೂ ಮಾಡಿಕೊಳ್ಳಲಾಯಿತು. ಆ ಒಪ್ಪಂದದ ಪ್ರಕಾರ ಪ್ರವಾದಿ  ಮತ್ತು ಅವರ ಅನುಯಾಯಿಗಳು ಮಕ್ಕಾ ಪ್ರವೇಶಿಸದೇ ಮರಳಿ ಮದೀನಾಕ್ಕೆ ಹೋಗಬೇಕಿತ್ತು. ಅಲ್ಲದೇ, ಮಕ್ಕಾದಿಂದ  ಯಾರಾದರೂ ಆಶ್ರಯ ಬಯಸಿ ಮದೀನಾಕ್ಕೆ ಆಗಮಿಸಿದರೆ ಅವರನ್ನು ಪುನಃ ಪ್ರವಾದಿಯವರು ಮಕ್ಕಾದವರ ವಶಕ್ಕೆ  ಒಪ್ಪಿಸಬೇಕಿತ್ತು. ಆದರೆ ಮದೀನಾದಿಂದ ಯಾರಾದರೂ ಆಶ್ರಯ ಕೋರಿ ಮಕ್ಕಾಕ್ಕೆ ಬಂದರೆ ಅವರನ್ನು ಮರಳಿ ಮದೀನಾಕ್ಕೆ  ಒಪ್ಪಿಸಬೇಕಿರಲಿಲ್ಲ...’ ಒಪ್ಪಂದದ ಈ ಶರತ್ತುಗಳು ಪ್ರವಾದಿಯ ಅನುಯಾಯಿಗಳನ್ನು ತೀವ್ರವಾಗಿ ಘಾಸಿಗೊಳಿಸಿತು. ನಾವು  ಇಷ್ಟೂ ದುರ್ಬಲರಾ ಎಂಬ ನೋವು ಮತ್ತು ಆಕ್ರೋಶ ಅವರೊಳಗೆ ಸ್ಫೋಟಿಸಿತು. ಮದೀನಾ ದಿಂದ ಹೊರಡುವಾಗ  ಪ್ರವಾದಿ ಮತ್ತು ಅನುಯಾಯಿಗಳು ಬಲಿಪ್ರಾಣಿಯನ್ನೂ ಜೊತೆ ಕರೆತಂದಿದ್ದರು. ಅವುಗಳು ನಿಂತಲ್ಲೇ  ಇದ್ದುವು. ಅ ನುಯಾಯಿಗಳೂ ಕುಳಿತಲ್ಲೇ  ಇದ್ದರು. ಮಕ್ಕಾಕ್ಕೆ ಹೋಗಲು ಸಾಧ್ಯವಾಗದಿರುವ ಈ ಹೊತ್ತಿನಲ್ಲಿ ಉಮ್ರಾ ನಿರ್ವ ಹಣೆಯ  ಸಂಕೇತವಾಗಿ ಇಲ್ಲೇ  ತಲೆಗೂದಲನ್ನು ಬೋಳಿಸಿ ಪ್ರಾಣಿಬಲಿಯನ್ನು ಅರ್ಪಿಸಿ ಮರಳಿ ಮದೀನಾಕ್ಕೆ ಹೋಗೋಣ ಎಂದು  ಪ್ರವಾದಿ ತನ್ನ ಸಾವಿರವನ್ನೂ ಮಿಕ್ಕಿದ ಅನುಯಾಯಿಗಳಿಗೆ ಹೇಳಿದರು. ಆದರೆ, ಅವರಾರೂ ಮಾತನ್ನು ಪಾಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅವರೆಲ್ಲ ಅಲುಗಾಡದೇ ಸುಮ್ಮನಿದ್ದರು. ಇದು ಪ್ರವಾದಿಯನ್ನು ಕಸಿವಿಸಿಗೊಳಿಸಿತು. ಏನು ಮಾಡಬೇಕೆಂದು  ತೋಚದೇ ಪತ್ನಿ ಉಮ್ಮು ಸಲಮಾರಲ್ಲಿ ಸಮಾಲೋಚನೆ ನಡೆಸಿದರು. ಅವರು ನೀಡಿದ ಸಲಹೆಯಂತೆ ಅವರೇ  ಮೊದಲಾಗಿ ತಲೆ ಬೋಳಿಸಿಕೊಂಡು ಪ್ರಾಣಿ ಬಲಿ ನೀಡಿದರು. ಇದರ ಬೆನ್ನಿಗೇ ಎಲ್ಲ ಅನುಯಾಯಿಗಳೂ ಅದನ್ನೇ ಅನುಸರಿಸಿದರು.

ಪವಿತ್ರ ಕುರ್‌ಆನ್‌ನಲ್ಲಿ ಹೀಗೊಂದು ವಚನವಿದೆ,
ಪತಿ ಮತ್ತು ಪತ್ನಿ ಇಬ್ಬರೂ ಪರಸ್ಪರ ಸಮಾಲೋಚನೆ ನಡೆಸಿ ಒಮ್ಮತದಿಂದ ಮಗುವಿನ ಎದೆಹಾಲು ಬಿಡಿಸಲಿಚ್ಛಿಸುವುದಾದರೆ  ಅದರಲ್ಲಿ ತಪ್ಪಿಲ್ಲ. (2:233)

ಇನ್ನೊಂದು ಕಡೆ ಸಮಾಲೋಚನೆಯನ್ನು ಸತ್ಯವಿಶ್ವಾಸಿಗಳ ಗುಣವಾಗಿ ಪವಿತ್ರ ಕುರ್‌ಆನ್ ಹೀಗೆ ಪ್ರಸ್ತಾವಿಸುತ್ತದೆ,
ತಮ್ಮ ವ್ಯವಹಾರವನ್ನು ಪರಸ್ಪರ ಸಮಾಲೋಚನೆಯಿಂದ ನಡೆಸುತ್ತಾರೆ. (42:38)

ಈ ಎರಡೂ ಸೂಕ್ತಗಳು ಸಮಾಲೋಚನೆಯನ್ನೇ ಕೇಂದ್ರೀಕರಿಸಿವೆ. ನಿಜವಾಗಿ, ಮಗುವಿನ ಎದೆಹಾಲು ಬಿಡಿಸುವುದಕ್ಕೂ  ಸಮಾಲೋಚನೆಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾದುದು. ಪತಿ-ಪತ್ನಿ ಇಬ್ಬರೂ ಸಮಾಲೋಚಿಸಿ ನಿರ್ಧಾರ  ಕೈಗೊಳ್ಳಬೇಕಾದಂಥ ಗಂಭೀರ ಸಂಗತಿ ಅದರಲ್ಲೇನಿದೆ ಎಂಬ ಪ್ರಶ್ನೆಯೂ ಇರಬಹುದು. ಮಗುವಿಗೆ ಎದೆಹಾಲು ಬಿಡಿಸುವ  ಕಲೆ ತಾಯಿಗೆ ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕೆ ಪತಿಯ ಸಹಕಾರದ ಅಗತ್ಯವೂ ಬೀಳುವುದಿಲ್ಲ. ಊರವರಿಗೆ ಹೇಳಿ ಬಿಡಿಸುವ  ವಿಷಯವೂ ಅದಲ್ಲ. ಆದರೂ ಅಲ್ಲಾಹನು ಇಲ್ಲೂ ಸಮಾಲೋಚನೆಗೆ ಮಹತ್ವ ಕೊಟ್ಟಿದ್ದಾನೆಂದರೆ, ಇನ್ನು ಬದುಕಿನ ಉಳಿದ  ವಿಷಯಗಳ ಸಮಾಲೋಚನೆಗೆ ನಾವೆಷ್ಟು ಮಹತ್ವವನ್ನು ಕೊಡಬೇಡ? ಓರ್ವ ಪತಿ ಅತ್ಯಂತ ಹೆಚ್ಚು ಸಮಯವನ್ನು  ಕಳೆಯುವುದು ಪತ್ನಿಯೊಂದಿಗೆ. ಉದ್ಯೋಗ ವೇಳೆಯ ಎಂಟೋ ಒಂಭತ್ತೋ ಗಂಟೆಗಳನ್ನು ಹೊರತುಪಡಿಸಿದರೆ ಉಳಿದ  ದೀರ್ಘ ಸಮಯವನ್ನು ಪತ್ನಿಯೊಂದಿಗೆ ಪತಿ ಕಳೆಯ ಬೇಕಾಗುತ್ತದೆ. ಪವಿತ್ರ ಕುರ್‌ಆನ್ ಪತಿ ಮತ್ತು ಪತ್ನಿಯನ್ನು ಜೋಡಿ  ಎಂದು ಸಂಬೋಧಿಸಿದೆ. ಜೋಡಿ ಎಂಬ ಪದಕ್ಕೆ ಒಬ್ಬರು ಹೆಚ್ಚು ಇನ್ನೊಬ್ಬರು ಕಡಿಮೆ ಎಂಬ ಅರ್ಥ ಇಲ್ಲ. ಒಂದುವೇಳೆ  ಪತಿ ಮತ್ತು ಪತ್ನಿಯ ನಡುವೆ ಸ್ಥಾನಮಾನಗಳಲ್ಲಿ ವ್ಯತ್ಯಾಸ ಇರುತ್ತಿದ್ದರೆ ಜೋಡಿ ಎಂಬ ಪದ ಬಳಕೆಯನ್ನೇ ಅಲ್ಲಾಹನು  ಮಾಡುತ್ತಿರಲಿಲ್ಲ.

