Monday, November 6, 2017

ಲೂಟಿಕೋರರು ಇಲ್ಲೇ ಜೀವಂತ ಇರುವಾಗ ಇಲ್ಲದ ಷಹಜಹಾನ್ ಏಕೋ?

      ಸ್ವಾತಂತ್ರ್ಯಪೂರ್ವದಲ್ಲಿ ಭಾರತವನ್ನಾಳಿದ ಮುಸ್ಲಿಮ್ ದೊರೆಗಳನ್ನು ಎತ್ತಿಕೊಂಡು ಸ್ವಾತಂತ್ರ್ಯಾ ನಂತರದ ಭಾರತೀಯ ಮುಸ್ಲಿಮರನ್ನು ಹಳಿಯುತ್ತಿರುವವರೊಂದಿಗೆ ಕೆಲವು ಪ್ರಶ್ನೆಗಳಿವೆ.
1. ಕಲ್ಲಿದ್ದಲು ಹಗರಣ - 1.86 ಲಕ್ಷ ಕೋಟಿ ರೂಪಾಯಿ
2. 2ಜಿ ಸ್ಪೆಕ್ಟ್ರಂ ಹಗರಣ - 1.76 ಲಕ್ಷ ಕೋಟಿ ರೂಪಾಯಿ
3. ಕಾಮನ್‍ವೆಲ್ತ್ ಗೇಮ್ಸ್ ಹಗರಣ - 70 ಸಾವಿರ ಕೋಟಿ
4. ಸತ್ಯಂ ಹಗರಣ - 14 ಸಾವಿರ ಕೋಟಿ
5. ಷೇರು ಹಗರಣ - 1 ಸಾವಿರ ಕೋಟಿ
6. ಹವಾಲಾ ಹಗರಣ - 200 ಕೋಟಿ
7. ಬೋಫೋರ್ಸ್ ಹಗರಣ - 100 ಕೋಟಿ
8. ವಾಯುಪಡೆ ರಹಸ್ಯ ಸೋರಿಕೆ ಹಗರಣ - 18 ಸಾವಿರ ಕೋಟಿ ರೂಪಾಯಿ
         .... ಇತ್ಯಾದಿ ಹಗರಣಗಳಲ್ಲಿ ಭಾಗಿಯಾದವರು ಯಾರು? ಮುಖ್ಯ ರೂವಾರಿಗಳು ಯಾರು? ಆರೋಪಿಗಳು, ಜೈಲು ಪಾಲಾದವರು ಮತ್ತು ಬಿಡುಗಡೆಗೊಂಡವರ ಹೆಸರುಗಳು ಏನೇನು? ಇಷ್ಟವಿಲ್ಲದಿದ್ದರೂ ಇನ್ನೊಂದು ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಇದರಲ್ಲಿ ಭಾರತೀಯ ಮುಸ್ಲಿಮರ ಪಾತ್ರ ಏನು? ಮುಸ್ಲಿಮ್ ಫಲಾನುಭವಿಗಳ ಸಂಖ್ಯೆ ಎಷ್ಟು? ಈ ಹಗರಣಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. 2012ರ ಶಸ್ತ್ರಾಸ್ತ್ರ ಹಗರಣ, 2013ರ ಶಾರದಾ ಗ್ರೂಪ್ ಹಣಕಾಸು ಹಗರಣ, 2010ರ ಇಸ್ರೋ ಎಸ್‍ಬ್ರ್ಯಾಂಡ್ ಹಗರಣ, 2009ರ ಗುಜರಾತ್ ಕಬ್ಬು ಹಗರಣ, 2011ರ ಕರ್ನಾಟಕ ಗಣಿ ಹಗರಣ, 2012ರ ಆದರ್ಶ್ ಸೊಸೈಟಿ ಹಗರಣ, 2013ರ ಮಧ್ಯಪ್ರದೇಶ ವ್ಯಾಪಂ ಹಗರಣ, ವೊಡಾಫೋನ್ ತೆರಿಗೆ ವಂಚನೆ ಹಗರಣ, ಮಧ್ಯಪ್ರದೇಶ ಸ್ಕಾಲರ್‍ಶಿಪ್ ಹಗರಣ, ತಾಜ್ ಕಾರಿಡಾರ್ ಹಗರಣ, ಗೋವಾ ವಿಶೇಷ ಆರ್ಥಿಕ ವಲಯ ಹಗರಣ, ವಸುಂದರಾ ರಾಜೆ ದೀನ್‍ದಯಾಳ್ ಉಪಾಧ್ಯಾಯ ಭೂಹಗರಣ, ಮಹಾರಾಷ್ಟ್ರ ನೀರಾವರಿ ಹಗರಣ, ಶವಪೆಟ್ಟಿಗೆ ಹಗರಣ, ಪ್ರಶ್ನೆಗಾಗಿ ಲಂಚ ಹಗರಣ, ಲ್ಯಾವ್ಲಿನ್ ಹಗರಣ.. ಇತ್ಯಾದಿ ಇತ್ಯಾದಿಗಳ ಫಲಾನುಭವಿಗಳು ಯಾರು? ರೂವಾರಿಗಳು ಯಾರು? ಮೊಗಲ್ ಮತ್ತಿತರ ರಾಜವಂಶಗಳು ಈ ದೇಶದ ಸಂಪತ್ತು ಲೂಟಿವೆ ಎಂದು ಹೇಳುತ್ತಾ ಪರೋಕ್ಷವಾಗಿ ಇಲ್ಲಿನ ಮುಸ್ಲಿಮರನ್ನು ಹಳಿಯುತ್ತಿರುವವರು ಯಾಕೆ ಈ ಲೂಟಿಯ ಬಗ್ಗೆ ಮಾತಾಡುತ್ತಿಲ್ಲ? ಈ ದೇಶವನ್ನಾಳಿದ ಮುಸ್ಲಿಮ್ ದೊರೆಗಳು ದೋಚಿದರೆಂದೇ ಹೇಳಲಾಗುವ ಸಂಪತ್ತಿಗೆ ಹೋಲಿಸಿದರೆ ಸ್ವಾತಂತ್ರ್ಯಾನಂತರದ ಈ 70 ವರ್ಷಗಳಲ್ಲಿ ಜನಪ್ರತಿನಿಧಿಗಳೇ ಆಡಳಿತ ನಡೆಸುತ್ತಿರುವ ಈ ದೇಶದಲ್ಲಿ ದೋಚಲಾದ ಸಂಪತ್ತು ಎಷ್ಟು ಪಟ್ಟು ಹೆಚ್ಚಿರಬಹುದು? ಯಾಕೆ ಇಷ್ಟು ದೊಡ್ಡ ಮಟ್ಟದಲ್ಲಿ ದೇಶವನ್ನು ಲೂಟಿದವರ ಹೆಸರು ಮತ್ತು ಅವರ ಧರ್ಮವನ್ನು ಉಲ್ಲೇಖಿಸಿ ಇಲ್ಲಿ ಚರ್ಚೆ ನಡೆಯುವುದಿಲ್ಲ? ಎಂದೋ ಆಗಿ ಹೋದ ಮುಸ್ಲಿಮ್ ದೊರೆಗಳ ಬೆನ್ನ ಹಿಂದೆ ನಿಂತು ಈಗಿನ ಮುಸ್ಲಿಮರ ಮೇಲೆ ಬಾಣ ಎಸೆಯುವವರಿಗೆ ಯಾಕೆ ಈ ಹಗರಣಗಳು ದೇಶದ್ರೋಹಿಯಾಗಿ ಕಾಣಿಸುತ್ತಿಲ್ಲ? ಇದರಲ್ಲಿ ಭಾಗಿಯಾದವರನ್ನು ಮತ್ತು ಅವರ ಧರ್ಮವನ್ನು ಕಪ್ಪುಪಟ್ಟಿಗೆ ಸೇರಿಸುವುದಿಲ್ಲ? ಸುರೇಶ್ ಕಲ್ಮಾಡಿ, ಪ್ರತಾಪ್ ಸಿಂಗ್ ಕೈಲಾಸ್, ಕನ್ನಿಮೋಳಿ, ರಾಜಾ, ಬಾಲಕೃಷ್ಣ ಪಿಳ್ಳೈ, ಸುಖ್‍ರಾಂ, ಜಗನ್ಮೋಹನ್ ರೆಡ್ಡಿ, ಲಾಲೂ ಪ್ರಸಾದ್ ಯಾದವ್, ಯಡಿಯೂರಪ್ಪ, ಜನಾರ್ಧನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ವೀರಭದ್ರ ಸಿಂಗ್, ಜಯಲಲಿತಾ, ಶಶಿಕಲಾ, ವಸುಂಧರಾ, ಚೌಟಾಲ, ಲಲಿತ್ ಮೋದಿ.. ಮುಂತಾದ ಹೆಸರುಗಳು ಮತ್ತು ಇತ್ತೀಚಿನ ಜಯ್‍ಶಾ ಎಂಬ ಹೆಸರು ಯಾವ ಧರ್ಮವನ್ನು ಪ್ರತಿನಿಧಿಸುತ್ತದೆ? ಮೊಗಲರನ್ನೇ, ಟಿಪ್ಪುವನ್ನೇ ಬಾಬರ್‍ನನ್ನೇ?
