Monday, January 6, 2020

ಅವರಲ್ಲಿ ವಲಸಿಗರು ಯಾರು, ನುಸುಳುಕೋರರು ಯಾರು?



While exercising its Right of reply at the 38th session of the UN Human Rights Council, in 2018, the Indian representative said of the Pakistan’s stand: “In its obsession with puritanism, it has unleashed systematic persecution against its own muslim minorities including Shias, Ahmadiyas, Ismilia and Hazaras, who have been reduced to second class citizens.

“ಪಾಕಿಸ್ತಾನವು ತನ್ನದೇ ಬಹುಸಂಖ್ಯಾತ ಸಮುದಾಯದ ಅಲ್ಪಸಂಖ್ಯಾತ ಪಂಗಡಗಳಾದ ಶಿಯಾ, ಅಹ್ಮದಿಯಾ, ಇಸ್ಮಾಯಿಲಿಯಾ ಮತ್ತು ಹಝಾರಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಮತ್ತು ಅವರನ್ನು  ದ್ವಿತೀಯ ದರ್ಜೆಯ ನಾಗರಿಕರಂತೆ ನೋಡಿ ಕೊಳ್ಳುತ್ತಿದೆ...” ಎಂದು 2018ರಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ 38ನೇ ಸಭೆಯಲ್ಲಿ ಮೋದಿ ಸರಕಾರ ವಾದಿಸಿತ್ತು ಎಂಬುದಾಗಿ 2019  ಡಿಸೆಂಬರ್ 26ರ ದಿ ಹಿಂದೂ ಪತ್ರಿಕೆ ಬಹಿರಂಗಪಡಿಸಿದೆ. ನಿಜವಾಗಿ,
ಸಿಎಎಯ ವಿಷಯದಲ್ಲಿ ಕೇಂದ್ರ ಸರಕಾರದ ಈ ವರೆಗಿನ ವಾದಗಳನ್ನೆಲ್ಲ ಪುಡಿಗಟ್ಟುವ ದಾಖಲೆ ಇದು. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಹಿಂದೂಗಳ ಮೇಲೆ ಧಾರ್ಮಿಕ  ದಮನ ನಡೆಯುತ್ತಿದೆ ಮತ್ತು ಆ ಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರುತ್ತಿದ್ದೇವೆ ಎಂಬುದು ಕೇಂದ್ರದ ವಾದ. ಧಾರ್ಮಿಕ ದೌರ್ಜನ್ಯದಿಂದ ಪಾರಾಗಿ ಭಾರತಕ್ಕೆ ಬಂದಿರುವ  ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ಕೊಡುವುದು ಸಿಎಎಯ ಉದ್ದೇಶ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಮೇಲಿನ ಮೂರೂ ರಾಷ್ಟ್ರಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತವಾಗಿರುವುದರಿಂದ  ಮುಸ್ಲಿಮರ ಮೇಲೆ ಧಾರ್ಮಿಕ ದೌರ್ಜನ್ಯ ಅಸಾಧ್ಯ ಮತ್ತು ಆ ಕಾರಣಕ್ಕಾಗಿ ನಾವು ಪೌರತ್ವ ಕಾನೂನಿನಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದೇವೆ ಎಂದೂ ಕೇಂದ್ರ ತನ್ನನ್ನು ಸಮರ್ಥಿಸಿಕೊಳ್ಳುತ್ತಿದೆ. ಇದೇವೇಳೆ,  ಪಾಕಿಸ್ತಾನದಲ್ಲಿ ಇಸ್ಮಾಯಿಲಿಯ, ಅಹ್ಮದಿಯಾ, ಹಝಾರ ಮತ್ತು ಶಿಯಾ ಪಂಗಡಗಳ ಮೇಲೆ ಧಾರ್ಮಿಕ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಇದೇ ಸರಕಾರದ ಪ್ರತಿನಿಧಿಗಳು ವಾದಿಸುತ್ತಾರೆ. ಈ ಇಬ್ಬಂದಿತನಕ್ಕೆ ಏನೆಂದು ಹೇಳಬೇಕು? ಹಾಗಿದ್ದರೆ ಧಾರ್ಮಿಕ ದೌರ್ಜನ್ಯದಿಂದಾಗಿ ಪಾಕ್‍ನಿಂದ ಮುಸ್ಲಿಮೇತರರು ಭಾರತಕ್ಕೆ ಬಂದಿರುವಂತೆಯೇ ಶಿಯಾ, ಅಹ್ಮದಿಯಾ, ಹಝಾರ, ಇಸ್ಮಾ ಯಿಲಿಯ್ಯ  ಪಂಗಡದ ಮುಸ್ಲಿಮರೂ ಬಂದಿರಬಾರದೇಕೆ? ಅವರಿಗೆ ಪೌರತ್ವ ಕೊಡಬಾರದೇಕೆ? ಅಷ್ಟಕ್ಕೂ,
ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರ ಪೈಕಿ ಎಷ್ಟು ಮಂದಿ ಧಾರ್ಮಿಕ ದೌರ್ಜನ್ಯವನ್ನು ಎದುರಿಸುದ್ದಾರೆ ಮತ್ತು ಎಷ್ಟು ಮಂದಿ ಉದ್ಯೋಗ ಮತ್ತಿತರ ಅವಕಾಶಗಳನ್ನು  ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ನಮ್ಮಲ್ಲಿ ಯಾವ ಪ್ಯಾರಾಮೀಟರ್ ಇದೆ? ಪಾಕ್, ಅಫಘಾನ್ ಮತ್ತು ಬಾಂಗ್ಲಾದಿಂದ ಭಾರತ ಪ್ರವೇಶಿಸಿರುವ ಎಲ್ಲ ಮುಸ್ಲಿಮೇತರರ ಮೇಲೂ ಧಾರ್ಮಿಕ ದೌರ್ಜನ್ಯ ನಡೆದಿದೆ ಎಂಬುದು ನಿಜವೇ? ಅವರೆಲ್ಲ ಧಾರ್ಮಿಕ ದೌರ್ಜನ್ಯದಿಂದಾಗಿ ಮಾತ್ರ ಭಾರತ ಪ್ರವೇಶಿಸಿದ ವಲಸಿಗರೇ? ಮುಸ್ಲಿಮರು ಮಾತ್ರ ಈ ಯಾವುದನ್ನೂ ಎದುರಿಸದೇ  ಭಾರತ ಪ್ರವೇಶಿಸಿದ ನುಸುಳುಕೋರರೇ? ಮುಸ್ಲಿಮೇತರರನ್ನು