ಜೋಡಿಗಳು ಹೇಗಿರಬೇಕೆಂದರೆ ಪತಿ ತನಗೇನನ್ನು ಬಯಸುತ್ತಾನೋ ಅದನ್ನೇ ಪತ್ನಿಗೂ ಬಯಸಬೇಕು. ಪತ್ನಿಯೂ  ಅಷ್ಟೇ, ತನಗೇನನ್ನು ಆಕೆ ಬಯಸುತ್ತಾಳೋ ಅದನ್ನು ಪತಿಗೂ ಬಯಸ ಬೇಕು. ಹೀಗೆ ಬಯಸಬೇಕೆಂದರೆ ಪರಸ್ಪರ  ಸಮಾಲೋಚನೆ ನಡೆಯಬೇಕು. ಮಗುವನ್ನು ಶಾಲೆಗೆ ಸೇರಿಸುವ ವಿಷಯವೇ ಇರಲಿ, ಅಥವಾ ವಾಹನವೊಂದನ್ನು ಖರೀ ದಿಸುವ ಸಂಗತಿಯೇ ಇರಲಿ ಇಬ್ಬರಲ್ಲೂ ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆ ಎರಡೂ ಅಭಿಪ್ರಾಯಗಳನ್ನು  ಹಂಚಿಕೊಂಡಾಗ ಉತ್ತಮವಾದ ಮೂರನೆಯದೊಂದು ಅಭಿಪ್ರಾಯ ವ್ಯಕ್ತವಾಗಬಹುದು. ಒಂದು ಮೊಬೈಲ್ ಖರೀದಿಸಬೇಕು ಅಂತಿಟ್ಟುಕೊಳ್ಳಿ. ಈ ವಿಷಯದಲ್ಲಿ ಪತಿಗಿಂತ ಪತ್ನಿಯಲ್ಲೇ  ಹೆಚ್ಚು ತಿಳುವಳಿಕೆ ಇರಬಹುದು. ಯಾವ ಕಂಪೆನಿಯ,  ಯಾವ ಮಾಡೆಲ್‌ನ ಮೊಬೈಲ್‌ನಲ್ಲಿ ಹೆಚ್ಚು ಜಿಬಿ ಇರುತ್ತದೆ, ಕ್ಯಾಮರಾ ಉತ್ತಮವಿರುತ್ತದೆ ಮತ್ತು ಗ್ರಾಹಕಸ್ನೇಹಿಯಾಗಿರುತ್ತದೆ ಎಂಬುದನ್ನು ಪತಿಗಿಂತ ಚೆನ್ನಾಗಿ ಪತ್ನಿ ತಿಳಿದಿರುವ ಸಾಧ್ಯತೆ ಇದೆ ಅಥವಾ ಪತಿಗೇ ಹೆಚ್ಚು ಗೊತ್ತಿರುವುದಕ್ಕೂ  ಅವಕಾಶ ಇದೆ. ಒಂದುವೇಳೆ ಇಬ್ಬರೂ ಈ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬಂದರೆ ಅದರಿಂದ ಲಾಭವೂ ಇದೆ.  ಏನೆಂದರೆ, ಖರೀದಿಸಿದ ಆ ಮೊಬೈಲ್ ನಿರೀಕ್ಷಿಸಿದ ರೀತಿಯಲ್ಲಿ ಕಾರ್ಯಕ್ಷಮತೆಯನ್ನು ಹೊಂದಿಲ್ಲದೇ ಹೋದರೂ  ಇಬ್ಬರಲ್ಲಿ ಯಾರಾದರೂ ಒಬ್ಬರು ಕಟಕಟೆಯಲ್ಲಿ ನಿಲ್ಲಬೇಕಾಗಿ ಬರುವುದಿಲ್ಲ. ಸಮಾಲೋಚಿಸಿ ನಿರ್ಧಾರ  ಕೈಗೊಂಡಿರುವುದರಿAದ ಇಬ್ಬರೂ ಅದಕ್ಕೆ ಸಮಾನ ಹೊಣೆಗಾರರಾಗಿರುತ್ತಾರೆ.

 ಅಂದಹಾಗೆ,

ಪತ್ನಿಯೊಂದಿಗೆ ಸಮಾಲೋಚನೆ ನಡೆಸದೇ ಇರುವುದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಗಂಡಿನ ಅಹಮ್ಮೇ ಮುಖ್ಯ ಕಾರಣವಾಗಿರುತ್ತದೆ. ತಾನು ಆಕೆಗಿಂತ ಮೇಲು ಎಂಬ ಕಾರಣದಿಂದಲೋ ಆಕೆಗೇನು ಗೊತ್ತು ಎಂಬ ನಿರ್ಲಕ್ಷ್ಯ  ಭಾವದಿಂದಲೋ ಗಂಡು  ಹೀಗೆ ನಡಕೊಳ್ಳುವುದೇ ಹೆಚ್ಚು. ಇದರಲ್ಲಿ ಗಂಡು ಬೆಳೆದು ಬಂದ ಮನೆಯ ವಾತಾವರಣದ ಪಾಲೂ ಇದೆ. ಸಾಮಾನ್ಯವಾಗಿ  ಹೆತ್ತವರನ್ನು ನೋಡಿಯೇ ಮಕ್ಕಳು ಬೆಳೆಯುತ್ತಾರೆ. ಅಮ್ಮನೊಂದಿಗೆ ಅಪ್ಪ ಹೇಗೆ ವರ್ತಿಸುತ್ತಾರೆ ಎಂಬುದನ್ನು ಮಕ್ಕಳು  ನೋಡುತ್ತಿರುತ್ತಾರೆ ಮತ್ತು ಆ ವರ್ತನೆಯು ಅವರ ಬದುಕಿನ ಮೇಲೂ ಪ್ರಭಾವ ಬೀರುತ್ತಿರುತ್ತದೆ. ಹೆಣ್ಣು ಮಗಳಿಗಿಂತ  ಗಂಡು ಮಕ್ಕಳಿಗೆ ಮನೆಯಲ್ಲಿ ಹೆತ್ತವರು ಹೆಚ್ಚುವರಿ ಪ್ರಾಶಸ್ತ್ಯ ನೀಡುವುದು, ಗಂಡು ಹೇಳಿದಂತೆ ಕೇಳಬೇಕು ಎಂಬ  ಒತ್ತಡವನ್ನು ನೇರವಾಗಿಯೋ ಪರೋಕ್ಷವಾಗಿಯೋ ಹೆಣ್ಣಿನ ಮೇಲೆ ಹೇರುವುದು ಇತ್ಯಾದಿಗಳೆಲ್ಲ ಗಂಡು ಮಕ್ಕಳನ್ನು ಹೆಣ್ಣಿನ  ವಿಷಯದಲ್ಲಿ ಒರಟರನ್ನಾಗಿ ಮಾರ್ಪಡಿಸುತ್ತಲೂ ಇರುತ್ತವೆ. ಪ್ರವಾದಿ(ಸ) ಹೇಳಿದರು,

‘ಓರ್ವರಲ್ಲಿ ಅಣುವಿನಷ್ಟಾದರೂ ಅಹಂಕಾರ ಇದ್ದರೆ ಅವರು ಸ್ವರ್ಗ ಪ್ರವೇಶಿಸುವುದಿಲ್ಲ.’

ಸಾಮಾನ್ಯವಾಗಿ ಈ ವಚನವನ್ನು ಮೊಣಕಾಲಿಗಿಂತ ಕೆಳಗೆ ಉಡುಪು ಧರಿಸುವುದಕ್ಕೆ, ಎದೆ ಬಿಗಿದುಕೊಂಡು ನಡೆಯುವುದಕ್ಕೆ,  ಇತರರನ್ನು ಅವಗಣಿಸುವಂತೆ ವರ್ತಿಸುವುದಕ್ಕೆ, ಜಂಭದಿಂದ   ಮಾತಾಡುವುದಕ್ಕೆ... ಇತ್ಯಾದಿಗಳಿಗೆ ಅನ್ವಯಿಸಿ  ನೋಡುತ್ತೇವೆಯೇ ಹೊರತು ಪತಿ ಮತ್ತು ಪತ್ನಿ ನಡುವಿನ ಸಂಬಂಧದಲ್ಲಿ ಇರುವ ಅಹಂಕಾರದ ವರ್ತನೆಗೆ ಅನ್ವಯಿಸಿ  ವ್ಯಾಖ್ಯಾನಿಸುವುದು ಬಹಳ ಕಡಿಮೆ. ನಿಜವಾಗಿ, ಈ ವಚನವನ್ನು ಮೊದಲಾಗಿ ಅನ್ವಯಿಸಬೇಕಾದದ್ದು ಪತ್ನಿಯ ಜೊತೆ  ಪತಿಯ ಠೇಂಕಾರದ ವರ್ತನೆಗೆ. ಪತ್ನಿಗೇನು ಗೊತ್ತು ಎಂಬ ಭಾವದೊಂದಿಗೆ ಯಾರು ಬದುಕುತ್ತಿದ್ದಾರೋ ಅವರಿಗೆ  ಮೊದಲಾಗಿ ಈ ವಚನವನ್ನು ಅನ್ವಯಿಸಿ ವ್ಯಾಖ್ಯಾನಿಸುವ ಪ್ರಯತ್ನ ನಡೆಯಬೇಕಾಗಿದೆ. ಪತ್ನಿಯೊಂದಿಗೆ ಸಮಾಲೋಚನೆ  ನಡೆಸುವುದಿಲ್ಲ ಎಂಬುದು ತೀರಾ ಸಣ್ಣ ಸಂಗತಿಯಲ್ಲ. ಅದರ ಹಿಂದೆ ಅಹಂಕಾರವಿದೆ. ಅದಕ್ಕೆ ಆತ ಬೆಳೆದು ಬಂದ  ವಾತಾವರಣ ಕಾರಣವಾಗಿರಬಹುದಾದರೂ ಅದರಿಂದ ಕಳಚಿಕೊಂಡು ಬದುಕುವ ಎಲ್ಲ ಅವಕಾಶಗಳೂ ವ್ಯಕ್ತಿಗೆ ಇದ್ದೇ  ಇದೆ.  ಆದರೂ ಆತ ಅದೇ ಸ್ವಭಾವವನ್ನು ಮುಂದುವರಿಸುವುದಾದರೆ, ಅದು ನರಕಕ್ಕೆ ಕೊಂಡೊಯ್ಯುತ್ತದೆ ಎಂಬ ಎಚ್ಚರಿಕೆಯನ್ನು  ಎಲ್ಲ ಗಂಡುಗಳಿಗೂ ನೀಡಬೇಕಾಗಿದೆ. ಪತ್ನಿಯೆಂದರೆ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಬಟ್ಟೆ ತೊಳೆದು ಮಕ್ಕಳನ್ನು  ಸಂಭಾಳಿಸಿ ಸೇವೆ ಮಾಡುತ್ತಾ ಬದುಕಬೇಕಾದವಳು ಎಂಬ ಅಜ್ಞಾನ ಕಾಲದ ನಿಲುವನ್ನು ಈ ಕಾಲದಲ್ಲೂ  ಮುಂದುವರಿಸುವವರು ಕುರ್‌ಆನ್ ಮತ್ತು ಪ್ರವಾದಿ(ಸ) ವಚನಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದೇ ಹೇಳಬೇಕಾಗಿದೆ.

ಅನುಭವಿಸದೇ ಇರುವುದನ್ನು ಅನುಭವಿಸಿದಂತೆ ಬದುಕಬೇಕಾದವ- ‘ಮುಸ್ಲಿಮ್’




ಏ.ಕೆ. ಕುಕ್ಕಿಲ

ಘಟನೆ 1.
ದ್ವಿತೀಯ ಖಲೀಫ ಉಮರ್(ರ)ರು ರಾತ್ರಿ ಸಂಚಾರದಲ್ಲಿದ್ದರು. ರಾತ್ರಿವೇಳೆ ಎದ್ದು ಮದೀನಾದ ಬೀದಿಯಲ್ಲಿ ನಡೆಯುವುದು  ಮತ್ತು ಜನರ ಬದುಕು-ಭಾವಗಳ ಬಗ್ಗೆ ತಿಳಿದುಕೊಳ್ಳುವುದು ಅವರ ರೂಢಿಯಾಗಿತ್ತು. ಯಾರಾದರೂ ಪ್ರಯಾಣಿಕರು ಆಶ್ರಯ ಮತ್ತು ಆಹಾರದ ಅಲಭ್ಯತೆಯಿಂದ ಸಿಲುಕಿಕೊಂಡಿದ್ದಾರಾ, ನೆರವಿನ ಅಗತ್ಯವಿರುವವರು ಇದ್ದಾರಾ ಎಂಬುದು ಅವರ  ರಾತ್ರಿ ಸಂಚಾರದ ಉದ್ದೇಶವೂ ಆಗಿತ್ತು. ಹಾಗೆ,

ತುಸು ನಡೆದಾಗ ದೂರದಲ್ಲಿ ಒಂದು ಬೆಳಕನ್ನು ಕಂಡರು. ಮಾತ್ರವಲ್ಲ, ಧ್ವನಿಯನ್ನೂ ಆಲಿಸಿದರು. ಬಳಿಕ ಅವರು ಆ ಬೆಳಕು  ಕಂಡ ಜಾಗಕ್ಕೆ ಹೋದರು. ಎಲ್ಲಿಂದಲೋ ಬಂದ ಯಾತ್ರಾ ತಂಡವೊಂದು  ಅಲ್ಲಿ ಟೆಂಟ್ ಹಾಕಿಕೊಂಡಿತ್ತು. ಇಂದಿನಂತೆ   ವಾಹನ ಸೌಲಭ್ಯಗಳಿಲ್ಲದ ಅಂದಿನ ಕಾಲದಲ್ಲಿ ಯಾತ್ರಾ ತಂಡಗಳು ಹೀಗೆ ಟೆಂಟ್ ಹಾಕಿಕೊಳ್ಳುವುದು ಮತ್ತು ರಾತ್ರಿಯನ್ನು  ಕಳೆಯುವುದೆಲ್ಲ ಸಾಮಾನ್ಯವಾಗಿತ್ತು. ಖಲೀಫಾ ಉಮರ್(ರ)ರು ಟೆಂಟ್ ಹತ್ತಿರ ತಲುಪಿದರು. ಮಕ್ಕಳು ಅಳುವ ಶಬ್ದ.  ಮಕ್ಕಳು ಹಸಿವು ತಾಳಲಾರದೇ ಅಳುತ್ತಿರುವುದೆಂದು ಅವರಿಗೆ ಮನವರಿಕೆಯಾಯಿತು. ಅವರಾದರೋ ಬರಿಗೈಯಲ್ಲಿ ಬಂದಿದ್ದರು. ಈ ಮಕ್ಕಳ ಹಸಿವನ್ನು ತಣಿಸಲು ತಾನೇನು ಮಾಡಬಲ್ಲೆ  ಎಂದು ಯೋಚಿಸಿದರು. ತನ್ನ ಆಡಳಿತದ ವ್ಯಾಪ್ತಿಯೊಳಗೆ  ಮಕ್ಕಳು ಹಸಿವಿನಿಂದ ಬಳಲುವುದು ತನ್ನ ಆಡಳಿತಾತ್ಮಕ ವೈಫಲ್ಯವಾಗಿ ದೇವನು ಪರಿಗಣಿಸಿದರೆ ಏನುತ್ತರ ಕೊಡಬಲ್ಲೆ  ಎಂದು ಸ್ವಯಂ ಪ್ರಶ್ನಿಸಿಕೊಂಡರು. ಆ ಬಳಿಕ ಅವರು ಅಲ್ಲಿ ನಿಲ್ಲಲಿಲ್ಲ. ತಿರುಗಿ ಹಿಂದಕ್ಕೆ ನಡೆದರು. ಬೈತುಲ್ ಮಾಲ್  ಅಥವಾ ಖಜಾನೆಯನ್ನು ನೋಡಿಕೊಳ್ಳುವ ಅಧಿಕಾರಿಯನ್ನು ಕರೆದರು. ಧಾನ್ಯಗಳ ಚೀಲವನ್ನು ಕಾಪಿಡಲಾದ ಗೋದಾಮಿನ  ಬೀಗವನ್ನು ತೆರೆಯಲು ಹೇಳಿದರು. ಆಹಾರಕ್ಕೆ ಬೇಕಾದ ತುಪ್ಪವೂ ಸೇರಿದಂತೆ ಅಗತ್ಯದ ವಸ್ತುಗಳನ್ನು ಚೀಲಕ್ಕೆ ತುಂಬಿ ಬೆನ್ನಿಗೇರಿಸಿ ಹೊರಟರು. ಖಜಾನೆಯ ಅಧಿಕಾರಿಗೆ ಮರುಕವಾಯಿತು. ಖಲೀಫರೇ ಅಕ್ಕಿ ಚೀಲವನ್ನು ಹೊತ್ತುಕೊಂಡು  ಹೋಗುವುದೆಂದರೆ ಸಣ್ಣ ಸಂಗತಿಯೇ? ಆತ ಖಲೀಫರನ್ನು ತಡೆದು ನಿಲ್ಲಿಸಿದ. ನಾನು ಹೊರುತ್ತೇನೆ, ನೀವು ದಾರಿ  ತೋರಿಸಿ ಎಂದು ವಿನಂತಿಸಿದ. ಉಮರ್(ರ) ಪ್ರಶ್ನಿಸಿದರು,
‘ನಾಳೆ ಪರಲೋಕದಲ್ಲಿ ನೀನು ನನ್ನ ಭಾರವನ್ನು ಹೊರುವೆಯಾ? ಇಲ್ವಲ್ಲಾ, ಆದ್ದರಿಂದ ಈ ಭಾರವನ್ನು ನಾನೇ  ಹೊರುತ್ತೇನೆ.’

ಘಟನೆ 2.
ಒಂದು ದಿನ ರಾತ್ರಿ ನಾಲ್ಕನೇ ಖಲೀಫ ಅಲಿಯವರು(ರ) ಎದ್ದು ಕುಳಿತರು. ಅಪಾಯವೊಂದರಿಂದ  ತಪ್ಪಿಸಿಕೊಂಡು ಓಡಿ  ಬಂದವರಂತೆ  ಏದುಸಿರು ಬಿಡುತ್ತಿದ್ದರು. ಶತ್ರುಗಳು ಬೆನ್ನಟ್ಟಿ ಬಂದರೆ ವ್ಯಕ್ತಿಯ ವರ್ತನೆ ಹೇಗಿರುತ್ತದೋ ಆ ರೀತಿಯಲ್ಲಿ  ಅವರು ಭಯದಿಂದ ಕಂಪಿಸುತ್ತಿದ್ದರು. ಬಳಿಕ ಅವರು ದುಃಖ ಮತ್ತು ಭಾವುಕರಾಗಿ ಹೀಗೆ ಹೇಳಿದರು,
ಓ ಭೌತಿಕ ಜಗತ್ತೇ, ವಂಚಿಸಲು ನೀನು ಬೇರೆ ಯಾರನ್ನಾದರೂ ನೋಡಿಕೋ. ನಾನಾದರೋ ನಿನಗೆ ಮೂರು ತಲಾಕ್  ಹೇಳಿ ಬೇರ್ಪಟ್ಟಿದ್ದೇನೆ. ಮತ್ತೆ ನಿನ್ನನ್ನು ಹತ್ತಿರ ಸೇರಿಸಲು ಸಾಧ್ಯವಿಲ್ಲ.

ಅಂದಹಾಗೆ,
ಈ ಅಲಿ(ರ) ಮತ್ತು ಉಮರ್(ರ) ಇಬ್ಬರೂ ಸಾಮಾನ್ಯರಲ್ಲ. ಸ್ವರ್ಗದ ಸುವಾರ್ತೆ ಸಿಕ್ಕವರು. ಪರಲೋಕದ ವಿಚಾರಣೆಯಲ್ಲಿ  ಗೆಲುವನ್ನು ಶತಸಿದ್ಧಗೊಳಿಸಿಕೊಂಡವರು. ಪ್ರವಾದಿ(ಸ)ರ ಜೊತೆ ಬದುಕು ಸಾಗಿಸಿದವರು. ಉಮರ್(ರ)ರ ಮಗಳು ಹ ಫ್ಸಾರನ್ನು ಪ್ರವಾದಿ(ಸ) ಮದುವೆಯಾಗಿದ್ದಾರೆ, ಪ್ರವಾದಿ(ಸ)ಯವರ ಮಗಳು ಫಾತಿಮಾರನ್ನು ಅಲಿ(ರ) ವಿವಾಹವಾಗಿದ್ದಾರೆ.  ಅತ್ಯಂತ ಪ್ರಾಮಾಣಿಕರು, ಸತ್ಯವಂತರು, ಇಸ್ಲಾಮಿನ ಪ್ರಭಾವಿ ನಾಯಕರೂ ಆದವರಿವರು. ಇಂಥವರೇ ಈ ರೀತಿಯಲ್ಲಿ  ಮರಣಾನಂತರದ ಬದುಕಿನ ಬಗ್ಗೆ ಎಚ್ಚರಿಕೆ ಹೊಂದುವುದೆಂದರೆ, ಅದನ್ನು ವ್ಯಾಖ್ಯಾನಿಸಬೇಕಾದುದು ಹೇಗೆ? ನಿಜವಾಗಿ,

ಈ ಎರಡೂ ಘಟನೆಗಳಲ್ಲಿ ಒಂದು ಪ್ರಬಲ ಸಂದೇಶವಿದೆ. ಅದುವೇ ಪರಲೋಕ. ಇಸ್ಲಾಮಿನ ತಾಯಿ ಬೇರೂ ಇದುವೇ.  ಇಹಲೋಕದ ಕರ್ಮಗಳ ಬಗ್ಗೆ ಪರಲೋಕದಲ್ಲಿ ಪ್ರಶ್ನಿಸಲಾಗುವುದು ಮತ್ತು ಆ ಪ್ರಶ್ನೆಗೆ ನೀಡುವ ಉತ್ತರದ ಆಧಾರದಲ್ಲಿ  ವ್ಯಕ್ತಿಯ ಸ್ವರ್ಗ-ನರಕವನ್ನು ತೀರ್ಮಾನಿಸಲಾಗುವುದು ಎಂಬ ಅತಿ ಶಕ್ತಿ ಶಾಲಿ ನಂಬಿಕೆ ಇರುವುದು ಇಸ್ಲಾಮಿನಲ್ಲಿ ಮಾತ್ರ  ಎಂದೇ ಹೇಳಬಹುದು. ಪರಲೋಕ ಜೀವನದ ಮೇಲೆ ವಿಶ್ವಾಸ ಇಡುವುದು ಮುಸ್ಲಿಮರ ಮೂಲಭೂತ ಅಗತ್ಯವಾಗಿದೆ.  ಪವಿತ್ರ ಕುರ್‌ಆನ್ ಈ ಕುರಿತಂತೆ ಒಂದು ಪ್ರಬಲ ಮಾತನ್ನು ಹೇಳುತ್ತದೆ,

“ನೀವು ಕುರ್‌ಆನ್ ಪಠಿಸುವಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸದವರ ಮಧ್ಯೆ ನಾವು ಒಂದು ತೆರೆಯನ್ನು  ಹಾಕಿ ಬಿಡುತ್ತೇವೆ.” (17: 45)

ಈ ವಚನದಲ್ಲಿ ಬಹುಮುಖ್ಯವಾದ ಸಂದೇಶವೊಂದಿದೆ. ಪವಿತ್ರ ಕುರ್‌ಆನ್‌ನೊಂದಿಗೆ ನಿಮಗೆ ಗಾಢ ಸಂಬಂಧ ಬೆಳೆಯಬೇಕಾದರೆ ನಿಮ್ಮಲ್ಲಿ ಪರಲೋಕ ಜೀವನದ ಬಗ್ಗೆ ಪ್ರಬಲ ವಿಶ್ವಾಸ ಇರಬೇಕಾದುದು ಅಗತ್ಯ ಎಂಬುದೇ ಈ ಸಂದೇಶ.  ಇಸ್ಲಾಮ್ ಮತ್ತು ಇತರ ವಿಚಾರಧಾರೆಗಳ ನಡುವಿನ ಬಲುದೊಡ್ಡ ವ್ಯತ್ಯಾ ಸವೇ ಈ ಪರಲೋಕ ಪರಿಕಲ್ಪನೆ. ಓರ್ವ  ವ್ಯಕ್ತಿಯನ್ನು ಸಜ್ಜನನಾಗಿ ಮತ್ತು ಮೌಲ್ಯವಂತ ವ್ಯಕ್ತಿಯಾಗಿ ಬದಲಿಸುವ ಬಲುದೊಡ್ಡ ಆಯುಧವಾಗಿ ಇಸ್ಲಾಮ್ ಪರಲೋಕ  ಜೀವನವನ್ನು ಕಟ್ಟಿ ಕೊಡುತ್ತದೆ. ಪರಲೋಕ ವಿಚಾರಣೆಯ ಬಗ್ಗೆ ಗಾಢ ನಂಬಿಕೆ ಇರುವ ವ್ಯಕ್ತಿ ಪ್ರತಿ ನಿಮಿಷವನ್ನೂ  ಎಚ್ಚರಿಕೆಯಿಂದ ಕಳೆಯುತ್ತಾನೆ/ಳೆ. ಆತ/ಕೆ ಯಾವುದೇ ಕೆಲಸವನ್ನು ಮಾಡುವ ಮೊದಲು ಇದು ಪರಲೋಕದಲ್ಲಿ ತನ್ನನ್ನು  ಇಕ್ಕಟ್ಟಿಗೆ ಸಿಲುಕಿಸಬಲ್ಲುದೇ ಎಂದು ಸ್ವಯಂ ಪ್ರಶ್ನಿಸಿಕೊಳ್ಳುತ್ತಾನೆ. ದೇವನು ವಿಚಾರಿಸಿದರೆ ತಾನೇನು ಉತ್ತರ ಕೊಡಬಲ್ಲೆ   ಎಂದು ಚಿಂತಿಸುತ್ತಾನೆ. ಆತ ಸರಕಾರಿ ಅಧಿ ಕಾರಿಯಾಗಿರಬಹುದು, ನ್ಯಾಯವಾದಿಯಾಗಿರಬಹುದು, ನ್ಯಾಯಾಧೀಶರಾಗಿರಬಹುದು ಅಥವಾ ರಾಜಕಾರಣಿ, ಸೇಲ್ಸ್ ಮಾನ್, ಆಟೋ ಚಾಲಕ, ಕ್ರೀಡಾಪಟು, ವಿದ್ವಾಂಸ, ಶಿಕ್ಷಕ, ಕೂಲಿ ಕಾರ್ಮಿಕ,  ವ್ಯಾಪಾರಿ... ಹೀಗೆ ಏನೇ ಆಗಿದ್ದರೂ ಆತ ಪರಲೋಕದ ಕುರಿತಂತೆ ಗಾಢ ವಿಶ್ವಾಸ ಇದ್ದವನಾಗಿದ್ದರೆ ತನ್ನ ಕೆಲಸಕ್ಕಿಂತ  ಮೊದಲು ಇಂಥದ್ದೊಂದು  ಪ್ರಶ್ನೆಯನ್ನು ಸ್ವಯಂ ಕೇಳಿಯೇ ಕೇಳುತ್ತಾನೆ. ಅಷ್ಟಕ್ಕೂ,

ಪರಲೋಕದ ವಿಚಾರಣೆಯ ಬಗ್ಗೆ ಎಚ್ಚರಿಕೆಯನ್ನು ಹೊಂದಬೇಕಾದರೆ ಇಹಲೋಕದ ಬದುಕಿನ ಕುರಿತಂತೆ ಸ್ಪಷ್ಟತೆಯನ್ನೂ  ಹೊಂದಿರಬೇಕಾಗುತ್ತದೆ. ಇಸ್ಲಾಮ್ ಪರಲೋಕವನ್ನು ಕಟ್ಟಿಕೊಡುವುದು ಶಾಶ್ವತ ಜೀವನ ಎಂಬ ರೀತಿಯಲ್ಲಿ.  ಇಹಲೋಕವನ್ನು ತಾತ್ಕಾಲಿಕ ಜೀವನ ಎಂದೂ ಅದು ಪರಿಚಯಿಸುತ್ತದೆ. ಇಹಲೋಕದ ಬದುಕನ್ನು ಪ್ರವಾದಿ(ಸ) ಯಾತ್ರಿಕ ನಿಗೆ ಹೋಲಿಸಿದ್ದಾರೆ. ಪವಿತ್ರ ಕುರ್‌ಆನ್ ಅಂತೂ ಇಹಲೋಕದ ಬದುಕನ್ನು ಆಟ-ವಿನೋದ ಗಳ ಆಡುಂಬೋಲದಂತೆ   ಚಿತ್ರಿಸಿದೆ. ಇಹಲೋಕದ ಮೋಹಕ್ಕೆ ಬಿದ್ದರೆ ಪರಲೋಕ ಜೀವನ ನಷ್ಟವಾಗುತ್ತದೆ ಎಂಬ ಸಂದೇಶವನ್ನು ಪ್ರವಾದಿಯವರು  ಮತ್ತು ಪವಿತ್ರ ಕುರ್‌ಆನ್ ಬಾರಿ ಬಾರಿಗೂ ಎಚ್ಚರಿಸುವುದರ ಹಿಂದೆ ಪರಲೋಕ ಬದುಕನ್ನು ಗಂಭೀರವಾಗಿ  ಪರಿಗಣಿಸಬೇಕೆಂಬ ಉದ್ದೇಶವಿದೆ. ಯಾವಾಗ ಇಹಲೋಕದ ವಾಸ್ತವಿಕತೆಯನ್ನು ಕುರ್‌ಆನ್ ಪರಿಚಯಿಸಿದ ರೂಪದಲ್ಲಿ  ಪರಿಗಣಿಸಲು ಕುರ್‌ಆನ್ ಓದುಗನಿಗೆ ಸಾಧ್ಯವಾಗುತ್ತದೋ ಆತನಿಗೆ/ಕೆಗೆ ಕುರ್‌ಆನ್ ಅಂತರಾತ್ಮಕ್ಕೆ ಇಳಿಯಬಲ್ಲುದು  ಎಂಬುದೇ ಬನೀ ಇಸ್ರಾಈಲ್ ಅಧ್ಯಾಯದ 45 ವಚನದ ಒಳಾರ್ಥ. ಪವಿತ್ರ ಕುರ್‌ಆನ್ ಇನ್ನೆರಡು ಕಡೆಗಳಲ್ಲಿ  ಪರಲೋಕವನ್ನು ಭಯಪಟ್ಟು ಬದುಕುವವರ ಕುರಿತಂತೆ ಅತ್ಯಂತ ಪರಿಣಾಮಕಾರಿಯಾಗಿ ಹೀಗೆ ವಿವರಿಸಿದೆ,

‘ದೇವನ ನಿಜವಾದ ದಾಸರು ಭೂಮಿಯ ಮೇಲೆ ಸೌಮ್ಯ ನಡಿಗೆಯಲ್ಲಿ ನಡೆಯುತ್ತಾರೆ. ನಮ್ಮ ಪ್ರಭೂ, ನಮ್ಮನ್ನು  ನರಕದ ಯಾತನೆಯಿಂದ ರಕ್ಷಿಸು. ಅದರ ಯಾತನೆಯಂತೂ ಪ್ರಾಣಾಂತಿಕವಾಗಿದೆ. (25:64)’ ಎಂದು ಪ್ರಾರ್ಥಿಸುತ್ತಾರೆ. 
ಪರಲೋಕದ ಬಗ್ಗೆ ಆಳ ಪ್ರಜ್ಞೆ ಇರುವವರು ಎಂಥವರೆಂದರೆ, ‘ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆ ಎಂಬ  ಪ್ರಜ್ಞೆಯಿಂದ  ಕಂಪಿಸುತ್ತಿರುವ ಹೃದಯಗಳಿರುವವರು (25: 60)’ ಎಂದಿದೆ. ಅಂದರೆ,

ಮುಸ್ಲಿಮರ ಬದುಕು ಪರಲೋಕ ವಿಚಾರಣೆ, ಶಿಕ್ಷೆ-ರಕ್ಷೆಗಳ ಕುರಿತಂತೆ ಆಳ ಪ್ರಜ್ಞೆಯಿಂದ ಮತ್ತು ಅತೀವ ಸ್ಪಷ್ಟತೆಯಿಂದ  ಕೂಡಿರಬೇಕು ಎಂಬುದನ್ನೇ ಹೇಳುತ್ತದೆ. ನಿಜವಾಗಿ, ಇಂಥ ಭಾವದಲ್ಲಿ ಬದುಕು ಸವೆಸುವುದು ತೀರಾ ಸುಲಭ ಅಲ್ಲ.  ಪರಲೋಕ ಕಣ್ಣೆದುರು ಇಲ್ಲ. ಅದೊಂದು ನಂಬಿಕೆಯೇ  ಹೊರತು ಯಾರೂ ಅದನ್ನು ಅನುಭವಿಸಿದವರಿಲ್ಲ. ಹೀಗೆ ಅನುಭವಿಸದೇ ಇರುವ ಸಂಗತಿಯೊಂದನ್ನು ಅನುಭವಿಸಿದ ರೀತಿಯಲ್ಲಿ ಬದುಕುವುದಕ್ಕೆ ಪ್ರಬಲ ವಿಶ್ವಾಸದ ಅಗತ್ಯವಿದೆ.  ಆದ್ದರಿಂದಲೇ ಅನೇಕ ಬಾರಿ ಅತ್ಯಂತ ಸಜ್ಜನರು ಮತ್ತು ಧರ್ಮಭೀರು ಎನಿಸಿಕೊಂಡವರೂ ಪರಲೋಕ ಪ್ರಜ್ಞೆಯಿಲ್ಲದವರಂತೆ ವರ್ತಿಸುವುದಿದೆ. ಇವರು ಭೌತಿಕ ಜಗತ್ತಿನ ನಿಯಮಗಳಿಗೆ ಭಯಪಟ್ಟು ಅಭೌತಿಕ ಜಗತ್ತಾದ ಪರಲೋಕದ  ವಿಚಾರಣೆಗೆ ಭಯಪಡದೇ ಇರುವುದೂ ನಡೆಯುತ್ತದೆ. ಅಂಥ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ತೀವ್ರ ವಿಮರ್ಶೆಗಳೂ  ಎದುರಾಗುತ್ತವೆ. ಭೌತಿಕ ಜಗತ್ತಿನ ಬದುಕಿನಲ್ಲಿ ಅನುಭವಕ್ಕೆ ಬರದೇ ಇರುವ ವಿಷಯವನ್ನು ಅನುಭವಿಸಿದಂತೆ ಬದುಕುವುದು  ಸವಾಲಿನದ್ದಾಗಿರುವುದರಿಂದಲೇ ಕುರ್‌ಆನ್ ಪದೇ ಪದೇ ಪರಲೋಕ ವಿಚಾರಣೆ ಮತ್ತು ಶಾಶ್ವತ ಬದುಕಿನ ಕುರಿತಂತೆ  ಎಚ್ಚರಿಕೆಯನ್ನು ನೀಡಿದೆ ಎಂದೇ ಹೇಳಬೇಕಾಗಿದೆ.

ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದರೆ ಇಂತಿಷ್ಟು ದಂಡ ನೀಡಬೇಕಾಗುತ್ತದೆ ಎಂಬುದು ನಿತ್ಯ ಬದುಕಿನ ಅನುಭವದ  ವಿಷಯವಾಗಿದೆ. ಆದರೆ, ಯಾರಿಗೂ ಕಾಣದಂತೆ ಕದ್ದರೆ ಅಥವಾ ಅತೀವ ಬುದ್ಧಿವಂತಿಕೆಯನ್ನು ತೋರಿ ವ್ಯಕ್ತಿಯೋರ್ವನಿಗೆ  ವಂಚಿಸಿದರೆ ಮತ್ತು ಈ ಎರಡೂ ಸಂದರ್ಭಗಳಲ್ಲಿ ಅಪರಾಧಿಯೆಂದು ಸಾಬೀತುಪಡಿಸಲು ಭೌತಿಕ ಕಾನೂನು ಸಂಹಿತೆಗಳು  ವಿಫಲವಾಗುತ್ತದೆಂದು ಖಚಿತವಿದ್ದರೆ...? ಪರಲೋಕ ಜೀವನದ ಪರಿಕಲ್ಪನೆ ಮಹತ್ವವನ್ನು ಪಡೆಯುವುದು ಇಂಥ ಸ್ಥಿತಿಯಲ್ಲಿ.  ಸಿಸಿ ಕ್ಯಾಮರಾಗಳು ಇರಲಿ ಇಲ್ಲದಿರಲಿ, ಆಯಾ ಪೊಲೀಸರಿಗೆ ಗೊತ್ತಾಗಲಿ ಆಗದೇ ಇರಲಿ, ಆದರೆ ತನ್ನನ್ನು ಸದಾ  ನೋಡುವವ ಒಬ್ಬನಿದ್ದಾನೆ ಮತ್ತು ಆತ ತನ್ನ ಪ್ರತಿ ಕೃತ್ಯವನ್ನೂ ದಾಖಲಿಸುತ್ತಾನೆ ಹಾಗೂ ಮರಣಾನಂತರ ಈ ಕೃತ್ಯದ ಬಗ್ಗೆ  ಪ್ರಶ್ನಿಸುತ್ತಾನೆ ಎಂಬ ಪ್ರಜ್ಞೆ ಇರಬೇಕು ಎಂಬುದು ಇಸ್ಲಾಮಿನ ಅತಿ ಪ್ರಬಲ ನಿಲುವಾಗಿದೆ. ಈ ನಿಲುವೇ ಸ್ವಸ್ಥ ಸಮಾಜದ  ಅಡಿಗಲ್ಲಾಗಿದೆ ಎಂಬುದಾಗಿ ಇಸ್ಲಾಮ್ ಭಾವಿಸುತ್ತದೆ. ಮಾತ್ರವಲ್ಲ,

ಇಂಥ ಭಾವನೆಯೊಂದಿಗೆ ಬದುಕಿ ತೋರಿಸಿದ ದೊಡ್ಡದೊಂದು ಸಮೂಹ ಇತಿಹಾಸದಲ್ಲಿ ಗತಿಸಿ ಹೋಗಿದೆ. ಸ್ವತಃ ಪ್ರವಾದಿ  ಮುಹಮ್ಮದರೇ(ಸ) ಇಂಥ ಬದುಕನ್ನು ಬದುಕಿ ತೋರಿಸಿಕೊಟ್ಟಿ ದ್ದಾರೆ. ಅವರ ಅನುಯಾಯಿಗಳೂ ‘ಇದು ಸಾಧ್ಯ’ ಎಂದು  ಸಾಬೀತುಪಡಿಸಿದ್ದಾರೆ. ಮಾತ್ರವಲ್ಲ, ಅತ್ಯಂತ ದುಷ್ಟರಾಗಿದ್ದ ಮತ್ತು ಅನ್ಯಾಯಗಳನ್ನೇ ನ್ಯಾಯವೊಂದು ಬದುಕುತ್ತಿದ್ದವರನ್ನೇ  ಇಂಥ ಪ್ರಜ್ಞೆಯ ಬದುಕು ಆಮೂಲಾಗ್ರವಾಗಿ ಬದಲಾಯಿಸಿದ್ದನ್ನು ಮತ್ತು ಅವರನ್ನು ಅತ್ಯುನ್ನತ ವ್ಯಕ್ತಿಗಳಾಗಿ ಮಾರ್ಪಡಿಸಿದ್ದನ್ನೂ ಇತಿಹಾಸ ಕಂಡಿದೆ. ಅಂದಹಾಗೆ,

ಖಲೀಫರುಗಳನ್ನೇ ಅಲುಗಾಡಿಸುವ ಶಕ್ತಿ ಇಸ್ಲಾಮಿನ ಪರಲೋಕ ಪರಿಕಲ್ಪನೆಗೆ ಇದೆ ಎಂಬುದನ್ನು ಘಟನೆ 1 ಮತ್ತು 2  ಸಾಬೀತುಪಡಿಸುತ್ತದೆ.

Thursday, January 2, 2025

ರಮಝಾನ್ ನಲ್ಲಿ ಹಾಫಿಝ್ ಗಳನ್ನು ಹುಡುಕುವ ಮಸೀದಿಗಳು ಮತ್ತು ಹಾಫಿಝ್ ಗಳು




ಏ.ಕೆ. ಕುಕ್ಕಿಲ

ಮದ್ರಸದಲ್ಲಿ ಕಲಿತಿರುವ ಮತ್ತು ಕುರ್‌ಆನ್ ಕಂಠಪಾಠ ಮಾಡಿರುವ (ಹಾಫಿಝï) ಬಿಹಾರದ ಹರೆಯದ ಯುವಕನೊಬ್ಬ  ಹೊಟೇಲ್ ಒಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿರುವುದನ್ನು ಇತ್ತೀಚೆಗೆ ಒಬ್ಬರು ಬರೆದುಕೊಂಡಿದ್ದರು. ಹಾಗಂತ, ಕ್ಲೀನಿಂಗ್  ಕೆಲಸ ಮಾಡಬಾರದು, ಅದೇನು ನಿಕೃಷ್ಟವಾ ಎಂಬ ಪ್ರಶ್ನೆ ಇರಬಹುದು. ನಿಕೃಷ್ಟವೂ ಅಲ್ಲ, ಮಾಡಬಾರದು ಎಂದೂ ಅಲ್ಲ.  ಆದರೆ, ಕುರ್‌ಆನ್ ಕಂಠ ಪಾಠ ಮಾಡಿರುವ ಮತ್ತು ಆಲಿಮ್ ಎಂದು ಗುರುತಿಸಿಕೊಳ್ಳಬಹುದಾದಷ್ಟು ಕಲಿತಿರುವ ಓರ್ವ  ವ್ಯಕ್ತಿ ಕ್ಲೀನಿಂಗ್ ಕೆಲಸಕ್ಕೆ ಸೇರಬೇಕಾ ಎಂಬುದು ಇಲ್ಲಿನ ತಕರಾರು.