         ಇನ್ನೂ ಒಂದು ಪ್ರಶ್ನೆಯನ್ನು ಕೇಳಬೇಕು..
1969ರ ಗುಜರಾತ್ ಹತ್ಯಾಕಾಂಡ - 430 ಮುಸ್ಲಿಮರ ಹತ್ಯೆ
1983ರ ನೆಲ್ಲಿ ಹತ್ಯಾಕಾಂಡ - 2,191 ಮುಸ್ಲಿಮರ ಹತ್ಯೆ
1980ರ ಮೊರಾದಾಬಾದ್ ಹತ್ಯಾಕಾಂಡ - 200 ಮುಸ್ಲಿಮರ ಹತ್ಯೆ
1980ರ ಭಾಗಲ್ಪುರ್ ಹತ್ಯಾಕಾಂಡ - 900 ಮುಸ್ಲಿಮರ ಹತ್ಯೆ
2002ರ ಗುಜರಾತ್ ಹತ್ಯಾಕಾಂಡ - 2000 ಮುಸ್ಲಿಮರ ಹತ್ಯೆ
2013ರ ಮುಝಫ್ಫರ್ ನಗರ್ ಹತ್ಯಾಕಾಂಡ - 42 ಮುಸ್ಲಿಮರ ಹತ್ಯೆ
1992ರ ಮುಂಬೈ ಯೋಜಿತ ಗಲಭೆ - 600 ಮುಸ್ಲಿಮರ ಹತ್ಯೆ
..ಇವೆಲ್ಲ ಏನು? ಸ್ವಾತಂತ್ರ್ಯ ಪೂರ್ವದ ದೊರೆಗಳನ್ನು ಎತ್ತಿಕೊಂಡು ಮಾತಾಡುವವರೆಲ್ಲ ಈ ಪ್ರಜಾತಂತ್ರ ಭಾರತದ ಹತ್ಯಾಕಾಂಡಗಳ ಬಗ್ಗೆ ಮತ್ತು ಅದರಲ್ಲಿ ಭಾಗಿಯಾದವರ ಬಗ್ಗೆ ಯಾಕೆ ಮಾತಾಡುವುದಿಲ್ಲ? ಮುಸ್ಲಿಮ್ ದೊರೆಗಳನ್ನು ಕ್ರೂರಿಗಳೋ ವಂಚಕರೋ ಲೂಟಿಕೋರರೋ ಇನ್ನೇನೋ ಅನ್ನಿ. ಆದರೆ ಅದೇ ಉತ್ಸಾಹದಿಂದ ಈ ಮಂದಿಯನ್ನೂ ಲೂಟಿಕೋರರು, ಕ್ರೂರಿಗಳು, ವಂಚಕರು ಎಂದು ಕರೆಯುವುದಕ್ಕೆ ಯಾಕೆ ಈ ಮಂದಿ ಉಮೇದು ತೋರುತ್ತಿಲ್ಲ? ಈ ಹಗರಣ ಮತ್ತು ಹತ್ಯಾಕಾಂಡಗಳಲ್ಲಿ ಭಾಗಿಯಾದವರು ಮುಸ್ಲಿಮರಲ್ಲ ಎಂಬುದು ಇದಕ್ಕೆ ಕಾರಣವೇ? ಮುಸ್ಲಿಮನದ್ದಾದರೂ ಹಿಂದೂವಿನದ್ದಾದರೂ ಹತ್ಯೆ ಹತ್ಯೆಯೇ. ರಾಜ ಕೊಂದರೂ ಪ್ರಜೆ ಕೊಂದರೂ ಸಾವು ಸಾವೇ. ಆದರೂ ರಾಜಪ್ರಭುತ್ವಕ್ಕೂ ಪ್ರಜಾತಂತ್ರಕ್ಕೂ ಹೋಲಿಕೆಗೆ ಸಿಗದಷ್ಟು ವ್ಯತ್ಯಾಸಗಳಿವೆ. ರಾಜ ಯಾರಿಗೂ ಉತ್ತರದಾಯಿಯಲ್ಲ. ಆತನೇ ಸಂವಿಧಾನ. ಆತನೇ ನ್ಯಾಯಾಧೀಶ. ರಾಜ ಸಾವಿಗೀಡಾದರೆ ಆತನ ಮಗ ಉತ್ತರಾಧಿಕಾರಿಯಾಗಬಲ್ಲ/ಳು. ಆತ ಪ್ರಶ್ನಾತೀತ. ಬಹುಶಃ ಇವೆಲ್ಲಕ್ಕೂ ಅಪವಾದವೆಂಬಂತೆ ಕೆಲವೇ ಕೆಲವು ರಾಜರುಗಳು ನಡೆದುಕೊಂಡಿರಬಹುದಾದರೂ ಅದು ಅವರ ವೈಯಕ್ತಿಕ ಹೆಚ್ಚುಗಾರಿಕೆಯೇ ಹೊರತು ರಾಜಪ್ರಭುತ್ವದ ಅನಿವಾರ್ಯತೆಯಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಪ್ರಜಾತಂತ್ರ ಹಾಗಲ್ಲವಲ್ಲ. ಅದಕ್ಕೊಂದು ಸಂವಿಧಾನ, ವ್ಯವಸ್ಥಿತ ಆಡಳಿತ ಯಂತ್ರ, ಆಯ್ಕೆ ವಿಧಾನ, ಸರ್ವರೂ ಸಮಾನರು, ಸರ್ವರೂ ಉತ್ತರದಾಯಿಗಳು.. ಇತ್ಯಾದಿಗಳೂ ಇವೆಯಲ್ಲ. ನರೇಂದ್ರ ಮೋದಿಯವರಾಗಲಿ, ಮನ್‍ಮೋಹನ್ ಸಿಂಗ್ ಆಗಲಿ ಅಥವಾ ದೇವೇಗೌಡರೇ ಆಗಲಿ ಯಾರದಾದರೋ ತಂದೆ, ಮಗ, ವಂಶ, ಕುಲ, ಧರ್ಮ ಇತ್ಯಾದಿಗಳ ಕಾರಣಕ್ಕಾಗಿ ಪ್ರಧಾನಿಗಳಾದುದು ಅಲ್ಲವಲ್ಲ. ಒಂದು ವೇಳೆ ನೆಹರೂರ ಮಗಳು ಇಂದಿರಾಗಾಂಧಿ ಮತ್ತು ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರೂ ಕೇವಲ ತಂದೆ, ಮಗಳು, ಮಗ ಎಂಬ ಕಾರಣ ವೊಂದರಿಂದಲೇ ಅವರು ಆ ಸ್ಥಾನಕ್ಕೆ ಏರಿದ್ದಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸೋಲನ್ನೂ ಕಂಡಿದ್ದಾರೆ. ವಿಚಾರಣೆಗೂ ಒಳಗಾಗಿದ್ದಾರೆ. ಪ್ರಜೆಗಳಿಗೆ ಅವರನ್ನು ಟೀಕಿಸುವ ಮತ್ತು ಪ್ರಶಂಸಿಸುವ ಸ್ವಾತಂತ್ರ್ಯವೂ ಇತ್ತು. ದೊರೆಗಳ ಜಗತ್ತಿನಿಂದ ಭಾರತವು ಇಂಥ ಪ್ರಜೆಗಳೇ ಪ್ರತಿನಿಧಿಗಳಾಗುವ ಸ್ಥಿತಿಗೆ ಹೊರಳಿಕೊಂಡ ಬಳಿಕವೂ ಈ ದೇಶದ ಮುಸ್ಲಿಮರು ಎಂದೋ ಆಗಿ ಹೋದ ದೊರೆಗಳ ಪಾಪಕೃತ್ಯಗಳಿಗೆ ಹೊಣೆಗಾರರು ಎಂದಾದರೆ, ಈ ಮೇಲಿನ ಹಗರಣ ಮತ್ತು ಹತ್ಯಾಕಾಂಡಗಳಿಗೆ ಯಾರು ಹೊಣೆಯಾಗಬೇಕು? ಯಾವ ಧರ್ಮಾನುಯಾಯಿಗಳನ್ನು ಹೊಣೆಯಾಗಿಸಬೇಕು? ಈ ಹಗರಣದಲ್ಲಿ ಭಾಗಿಯಾದವರು ಕಟ್ಟಿರಬಹುದಾದ ಅಥವಾ ದೇಣಿಗೆಯನ್ನೋ ಉಡುಗೊರೆಯನ್ನೋ ನೀಡಿರಬಹುದಾದ ಎಷ್ಟು ಮಂದಿರಗಳು ‘ಕಪ್ಪು ಚುಕ್ಕೆ’ ಪಟ್ಟಿಯಲ್ಲಿ ಸೇರಬೇಕು? ಎಷ್ಟು ನೆಲಸಮಕ್ಕೆ ಅರ್ಹವಾಗಬೇಕು?
      ನಿಜವಾಗಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ 60 ಸಾವಿರಕ್ಕಿಂತ ಹೆಚ್ಚು ಸಣ್ಣ ಮತ್ತು ದೊಡ್ಡ ಮಟ್ಟದ ಕೋಮುಗಲಭೆಗಳು ನಡೆದಿವೆ ಎಂದು ಹೇಳಲಾಗುತ್ತದೆ. ಈ ಕೋಮುಗಲಭೆಗಳ ಅಂತಿಮ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತು. ಗಲಭೆ ಎಂಬ ಶೀರ್ಷಿಕೆಯಿದ್ದರೂ ಬಹುತೇಕ ಎಲ್ಲ ಸಂದರ್ಭಗಳಲ್ಲೂ ನಡೆದಿರುವುದು ಏಕಮುಖ ಹಿಂಸಾಚಾರವೇ ಹೊರತು ಗಲಭೆಯಲ್ಲ. 2002ರ ಗುಜರಾತ್ ಹತ್ಯಾಕಾಂಡವನ್ನೂ ಗುರುತಿಸುವುದು ‘ಗುಜರಾತ್ ಗಲಭೆ’ ಎಂದೇ. 1992 ಮುಂಬೈ ಹತ್ಯಾಕಾಂಡಕ್ಕೂ ‘ಮುಂಬೈ ಗಲಭೆ’ ಎಂಬ ಹೆಸರನ್ನೇ ನೀಡಲಾಗಿದೆ. ಒಂದು ವೇಳೆ, ಈ ಎಲ್ಲ ಗಲಭೆ ಅಥವಾ ಹತ್ಯಾಕಾಂಡಗಳಲ್ಲಿ ಮೃತಪಟ್ಟವರು, ಗಾಯಗೊಂಡವರು ಮತ್ತು ನಿರಾಶ್ರಿತರಾದವರ ಪಟ್ಟಿಯನ್ನೊಮ್ಮೆ ಪರಿಶೀಲಿಸಿದರೆ, ರಾಜಪ್ರಭುತ್ವವನ್ನೂ ನಾಚಿಸುವ ಫಲಿತಾಂಶ ಲಭ್ಯವಾದೀತು. ಈ ಹಿಂದಿನ ರಾಜರುಗಳ ತಪ್ಪುಗಳನ್ನು ಉಲ್ಲೇಖಿಸಿಕೊಂಡು ಕೇವಲ 70 ವರ್ಷಗಳೊಳಗೆ ಇಷ್ಟು ದೊಡ್ಡ ಸಂತ್ರಸ್ತರ ಗುಂಪನ್ನು ತಯಾರಿಸಿಯೂ ಇನ್ನೂ ಅದರ ಪ್ರತೀಕಾರ ಮುಗಿದಿಲ್ಲವೆಂಬಂತೆ ಆಡುತ್ತಿರುವವರು ನಿಜಕ್ಕೂ ಏನನ್ನು ಬಯಸುತ್ತಿದ್ದಾರೆ? ತಾಜ್‍ಮಹಲ್ ಈಗಿನ ವಿವಾದ. ಸದ್ಯ ಮುಸ್ಲಿಮ್ ದೊರೆಗಳ ಕ್ರೌರ್ಯವನ್ನು ಪಟ್ಟಿ ಮಾಡುವುದು ಮತ್ತು ಅದರ ಹೊಣೆಯನ್ನು ಈಗಿನ ಮುಸ್ಲಿಮರು ಹೊರಬೇಕೆಂದು ಪರೋಕ್ಷವಾಗಿ ಆಜ್ಞಾಪಿಸುವ ಹೇಳಿಕೆಗಳು ಕೇಳಿಬರುತ್ತಿವೆ. ನಿಜಕ್ಕೂ, ತಾಜ್‍ಮಹಲ್ ಅನ್ನು ವಿವಾದಿತಗೊಳಿಸಿರುವುದಕ್ಕೆ ಕಾರಣ ಹಿಂದೂ ಹಿತಾಸಕ್ತಿಯೇ? ಅದನ್ನು ಕಟ್ಟಿಸಿದ್ದು ಷಹಜಹಾನ್. ಆತ ಬಲವಂತದಿಂದಲೇ ಆ ಭೂಮಿಯನ್ನು ಆಕ್ರಮಿಸಿ ತಾಜ್ ಕಟ್ಟಿದ ಎಂದೇ ಇಟ್ಟುಕೊಳ್ಳೋಣ. ಕೇವಲ ಕರ್ನಾಟಕವೊಂದರಲ್ಲೇ  ಡಿನೋಟಿಫಿಕೇಶನ್ ಮಾಡಿಕೊಂಡು ಭೂಮಿ ಹೊಡೆದ ರಾಜಕಾರಣಿಗಳ ಸಂಖ್ಯೆ ಎಷ್ಟಿಲ್ಲ? ಎಷ್ಟು ಶ್ರೀಮಂತರು ಬಡವರ ಭೂಮಿಯನ್ನು ಅಕ್ರಮಿಸಿ ಅನುಭವಿಸುತ್ತಿಲ್ಲ? ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಲ್ಲ? ಕೇವಲ ಕರ್ನಾಟಕದ ಸ್ಥಿತಿಯೇ ಹೀಗಿರುವಾಗ ಇನ್ನು ಇಡೀ ದೇಶಕ್ಕೆ ಸಂಬಂಧಿಸಿ ಹೇಳುವುದಕ್ಕೇನಿದೆ? ಪ್ರಜಾಪ್ರಭುತ್ವ ರಾಷ್ಟ್ರದಲ್ಲೇ  ಇಷ್ಟೆಲ್ಲ ಸಾಧ್ಯ ಎಂದಾದರೆ ಇನ್ನು ತಾನು ಹೇಳಿದ್ದೇ  ಶಾಸನ ಅನ್ನುವ ಕಾಲದಲ್ಲಿ ಬದುಕಿದ್ದ ಷಹಜಹಾನ್ ಏನು ಮಹಾ?