ವಲಸಿಗರು ಮತ್ತು ಮುಸ್ಲಿಮರನ್ನು ನುಸುಳುಕೋರರು ಎಂಬುದಾಗಿ ವಿಭಜಿಸುವುದಕ್ಕೆ ಏನು ಆಧಾರವಿದೆ? ಉದ್ಯೋಗ ಮತ್ತಿತರ ಅವಕಾಶಗಳನ್ನು ಹುಡುಕಿಕೊಂಡು ಮುಸ್ಲಿಮೇತರರೂ ಯಾಕೆ ಭಾರತಕ್ಕೆ ನುಸುಳಿರ ಬಾರದು? ಮುಸ್ಲಿಮರು ಮಾತ್ರ ಯಾಕೆ ನುಸುಳುಕೋರರಾಗುತ್ತಾರೆ, ಅವರೇಕೆ ವಲಸಿಗರಾಗುವುದಿಲ್ಲ? ಧಾರ್ಮಿಕ ದೌರ್ಜನ್ಯ ಮತ್ತು ಉದ್ಯೋಗ ಹುಡುಕಾಟ ಎಂಬೆರಡು ಸಮಾನ ಕಾರಣಗಳಿಗಾಗಿ ಮುಸ್ಲಿಮರು ಮತ್ತು ಮುಸ್ಲಿಮೇತರರೂ ಭಾರತ ಪ್ರವೇಶಿಸಿರುವ ಸಾಧ್ಯತೆಯೇ ಅಧಿಕವಿದ್ದರೂ ಯಾಕೆ ಮುಸ್ಲಿಮರನ್ನು ನುಸುಳುಕೋರರು ಮತ್ತು ಮುಸ್ಲಿಮೇತರರನ್ನು ವಲಸಿಗರು ಎಂದು ಕರೆಯಲಾಗುತ್ತದೆ? ನುಸುಳುಕೋರರು ಎಂಬ ಪದದಲ್ಲಿಯೇ ಕಾನೂನು ಬಾಹಿರವಾಗಿ ಪ್ರವೇಶಿಸಿದವರು ಎಂಬ ಧ್ವನಿಯಿದೆ. ಆದರೆ ವಲಸಿಗರು ಅನ್ನುವ ಪದದಲ್ಲಿ ಈ ಅಪರಾಧಿ ಭಾವವಿಲ್ಲ. ಅಂದಹಾಗೆ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ನಿಂದ ಭಾರತ ಪ್ರವೇಶಿಸಿದ ಮುಸ್ಲಿಮೇತರರೆಲ್ಲರ ಮೇಲೂ ಧಾರ್ಮಿಕ ದೌರ್ಜನ್ಯ ನಡೆದಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ಹಾಗಂತ, ಪಾಕ್, ಅಫಘಾನ್  ಮತ್ತು ಬಾಂಗ್ಲಾದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯ ನಡೆದಿದೆ ಅನ್ನುವುದು ಸುಳ್ಳಲ್ಲ. ಕ್ರಿಕೆಟಿಗ ಶುಐಬ್ ಅಖ್ತರ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟಿಗ ದಾನಿಶ್ ಕನೇರಿಯಾ ಅವರ ಮೇಲೆ ಧಾರ್ಮಿಕ ತಾರ ತಮ್ಯ ನಡೆದಿತ್ತು ಎಂದವರು ಹೇಳಿರುವುದೂ ಮತ್ತು ಕನೇರಿಯಾ ಅದನ್ನು ಒಪ್ಪಿಕೊಂಡಿರುವುದೂ ನಡೆದಿದೆ. ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡ  ಎರಡನೇ ಹಿಂದೂ ಕ್ರಿಕೆಟಿಗ ಕನೇರಿಯಾ. ಅಷ್ಟೊಂದು ಉನ್ನತ ಮಟ್ಟದಲ್ಲೂ ಧಾರ್ಮಿಕ ತಾರತಮ್ಯ ನಡೆದಿದೆ ಎಂಬುದು ಆಘಾತಕಾರಿ ಮತ್ತು ಖಂಡನಾರ್ಹ. ಆದರೂ ಪಾಕ್‍ನಲ್ಲಿ ನಡೆಯುತ್ತಿರುವ  ಧಾರ್ಮಿಕ ತಾರತಮ್ಯದ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಗೃಹಸಚಿವ ಅಮಿತ್ ಶಾ ಅವರು ನೀಡಿರುವ ಲೆಕ್ಕಾಚಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರ ಪ್ರಕಾರ, 1951ರಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮೇತರ  ಸಮುದಾಯದ ಜನಸಂಖ್ಯೆ 23% ಇತ್ತು. ಈಗ ಅದು 3.7ಕ್ಕೆ ಕುಸಿದಿದೆ. ಅಂದ ಹಾಗೆ, ಇದು ನಿಜವಲ್ಲ. 1951ರಲ್ಲಿ ಬಾಂಗ್ಲಾದೇಶದ ಉದಯವಾಗಿರಲಿಲ್ಲ. ಈಗಿನ ಬಾಂಗ್ಲಾದೇಶವು ಆಗಿನ ಪೂರ್ವ  ಪಾಕಿಸ್ತಾನದ ಭಾಗವಾಗಿತ್ತು. ಆ ಪೂರ್ವ ಭಾಗದಲ್ಲಿ ಮುಸ್ಲಿಮರ ಸಂಖ್ಯೆ 23% ಇತ್ತೇ ಹೊರತು ಇಡೀ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಮೇತರರ ಜನಸಂಖ್ಯೆ 23% ಇರಲಿಲ್ಲ. ಆಗ ಇದ್ದುದು ಬರೇ 3.5%. ಒಂದುವೇಳೆ, ಕಾಶ್ಮೀರದಲ್ಲಿರುವ ಮುಸ್ಲಿಮರ ಜನಸಂಖ್ಯೆಯ ಶೇಕಡಾವಾರು ಲೆಕ್ಕವನ್ನು ಎತ್ತಿಕೊಂಡು ಇಡೀ ಭಾರತಕ್ಕೆ ಅದನ್ನು ಅನ್ವಯಿಸಿ ಹೇಳಿದರೆ ಹೇಗಿದ್ದೀತು? ಭಾರತದಲ್ಲಿ  60% ಮುಸ್ಲಿಮರಿದ್ದಾರೆ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಪಾಕಿಸ್ತಾನದಲ್ಲಿ 1951ರ ಜನಗಣತಿ ಪ್ರಕಾರ 23% ಮುಸ್ಲಿಮೇತರರಿದ್ದರು ಎಂದು ಹೇಳುವುದೂ ಅಷ್ಟೇ ತಪ್ಪು. ಪಾಕ್‍ನಲ್ಲಿ  ವರ್ಷಂಪ್ರತಿ ಮುಸ್ಲಿಮೇತರರ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ಒಪ್ಪಿಕೊಂಡರೂ 23% ದಿಂದ 3.7%ಕ್ಕೆ ಇಳಿಯಿತು ಎಂಬ ಉತ್ಪ್ರೇಕ್ಷಿತ ಸುಳ್ಳನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಅದೇವೇಳೆ, 1951ರ  ಜನಗಣತಿಯಂತೆ ಬಾಂಗ್ಲಾದಲ್ಲಿ ಮುಸ್ಲಿಮೇತರರ ಜನಸಂಖ್ಯೆ 23.20%ದಷ್ಟಿತ್ತು ಮತ್ತು 2011ರ ಜನಗಣತಿ ಪ್ರಕಾರ ಈ ಅನುಪಾತ 9.40%ಕ್ಕೆ ಕುಸಿದಿದೆ. ನಿಜವಾಗಿ,