 ಒಂದು ಮಗು ಮದ್ರಸಾ ವಿದ್ಯಾಭ್ಯಾಸವನ್ನು ಪಡೆದು  ಕುರ್‌ಆನ್ ಕಂಠಪಾಠವನ್ನೂ ಮಾಡುವುದೆಂದರೆ ಅಲ್ಲಿ ಆ ಮಗುವಿನ ಶ್ರಮವಷ್ಟೇ ಇರುವುದಲ್ಲ, ಸಮುದಾಯದ ಬೆವರೂ  ಅದರಲ್ಲಿರುತ್ತದೆ. ಆ ಮಗುವಿಗಾಗಿ ಸಮುದಾಯ ಹಣ ಹೂಡುತ್ತದೆ. ರಮಝಾನ್ ತಿಂಗಳು ಬಂತೆಂದರೆ, ಇಂಥ  ಮದ್ರಸಾಗಳು ಚಂದಾ ಸಂಗ್ರಹಕ್ಕೆಂದು  ಪ್ರತಿನಿಧಿಗಳಿಗೆ ಬರುತ್ತಾರೆ. ವಿಶೇಷವಾಗಿ ಉತ್ತರ ಭಾರತದಿಂದಲೂ ಪ್ರತಿನಿಧಿಗಳು  ಬರುತ್ತಾರೆ. ನಾವು ನಮ್ಮಿಂದಾದಷ್ಟು ಸಹಾಯ ಮಾಡುತ್ತೇವೆ. ಆದರೆ, ಈ ಸಹಾಯದ ಆಚೆಗೆ ಈ ಮದ್ರಸಾಗಳು ಎಂಥ  ವಿದ್ಯಾರ್ಥಿಗಳನ್ನು ತಯಾರಿಸುತ್ತವೆ? ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಅಲ್ಲಿ ಎಷ್ಟು ಮಹತ್ವವನ್ನು ನೀಡಲಾಗುತ್ತದೆ? ಅಲ್ಲಿಯ  ಕಲಿಕಾ ಸ್ವರೂಪವೇನು? ಸಂಶೋಧನೆಗೆ ಅಲ್ಲಿ ಒತ್ತು ನೀಡಲಾಗುತ್ತಿದೆಯೇ ಅಥವಾ ಹಿಂದಿನ ವಿದ್ವಾಂಸರ ಸಂಶೋಧನೆಯ  ಕಲಿಕೆಗಷ್ಟೇ ಓದನ್ನು ಸೀಮಿತಗೊಳಿಸಲಾಗುತ್ತಿದೆಯೇ? ಮುಸ್ಲಿಮ್ ಮತ್ತು ಇಸ್ಲಾಮ್ ಕೇಂದ್ರಿತವಾಗಿ ವರ್ತಮಾನದ  ರಾಜಕೀಯವು ಎತ್ತುವ ಹತ್ತು-ಹಲವು ಪ್ರಶ್ನೆಗಳಿಗೆ ಉತ್ತರಿಸಬಲ್ಲ ಮತ್ತು ಇಂಥ ಸವಾಲುಗಳ ಒಳಹೂರಣವನ್ನು ಅರ್ಥೈಸಿ,  ಅದಕ್ಕೆ ತಕ್ಕುದಾಗಿ ವೈಚಾರಿಕ ಪ್ರಜ್ಞೆಯಿಂದ ಉತ್ತರಿಸಬಲ್ಲ ಬುದ್ಧಿವಂತರನ್ನು ಇಲ್ಲಿ ತಯಾರಿಸಲಾಗುತ್ತಿದೆಯೇ ಎಂದು  ಪ್ರಶ್ನಿಸಿಕೊಂಡಿದ್ದೇವೆಯೇ? ಯಾಕೆಂದರೆ,

ಈ ದೇಶದಲ್ಲಿ ಪ್ರತಿವರ್ಷ ಮದ್ರಸಾಗಳಿಂದ 5 ಸಾವಿರ ಮಂದಿ ಬಿರುದಿನೊಂದಿಗೆ ಹೊರಬರುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಲ್ಲಿ ಮದ್ರಸಾ  ಎಂದು ಹೇಳಿರುವುದು ಬೆಳಿಗ್ಗೆ ಶಾಲೆ ಪ್ರಾರಂಭವಾಗುವುದಕ್ಕಿಂತ  ಮೊದಲು ಮತ್ತು ಸಂಜೆ ಶಾಲೆ ಮುಗಿದ ಬಳಿಕ ಹೋಗಿ  ಮಕ್ಕಳು ಒಂದೆರಡು ಗಂಟೆಯ ಧಾರ್ಮಿಕ ಶಿಕ್ಷಣ ಪಡೆಯುತ್ತಾರಲ್ಲ, ಅದನ್ನಲ್ಲ. ಬರೇ ಮದ್ರಸಾಗಳಲ್ಲೇ  ಕಲಿಯುತ್ತಿರುವ  ಮತ್ತು ಬಹುತೇಕ ಹಾಸ್ಟೆಲ್‌ಗಳಲ್ಲಿ ತಂಗಿ ಕಲಿಯುತ್ತಿರುವ ವಿದ್ಯಾಭ್ಯಾಸ ಕ್ರಮ ವನ್ನು. ಹೀಗೆ ಕಲಿತ ಮಕ್ಕಳು ಬಿರುದಿನೊಂದಿಗೆ ಈ ಶಾಲೆಯಿಂದ ಹೊರಬೀಳುತ್ತಾರೆ. ಅನೇಕ ಬಾರಿ ರಮಝಾನ್‌ನಲ್ಲಿ ತರಾವೀಹ್ ಮತ್ತು ಕಿಯಾಮುಲ್ಲೈಲ್‌ಗಾಗಿ  ಆಯ್ಕೆಯಾಗುವುದೂ ಇವರೇ. ರಮಝಾನ್ ಬರುವುದಕ್ಕಿಂತ ತಿಂಗಳ ಮೊದಲು ಹೆಚ್ಚಿನ ಮಸೀದಿಗಳು ಇಂಥ  ಹಾಫಿಝï‌ಗಳ ತಲಾಶೆಯಲ್ಲಿ ತೊಡಗುತ್ತವೆ. ಸ್ಥಳೀಯವಾಗಿ ಇಂಥ ಹಾಫಿಝï‌ಗಳು ಅಲಭ್ಯವಾಗಿರುವುದೇ ಇದಕ್ಕೆ ಕಾರಣ.  ಅದೇವೇಳೆ, ಬಿಹಾರ, ಜಾರ್ಖಂಡ್, ಉತ್ತರಾ ಖಂಡ್, ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಗಳು ಇಂಥ  ಹಾಫಿಝï‌ಗಳನ್ನು ಧಾರಾಳವಾಗಿ ತಯಾರಿಸುತ್ತವೆ. ಆದ್ದರಿಂದಲೇ ರಮಝಾನ್‌ನಲ್ಲಿ ಹೆಚ್ಚಿನ ಮಸೀದಿಗಳಲ್ಲಿ ಉತ್ತರ ಭಾರತ  ಮತ್ತು ಕೆಲವೆಡೆ ಉತ್ತರ ಕರ್ನಾಟಕದ ಹಾಫಿಝï‌ಗಳೇ ತರಾವೀಹ್ ಮತ್ತು ಕಿಯಾಮುಲ್ಲೈಲ್‌ಗೆ ನೇತೃತ್ವ ನೀಡುವುದನ್ನು  ಕಾಣಬಹುದು. ಇದು ತಪ್ಪು ಎಂದಲ್ಲ. ಆದರೆ,

ಆಧುನಿಕ ಶಿಕ್ಷಣಕ್ಕೆ ಮಹತ್ವ ಕೊಡದೇ ಬರೇ ಮದ್ರಸಾ ಶಿಕ್ಷಣವನ್ನೇ ಗುರಿಯಾಗಿಸಿಕೊಂಡು ಕಲಿಯುವುದು ಮತ್ತು ಬಿರುದಿನೊಂದಿಗೆ ಹೊರಬರುವ ಇವೇ ಮಂದಿ ಆ ಬಳಿಕ ಮಸೀದಿ ಇಮಾಮರಾಗಿ ಸಮುದಾಯಕ್ಕೆ ನೇತೃತ್ವ ಮತ್ತು ಮಾರ್ಗದರ್ಶನ ನೀಡುವ ಅತೀ ಮಹತ್ವಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದು ನಡೆಯುತ್ತದೆ. ಇವರೇ ಮುಖ್ಯ ವಿಷಯಗಳಲ್ಲಿ  ಧಾರ್ಮಿಕ ಅಭಿಪ್ರಾಯ ವ್ಯಕ್ತಪಡಿಸುವ ಆಲಿಮ್‌ಗಳಾಗುತ್ತಾರೆ. ಅನೇಕ ಬಾರಿ ಇವರು ರಾಜಕೀಯ ಕುತಂತ್ರದ ಪ್ರಶ್ನೆಗಳ  ಒಳಮರ್ಮವನ್ನು ತಿಳಿಯದೇ ಅಭಿಪ್ರಾಯ ಹಂಚಿಕೊಂಡು  ಸಮುದಾಯವನ್ನು ಮುಜುಗರಕ್ಕೆ ಸಿಲುಕಿಸುವುದೂ ಇದೆ.  ಉತ್ತರ ಭಾರತದಿಂದ ಇಂಥ ವಿದ್ವಾಂಸರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗೆ ಒಳಗಾಗುವುದೂ ಇದೆ. ಅವರ ವಿಡಿಯೋ ವೈರಲ್ ಆಗುವುದೂ ಇದೆ.  ಇದು  ಅವರ ಸಮಸ್ಯೆ ಮಾತ್ರ ಅಲ್ಲ. ಸಮುದಾಯದ ದೂರದೃಷ್ಟಿಯ ಕೊರತೆಯೂ ಇದರ ಹಿಂದಿದೆ. ಯಾವುದೇ ಮದ್ರಸದ  ಚಂದಾಕ್ಕೆ ಬರುವವರಲ್ಲಿ ನಾವು ಒಂದಷ್ಟು ಮಾತುಕತೆ ನಡೆಸಬೇಕು. ಆ ಮದ್ರಸಾದ ಕಲಿಕಾ ಸ್ವರೂಪದಿಂದ ಹಿಡಿದು ಭೌತಿಕ  ಶಿಕ್ಷಣ ಕೊಡುವುದಕ್ಕೆ ಅವರಲ್ಲಿರುವ ಅಡಚಣೆಗಳೇನು ಅಥವಾ ಅದಕ್ಕೆ ತಯಾರಿ ನಡೆಸದೇ ಇರುವುದಕ್ಕೆ ಕಾರಣಗಳೇನು  ಇತ್ಯಾದಿಯಾಗಿ ಕನಿಷ್ಠ ಮಾಹಿತಿ ಪಡಕೊಳ್ಳುವ ಪ್ರಯತ್ನ ನಡೆಸಬೇಕು. ಯಾಕೆಂದರೆ,