ವಿಭಜನೆಯು ಭಾರತ ಮತ್ತು ಪಾಕ್‍ಗಳ ನಡುವೆ ಅತಿದೊಡ್ಡ ವಲಸೆಗೆ ಕಾರಣವಾಯಿತು. ಒಂದು ಅಂದಾಜಿನ ಪ್ರಕಾರ, 72.3 ಲಕ್ಷ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಮತ್ತು 72.49 ಲಕ್ಷ  ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಅಷ್ಟಕ್ಕೂ, ಭೂಪಟದ ಮಧ್ಯೆ ಗೆರೆಯೊಂದನ್ನು ಎಳೆದ ತಕ್ಷಣ ಭೂಪಟದಲ್ಲಿ ವಿಭಜನೆ ಉಂಟಾದೀತೇ ಹೊರತು ಜೊತೆಯಾಗಿದ್ದ ಜನರ ನಡುವಿನ  ಸಂಬಂಧದಲ್ಲಿ ಬಿರುಕು ಉಂಟಾಗಲು ಸಾಧ್ಯವಿಲ್ಲವಲ್ಲ. ಎರಡೂ ರಾಷ್ಟ್ರಗಳ ವಿಭಜನೆಯಿಂದಾಗಿ ಅಣ್ಣ ಪಾಕ್‍ನಲ್ಲಿ ಮತ್ತು ತಮ್ಮ ಭಾರತದಲ್ಲಿ ಎಂಬಂತಹ ಸ್ಥಿತಿ ತಲೆದೋರಿತು. ಗಡಿ ಗುರುತು ಏನೇ  ಇದ್ದರೂ ಈ ಸಂಬಂಧಗಳು ಪರಸ್ಪರ ನಾಡುಗಳಿಗೆ ವಲಸೆ ಹೋಗುವುದಕ್ಕೂ ಕಾರಣವಾಯಿತು. ಭಾರತದ ಗಡಿ ಪ್ರದೇಶಗಳಲ್ಲಿ ತಮ್ಮ ಸಂಬಂಧಿಕರಿದ್ದಾರೆ ಮತ್ತು ಉದ್ಯೋಗ ಹುಡುಕಲು ಅವರು  ನೆರವಾಗುತ್ತಾರೆ ಎಂಬ ಧೈರ್ಯದಿಂದ ಪಾಕ್ ಮತ್ತು ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದವರ ಸಂಖ್ಯೆ ದೊಡ್ಡದಿರಬಹುದು. ಹಾಗೆಯೇ ಧಾರ್ಮಿಕ ದೌರ್ಜನ್ಯವೂ ಹೀಗೆ ವಲಸೆ ಬರುವುದಕ್ಕೆ ಕಾರಣ  ಇರ ಬಹುದು. ಅಸ್ಸಾಮ್‍ನ ಮೇಲೆ ಈ ವಲಸೆ ದೊಡ್ಡಮಟ್ಟದ ಪರಿಣಾಮವನ್ನು ಬೀರಿತು. ಅಸ್ಸಾಮ್‍ಗೆ ಹೀಗೆ ವಲಸೆ ಬಂದವರಲ್ಲಿ ಮುಸ್ಲಿಮರೂ ಮತ್ತು ಮುಸ್ಲಿಮೇತರರೂ ಇದ್ದರು. ಈ ವಲಸೆ  ಅಸ್ಸಾಮ್‍ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ವಲಸೆಯ ವಿರುದ್ಧ ಜನಾಂದೋಲನಗಳೇ ನಡೆದುವು. ಸುಮಾರು 2000ಕ್ಕಿಂತಲೂ ಅಧಿಕ ಮಂದಿಯ ಸಾವಿಗೆ ಕಾರಣವಾದ ನೆಲ್ಲಿ ಹತ್ಯಾಕಾಂಡಕ್ಕೆ ಈ  ವಲಸೆ ವಿರೋಧಿ ಚಳವಳಿಯೇ ಕಾರಣ. ಆದ್ದರಿಂದಲೇ, ಅಸ್ಸಾಮ್‍ನ ಎನ್‍ಆರ್ ಸಿಗೆ ವಿಶೇಷ ಮಹತ್ವವಿದೆ. 1971 ಮಾರ್ಚ್ 24ರ ಬಳಿಕ ವಲಸೆ ಬಂದ ಎಲ್ಲರನ್ನೂ ಅಸ್ಸಾಮ್‍ನಿಂದ  ಹೊರಹಾಕಬೇಕೆಂಬುದು ಅಸ್ಸಾಮ್ ಎನ್‍ಆರ್ ಸಿಯ ಮುಖ್ಯ ಉದ್ದೇಶ. 1971 ಮಾರ್ಚ್ 24ಕ್ಕಿಂತ ಮೊದಲಿನ ಜನನ ದಾಖಲೆ, ಮತದಾರರ ಪಟ್ಟಿಯಲ್ಲಿ ಹೆಸರು, ಎಲ್‍ಐಸಿ ಪ್ರಮಾಣ ಪತ್ರ, ಪಾಸ್ ಪೋರ್ಟ್, ಬ್ಯಾಂಕ್ ಖಾತೆ ಇತ್ಯಾದಿ 14 ದಾಖಲೆಗಳನ್ನು ಅಸ್ಸಾಮಿಗರು ತಮ್ಮ ನಾಗರಿಕತ್ವದ ಪುರಾವೆಯಾಗಿ ಮಂಡಿಸಬೇಕಿದೆ. ಇದಿಲ್ಲದವರು ತಮ್ಮ ಹೆತ್ತವರ ಪೌರತ್ವ ದಾಖಲೆಗಳೂ ಸೇರಿದಂತೆ 8  ದಾಖಲೆಗಳನ್ನಾದರೂ ತೋರಿಸಲೇಬೇಕು. ಇದೂ ಸಾಧ್ಯವಾಗದವರು ವಿದೇಶಿ ಟ್ರಿಬ್ಯೂನಲ್‍ನ ಬಾಗಿಲು ತಟ್ಟಬೇಕು. ಆದರೆ, ಭಾರತದ ಒಟ್ಟು ಜನಸಂಖ್ಯೆಯ ಪೈಕಿ ಕೇವಲ 58% ಜನರಲ್ಲಿ ಮಾತ್ರ ಜನನ ನೋಂದಣಿ ದಾಖಲೆ ಇದೆ ಎಂದು ಯುನಿಸೆಫ್ ಹೇಳುತ್ತದೆ. ಆದ್ದರಿಂದಲೇ,
 ಅಸ್ಸಾಮ್‍ನ ಜನರು ತಮ್ಮ ದಾಖಲೆಗಳನ್ನು ಪಡಕೊಳ್ಳುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರು. ಅವರು ಹಣ  ಹೊಂದಿಸುವುದಕ್ಕಾಗಿ ತಮ್ಮ ಭೂಮಿ ಮಾರಿದರು. ಉದ್ಯೋಗಕ್ಕೆ ರಜೆ ಹಾಕಿದರು. ಉಳುಮೆ ಕೈ ಬಿಟ್ಟರು. ಕೇವಲ ಅಸ್ಸಾಮ್ ಸರಕಾರವೊಂದೇ ಇಡೀ ಎನ್‍ಆರ್ ಸಿ ಪ್ರಕ್ರಿಯೆಗಾಗಿ 11 ಕೋಟಿ 82 ಲಕ್ಷ  ರೂಪಾಯಿಯನ್ನು ಖರ್ಚು ಮಾಡಿದೆ ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆ. ಅಂದರೆ, ಒಬ್ಬೊಬ್ಬ ವ್ಯಕ್ತಿಗೂ 19,064 ರೂಪಾಯಿ ಖರ್ಚು ಮಾಡಿದಂತಾಗಿದೆ. 2017ರಲ್ಲಿ ಅಸ್ಸಾಮ್‍ನ ಒಟ್ಟು ಜನಸಂಖ್ಯೆಯಲ್ಲಿ 1.2 ಕೋಟಿ ಮಂದಿ ವಿದೇಶಿಗರು ಎಂದು ಘೋಷಿಸಲಾಯಿತು. 2018 ಜುಲೈನಲ್ಲಿ ಈ ವಿದೇಶಿಯರ ಸಂಖ್ಯೆ 44 ಲಕ್ಷಕ್ಕೆ ಕುಸಿಯಿತು. 2019ರಲ್ಲಿ ಈ ಸಂಖ್ಯೆ ಮತ್ತೂ ಕುಸಿದು 19 ಲಕ್ಷಕ್ಕೆ  ಬಂದು ನಿಂತಿತು. ತಮಾಷೆ ಏನೆಂದರೆ, ಈ ಖರ್ಚು, ಅಲೆದಾಟ, ಸಂಕಟಗಳೆಲ್ಲ ಭಾರತೀಯನೊಬ್ಬ ಭಾರತೀಯ ಎಂದು ಸಾಬೀತುಪಡಿಸುವುದಕ್ಕಾಗಿ ಮಾಡಲಾಗಿದೆ ಎಂಬುದು. ಅಂದಹಾಗೆ,