ಮದ್ರಸಾ ಶಿಕ್ಷಣಕ್ಕಾಗಿ ಚಂದಾ ನೀಡುವುದೆಂದರೆ ಮದುವೆಗೋ ಔಷಧಿಗೋ ಚಂದಾ ನೀಡಿದಂತಲ್ಲ. ಈ ಮದ್ರಸಾಗಳು  ಸಮುದಾಯಕ್ಕೆ ಮಾರ್ಗದರ್ಶನ ನೀಡಬಲ್ಲವರನ್ನು ತಯಾರಿಸುತ್ತವೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಕೌಟುಂಬಿಕ  ವಿಷಯಗಳಲ್ಲಿ ಅವರಿಂದ ಸಮಾಜ ಅಭಿಪ್ರಾಯವನ್ನು ನಿರೀಕ್ಷಿಸುತ್ತದೆ. ಇಂಥ ಸ್ಥಾನಕ್ಕೆ ಏರುವವರನ್ನು ತಯಾರಿಸುವ  ಮದ್ರಸಾಗಳು ಬರೇ ಕುರ್‌ಆನ್ ಕಂಠಪಾಠ ಮಾಡುವುದು, ಧಾರ್ಮಿಕ ಸಂಗತಿಗಳನ್ನು ತಿಳಿಸುವುದರಿಂದ ಒಟ್ಟು ಸಮಾಜ ಮತ್ತು ಸಮುದಾಯಕ್ಕೆ ಏನೂ ಪ್ರಯೋಜನವಿಲ್ಲ. ವರ್ತಮಾನದ  ಸವಾಲುಗಳನ್ನು ಎದುರಿಸಲು ಮತ್ತು ಅವುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ಸಮರ್ಥರನ್ನು ಇವು  ತಯಾರಿಸಬೇಕು. ಒಂದುವೇಳೆ, ಇಂಥ ಮದ್ರಸಾಗಳ ಪ್ರತಿನಿಧಿಗಳನ್ನು ಕೂರಿಸಿ ಅವರ ಜೊತೆ ಧಾರ್ಮಿಕ ಮತ್ತು ಭೌತಿಕ  ಶಿಕ್ಷಣಗಳ ಅಗತ್ಯ ಮತ್ತು ಮಹತ್ವಗಳ ಬಗ್ಗೆ ಅರಿವು ಮೂಡಿಸಿದರೆ, ಅವರು ಮರಳಿದ ಬಳಿಕ ಕನಿಷ್ಠ ತಮ್ಮೂರ ಆಡಳಿತ  ಸಮಿತಿಯಲ್ಲಿ ಈ ಬಗ್ಗೆ ವಿಚಾರವನ್ನು ಹಂಚಿಕೊಳ್ಳಬಹುದು. ಮುಂದಿನ ಬಾರಿ ಚಂದಾ ಸಂಗ್ರಹಕ್ಕೆ ಬರುವಾಗ ಮದ್ರಸಾದ  ಆಧುನೀಕರಣ ಮತ್ತು ಭೌತಿಕ ಶಿಕ್ಷಣ ಕೊಡುವ ಬಗ್ಗೆ ನಡೆದಿರುವ ಚರ್ಚೆ ಮತ್ತು ಅಂದಾಜು ವೆಚ್ಚದ ಪಟ್ಟಿಯನ್ನಾದರೂ  ತರಬಹುದು. ಚಂದಾ ನೀಡುವ ಮೊದಲು ಶಿಕ್ಷಣದ ಸ್ವರೂಪ ಮತ್ತು ಪ್ರಗತಿಯ ಬಗ್ಗೆ ಜನರು ಪ್ರಶ್ನಿಸುತ್ತಾರೆ ಎಂಬ ಭಾವ  ಮದ್ರಸಾ ಆಡಳಿತ ಸಮಿತಿಗಳಲ್ಲಿ ಮೂಡತೊಡಗಿದರೆ ಸಹಜವಾಗಿಯೇ ಪರಿವರ್ತನೆಗೆ ಬಾಗಿಲು ತೆರೆದುಕೊಳ್ಳುತ್ತದೆ.  ಮುಖ್ಯವಾಗಿ, 

ಇವತ್ತು ವ್ಯಕ್ತಿತ್ವ ವಿಕಸನ ಎಂಬುದು ವಿದ್ಯಾರ್ಥಿಗಳಿಗೆ ಒಂದು ಪಠ್ಯವೇ ಆಗುವಷ್ಟು ಮಹತ್ವವನ್ನು  ಪಡೆದುಕೊಂಡಿದೆ. ಇಸ್ಲಾಮ್ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಆತ್ಮಸಂಸ್ಕರಣೆಗೆ ಬಹಳಷ್ಟು ಮಹತ್ವವನ್ನೂ ನೀಡುತ್ತದೆ. ಇಸ್ಲಾಮಿನಲ್ಲಿ  ಶಿಕ್ಷಣದ ಬಹಳ ಮುಖ್ಯ ಗುರಿಗಳಲ್ಲಿ ವ್ಯಕ್ತಿತ್ವ ವಿಕಸನವೂ ಒಂದು. ಪ್ರವಾದಿ(ಸ)ಯವರನ್ನು ಕಳುಹಿಸಿರುವುದರ ಉದ್ದೇಶಗಳಲ್ಲಿ ಇದೂ ಒಂದು ಎಂದು ಹೇಳಿರುವ ಪವಿತ್ರ ಕುರ್‌ಆನ್, ಅದನ್ನು ವ್ಯಕ್ತಪಡಿಸಿರುವುದು ಹೀಗೆ:
“ಅವರಿಗೆ ಅಲ್ಲಾಹನ ಸೂಕ್ತಗಳನ್ನು ಓದಿ ಹೇಳುವ, ಅವರ ಜೀವನವನ್ನು ಸಂಸ್ಕರಿಸುವ ಸಂದೇಶವಾಹಕರನ್ನು  ನಿಯೋಜಿಸಿದ್ದೇವೆ.” (3:164). 

ಮದ್ರಸಾದಲ್ಲಿ ಕಲಿತು ಹೊರಬರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂತೆ ಅಲ್ಲ. ಭೌತಿಕ ಶಿಕ್ಷಣ ಪಡೆದ  ವಿದ್ಯಾರ್ಥಿಗಳಿಗಿಂತ ಭಿನ್ನ ವ್ಯಕ್ತಿತ್ವವೊಂದನ್ನು ಅವರು ರೂಢಿಸಿಕೊಂಡಿರಬೇಕಾಗುತ್ತದೆ. ಅವರಿಂದ ಸಮಾಜ ಸಾಕಷ್ಟನ್ನು  ನಿರೀಕ್ಷಿಸಿರುತ್ತದೆ. ಬರೇ ಭೌತಿಕ ಶಿಕ್ಷಣ ಪಡೆದ ವ್ಯಕ್ತಿಯೋರ್ವ ಅಪರಾಧ ಕೃತ್ಯಗಳಲ್ಲಿ ಭಾಗಿಯಾದಾಗ ಸಮಾಜ ವ್ಯಕ್ತಪಡಿಸುವ  ಪ್ರತಿಕ್ರಿಯೆಗೂ ಮದ್ರಸಾ ಬಿರುದಾಂಕಿತ ವ್ಯಕ್ತಿ ಅದೇ ಅಪರಾಧದಲ್ಲಿ ಭಾಗಿಯಾದಾಗ ವ್ಯಕ್ತಪಡಿಸುವ ಪ್ರತಿಕ್ರಿಯೆಗೂ ದೊಡ್ಡ  ವ್ಯತ್ಯಾಸವಿರುತ್ತದೆ. ಆ ಕಾರಣದಿಂದಲೇ ಮದ್ರಸಾದಿಂದ ಹೊರಬೀಳುವ ವಿದ್ಯಾರ್ಥಿಗಳು ವಿಶೇಷ ಎಚ್ಚರಿಕೆಯನ್ನು  ವಹಿಸಬೇಕಾಗುತ್ತದೆ. ಅವರು ಸಮಾಜದ ಗೌರವಕ್ಕೆ ಪಾತ್ರವಾಗಬೇಕಾದರೆ, ಅವರಲ್ಲಿ ಅಂಥ ಆಕರ್ಷಣೀಯ ಗುಣಗಳಿರಬೇಕಾಗುತ್ತದೆ. ವರ್ತನೆಯಲ್ಲೂ ಆ ಗುಣಗಳು ಪ್ರತಿಫಲಿಸ ಬೇಕಾಗುತ್ತದೆ. ಸಮುದಾಯವು ಅವರ ಮಾತುಗಳನ್ನು ಆಲಿಸುವಂತೆ ಮಾಡುವ ಮತ್ತು ಅವರಲ್ಲಿ ಅಭಿಪ್ರಾಯವನ್ನು ಕೇಳಿ ತಿಳಿದುಕೊಳ್ಳುವ ಹಂತಕ್ಕೆ ಅವರು ತಮ್ಮನ್ನು ಅಭಿವೃದ್ಧಿ ಪಡಿಸಿ ಕೊಳ್ಳಬೇಕಾಗಿದೆ. ಹಾಗಂತ,

ಹೀಗೆ ಹೇಳುವುದು ಸುಲಭ. ಆದರೆ, ಪ್ರಾಯೋಗಿಕವಾಗಿ ಅಷ್ಟು ಸುಲಭ ಅಲ್ಲ. ಅದಕ್ಕೆ ತರಬೇತಿಯ ಅಗತ್ಯ ಇದೆ. ವ್ಯಕ್ತಿತ್ವ  ವಿಕಸನಕ್ಕೆ ಸಂಬಂಧಿಸಿ ಮದ್ರಸಾಗಳಲ್ಲಿ ವಿಶೇಷ  ತರಗತಿಗಳನ್ನು ನಡೆಸಬೇಕಾಗಿದೆ. ಆತ್ಮಸಂಸ್ಕರಣೆಗೆ ಅತಿಯಾದ  ಮಹತ್ವವನ್ನು ನೀಡಬೇಕಾಗಿದೆ. ಮುಖ್ಯವಾಗಿ, ಹೀಗೆ ಮದ್ರಸಾಗಳಿಂದ ಸಮಾಜಕ್ಕೆ ಹರಿದು ಬರುವವರು ಯಾವುದಾದರೂ  ಮಸೀದಿಯ ಇಮಾಮರಾಗಿ ಮತ್ತು ಮದ್ರಸಾ ಶಿಕ್ಷಕರಾಗಿ ಸೇರಿಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ನಡೆಯುವ ಪದ್ಧತಿ.  ಆದರೆ, ಇಂಥ ಶಿಕ್ಷಕರಿಗೆ ನಿಯಮಿತವಾಗಿ ತರಬೇತಿ ನೀಡುವ ಕಾರ್ಯಾಗಾರಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಯಿದೆ.

ಶಿಕ್ಷಕ ಓರ್ವ ಉತ್ತಮ ಮತ್ತು ಪರಿಣಾಮಕಾರಿ ಶಿಕ್ಷಕನಾಗುವುದು ಒಂದು ಕಲೆ. ಇವತ್ತು ತರಬೇತಿ ಕಾರ್ಯಾಗಾರ ಎಂಬುದು  ಎಲ್ಲ ಕ್ಷೇತ್ರಗಳಲ್ಲೂ ಕಡ್ಡಾಯವೆಂಬಂತೆ  ನಡೆಯುತ್ತಾ ಬರುತ್ತಿದೆ. ಶಿಕ್ಷಕರು, ಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಿಗಳು,  ಜನ ಪ್ರತಿನಿಧಿಗಳೂ ಸೇರಿದಂತೆ ಎಲ್ಲರೂ ವರ್ಷಕ್ಕೊಮ್ಮೆಯಾದರೂ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ.  ಅಲ್ಲಿ ಅವರಿರುವ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ಹೊಸ ಸಂಶೋಧನೆಗಳ ಬಗ್ಗೆ ಚರ್ಚೆಯಾಗುತ್ತದೆ. ಶಿಕ್ಷಕರಾದರೆ ಬೋಧನೆಯ ಹೊಸ ಮಾದರಿಗಳು, ಹೊಸ ಹೊಸ ಕಾನೂನುಗಳು, ತಂತ್ರಜ್ಞಾನದಲ್ಲಾಗಿರುವ ಪ್ರಗತಿ ಮತ್ತು ಅವು ಮಕ್ಕಳ  ತಿಳುವಳಿಕೆಯಲ್ಲಿ ಮಾಡಿರುವ ಬದಲಾವಣೆ.. ಇತ್ಯಾದಿಗಳ ಮೇಲೆ ಅಭಿಪ್ರಾಯಗಳು ಹಂಚಿಕೆಯಾಗುತ್ತವೆ. ಹೊಸತನ್ನು ಕಲಿಸುವ, ಕಲಿಯುವ ಮತ್ತು ಹೊಸ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಂಡು ಆತ್ಮವಿಶ್ವಾಸದೊಂದಿಗೆ ಶಿಕ್ಷಕ ವೃತ್ತಿಗೆ ಮರಳಲು  ಇಂಥ ಕಾರ್ಯಾಗಾರ ಬಹುಮುಖ್ಯ ಪಾತ್ರವನ್ನು ನಿಭಾಯಿಸುತ್ತದೆ. ಆದರೆ,

ಮದ್ರಸಾ ಶಿಕ್ಷಕರಿಗಾಗಿ ಬಹುತೇಕ ಇಂಥ ಕಾರ್ಯಾಗಾರಗಳು ನಡೆಯುತ್ತಲೇ ಇಲ್ಲ ಎಂಬುದೇ ವಿಷಾದದ ಸಂಗತಿ. ಅಲ್ಲಿ  ವಿಕಸನಕ್ಕೆ ಆದ್ಯತೆ ಕಡಿಮೆಯಾಗಿದೆ. ಅದರ ಜೊತೆಗೇ ಮದ್ರಸಾ ಕಲಿಕೆಯ ಸಂದರ್ಭದಲ್ಲಿ ಸಂಶೋಧನೆಗೆ ಸಿಗಬೇಕಾದಷ್ಟು  ಒತ್ತು ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ಗತ ವಿದ್ವಾಂಸರು ಏನೇ ನೆಲ್ಲ ಸಂಶೋಧನೆ ಕೈಗೊಂಡಿದ್ದಾರೋ ಮತ್ತು  ಕುರ್‌ಆನ್ ಹಾಗೂ ಹದೀಸ್‌ಗಳ ಮೇಲೆ ಏನೆಲ್ಲಾ ಅಧ್ಯಯನಗಳನ್ನು ಮಾಡಿದ್ದಾರೋ ಅವುಗಳನ್ನು ಕಲಿಯುವುದಕ್ಕಷ್ಟೇ  ತಮ್ಮನ್ನು ಸೀಮಿತಗೊಳಿಸುವ ರೀತಿಯಲ್ಲಿ ಮದ್ರಸ ಕಲಿಕೆಯನ್ನು ಅದುಮಿಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.  ನಿಜವಾಗಿ,

ಮದ್ರಸಾ ಕಲಿಕೆಯ ಪ್ರತಿ ಮಗುವೂ ವಿಭಿನ್ನವಾಗಿರುತ್ತದೆ. ಹೊಸತಿಗೆ ತೆರೆದುಕೊಳ್ಳುವುದೇ ಪ್ರತಿ ಮಗುವಿನ ಪ್ರಕೃತಿ. ಇಂಥ  ಮಕ್ಕಳನ್ನು ಗತಕಾಲದ ಚಿಂತನೆಗಳನ್ನು ಓದಿ ಅಭ್ಯಸಿಸಿ ಬಿರುದು ಪಡಕೊಳ್ಳುವುದಕ್ಕಷ್ಟೇ ಮಿತಿಗೊಳಿಸದೇ ಕುರ್‌ಆನ್ ಮತ್ತು  ಹದೀಸ್ ಗಳ ಮೇಲೆ ಸಂಶೋಧನೆಗೆ ಹಚ್ಚಬೇಕು. ಅದಕ್ಕೆ ಪೂರಕವಾಗಿ ಕಲಿಕಾ ರೀತಿಯಲ್ಲಿ ಬದಲಾವಣೆಯನ್ನು ತರಬೇಕು.  ಪವಿತ್ರ ಕುರ್‌ಆನ್ ಸಾರ್ವಕಾಲಿಕ ಗ್ರಂಥ ಎಂಬುದರ ಅರ್ಥ, ಅದು ಸರ್ವ ಕಾಲಗಳ ಸವಾಲುಗಳಿಗೂ ತನ್ನೊಳಗೆ  ಪರಿಹಾರವನ್ನು ಅಡಗಿಸಿಕೊಂಡಿದೆ ಎಂದೇ ಆಗಿದೆ. ಆದರೆ ಆ ಪರಿಹಾರವನ್ನು ಹುಡುಕಿ ತೆಗೆಯಬೇಕಾದ ಸವಾಲು ಎಲ್ಲರ  ಮೇಲಿದೆ. ಮದ್ರಸಾ ಶಿಕ್ಷಣವಂತೂ ಕುರ್‌ಆನಿನ ಪ್ರತಿ ವಾಕ್ಯಗಳಲ್ಲಿ ಅಡಗಿರುವ ವಿಭಿನ್ನ ಸಾಧ್ಯತೆಗಳನ್ನು ಸಂಶೋಧಿಸುವ  ಕ್ಲಾಸ್ ರೂಮ್‌ಗಳಾಗಬೇಕು. ಓರ್ವ ವಿದ್ಯಾರ್ಥಿಯೊಳಗೆ ಸಂಶೋಧನೆಯ ಆಸಕ್ತಿಯನ್ನು ಹುಟ್ಟಿಸಿದರೆ ಆ ಬಳಿಕ ಆ  ವಿದ್ಯಾರ್ಥಿ ಸಮಾಜಕ್ಕೂ ಸಮು ದಾಯಕ್ಕೂ ಅಪೂರ್ವ ಶಕ್ತಿಯಾಗಬಲ್ಲರು. ಸಮುದಾಯಕ್ಕೆ ನೇತೃತ್ವ ಸಿಗಬೇಕಾದದ್ದು ಇಂಥ  ವ್ಯಕ್ತಿಗಳಿಂದ. ಅಂಥವರು ವರ್ತಮಾನದ ಸವಾಲುಗಳನ್ನು ಅರ್ಥೈಸಬಲ್ಲರು ಮತ್ತು ಧಾರ್ಮಿಕ ಆಧಾರದಲ್ಲಿ ಸರ್ವರೂ  ಅಂಗೀಕರಿಸಬಲ್ಲ ಉತ್ತರವನ್ನು ನೀಡಬಲ್ಲರು. ಅಷ್ಟಕ್ಕೂ,

ಮದ್ರಸಾಗಳ ಅಸ್ತಿತ್ವವನ್ನೇ ಇಲ್ಲವಾಗಿಸಲು ಪ್ರಭುತ್ವ ತಂತ್ರ ಹೆಣೆಯುತ್ತಿರುವ ಈ ದಿನಗಳಲ್ಲಿ ಮದ್ರಸಾಗಳನ್ನು ಫಲಪ್ರದಗೊಳಿಸಲು ಮತ್ತು ಸಮಾಜದಲ್ಲಿ ನಿರ್ಮಾಣಾತ್ಮಕ ಪಾತ್ರ ವಹಿಸುವುದಕ್ಕೆ ಅವುಗಳನ್ನು ಸಿದ್ಧಪಡಿಸಲು ಮುಂದಾಗದಿದ್ದರೆ  ಸಮುದಾಯ ಮುಂದಕ್ಕೆ ಬೆರಳು ಕಚ್ಚಿಕೊಳ್ಳಬೇಕಾದೀತು.