ಎನ್‍ಆರ್ ಸಿ ಪ್ರಕಾರ, ಈ ದೇಶದ ಮುಸ್ಲಿಮರು ಮತ್ತು ಮುಸ್ಲಿಮೇತರರೆಲ್ಲರೂ ತಮ್ಮ ಪೌರತ್ವ ಸಾಬೀತುಪಡಿಸುವುದಕ್ಕಾಗಿ ದಾಖಲೆ ಸಲ್ಲಿಸಬೇಕಾಗುತ್ತದೆ. ಹೀಗೆ ದಾಖಲೆಗಳನ್ನು ಸಲ್ಲಿಸ ಬೇಕೆಂದರೆ,  ಮೊದಲಾಗಿ ಅವುಗಳನ್ನು ಸಂಗ್ರಹಿಸಬೇಕು. ಅದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕು. ಭಾರತೀಯ ನಾಗರಿಕರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸುವುದಕ್ಕಾಗಿ ಪಡುವ ಸಂಕಟ ಇದು. ಅಸ್ಸಾಮ್‍ನ ಮಂದಿ ಈ ಎಲ್ಲ ಸಂಕಟಗಳಿಗೆ ತುತ್ತಾಗಿ ಬಸವಳಿದಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಅಸ್ಸಾಮ್‍ನಲ್ಲಿ ಸಿಕ್ಕಿದ್ದು ಬರೇ 19 ಲಕ್ಷ ಮಂದಿ. ಇದೂ ಅಂತಿಮ ಅಲ್ಲ. ಈ 19 ಲಕ್ಷ ಮಂದಿಗೂ ವಿದೇಶಿ  ಟ್ರಿಬ್ಯೂನಲ್‍ಗೆ ಹೋಗಿ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಅವಕಾಶ ಇದೆ. ಅಲ್ಲೂ ನ್ಯಾಯ ಸಿಗದಿದ್ದರೆ ಮತ್ತೆ ನ್ಯಾಯಾಲಯವನ್ನು ಸಮೀಪಿಸಬಹುದು. ಸದ್ಯ,
ದೇಶದಾದ್ಯಂತ ನಡೆಸಲಾಗುವುದೆಂದು ಹೇಳಲಾಗುತ್ತಿರುವ ಎನ್‍ಆರ್ ಸಿ ಮತ್ತು ಸಿಎಎಗೆ ಅಗತ್ಯವಿರುವ ದಾಖಲೆಗಳು ಏನೇನು ಎಂಬುದನ್ನು ಕೇಂದ್ರ ಸರಕಾರ ಈವರೆಗೂ ಹೇಳಿಯೇ ಇಲ್ಲ. ಆದ್ದರಿಂದ,  ಅಸ್ಸಾಮ್‍ನ ಮಾದರಿಯಲ್ಲೇ ದೇಶದಾದ್ಯಂತ ಎನ್‍ಆರ್ ಸಿ ನಡೆಸಲಾಗುತ್ತದೆ ಎಂದು ಅಂದುಕೊಳ್ಳಬೇಕಾಗುತ್ತದೆ. ಹೀಗಾದರೆ 130 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಯುದ್ಧಸ್ಥಿತಿ ನಿರ್ಮಾಣವಾದೀತು. ಸರಕಾರಿ ಕಚೇರಿಗಳಲ್ಲಿ ಜನದಟ್ಟಣೆಯಿಂದಾಗಿ ಗೋಲಿಬಾರ್, ಲಾಠಿ ಚಾರ್ಜ್‍ಗಳು ನಿತ್ಯದ ಸುದ್ದಿಯಾದೀತು.

No comments:

Post a Comment