      ತಾಜ್‍ಮಹಲ್ ಅನ್ನು ವಿವಾದಾಸ್ಪದಗೊಳಿಸಿದವರು ಸದ್ಯ ಮಾಡಬೇಕಿರುವುದೇನೆಂದರೆ, ಪ್ರಜಾತಂತ್ರ ರಾಷ್ಟ್ರದಲ್ಲಿದ್ದೂ ಷಹಜಹಾನ್‍ನನ್ನೂ ಮೀರಿಸುವ ರೀತಿಯಲ್ಲಿ ಭೂಮಿ ಅಕ್ರಮಿಸಿ ಕೊಂಡಿರುವರಲ್ಲ, ಅವರನ್ನು ಮತ್ತು ಅವರು ಪ್ರತಿನಿಧಿಸುವ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸುವುದು. ಷಹಜಹಾನ್‍ನ ‘ತಪ್ಪಿಗೆ’ ಇಲ್ಲಿನ ಈಗಿನ ಮುಸ್ಲಿಮರನ್ನು ಹೇಗೆ ಹೊಣೆ ಮಾಡ ಲಾಗುತ್ತದೋ ಅದೇ ರೀತಿಯಲ್ಲಿ ಈ ಮಂದಿಯನ್ನು ಮತ್ತು ಅವರ ಧರ್ಮವನ್ನು ಹೊಣೆ ಮಾಡುವುದು. ಇನ್ನೊಂದು ಏನೆಂದರೆ, ಷಹಜಹಾನ್ ಈ ದೇಶದ ಸಂಪತ್ತನ್ನು ಲೂಟಿ ಮಾಡಿದ್ದರೆ ಅದು ರಾಜಪ್ರಭುತ್ವದ ಕಾಲದಲ್ಲಿ. ಆದರೂ ಅದು ತಪ್ಪೇ. ಆದರೆ, ಪ್ರಜಾತಂತ್ರ ಭಾರತದಲ್ಲಿ ಷಹಜಹಾನ್‍ನನ್ನೂ ಮೀರಿಸುವ ಪ್ರಮಾಣದಲ್ಲಿ ಈ ದೇಶದ ಸಂಪತ್ತನ್ನು ಲೂಟಿ ಮಾಡಿದವರಿದ್ದಾರಲ್ಲ, ಅವರನ್ನು ಮತ್ತು ಆ ಮೂಲಕ ಅವರ ಧರ್ಮಾನುಯಾಯಿಗಳನ್ನು ಸಾರ್ವತ್ರಿಕವಾಗಿ ಕಟಕಟೆಯಲ್ಲಿ ನಿಲ್ಲಿಸುವುದು. ಮುಸ್ಲಿಮರ ವಿರುದ್ಧ ಬಳಸುವ ಭಾಷೆ, ಆಕ್ರಮಣಕಾರಿ ಧೋರಣೆ, ವ್ಯಂಗ್ಯಗಳನ್ನು ಅವರ ಮೇಲೆ ಮತ್ತು ಅವರು ಪ್ರತಿನಿಧಿಸುವ ಧರ್ಮಾನುಯಾಯಿಗಳ ಮೇಲೆ ಬಳಸುವುದು. ಇದರ ಸಾಧ್ಯಾಸಾಧ್ಯತೆಯ ಮೇಲೆಯೇ ತಾಜ್ ವಿವಾದದ ಹಿತಾಸಕ್ತಿಯ ಪ್ರಶ್ನೆಯೂ ಪರಿಹಾರವಾಗುತ್ತದೆ. ಆದರೆ, ತಾಜ್ ಆಗಲಿ, ಬಾಬರಿ ಆಗಲಿ ಅಥವಾ ಮಥುರಾವೇ ಆಗಲಿ- ಬರೇ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದಕ್ಕೆ ಉಪಯೋಗಕ್ಕೀಡಾಗಿದೆಯೇ ಹೊರತು ಬೇರೇನಕ್ಕಲ್ಲ ಎಂಬುದು ಅತ್ಯಂತ ಸ್ಪಷ್ಟ. ದೊರೆಗಳ ತಪ್ಪುಗಳಿಗಿಂತ ಎಷ್ಟೋ ಪಟ್ಟು ಅಧಿಕ ಪ್ರಮಾಣದಲ್ಲಿ ತಪ್ಪು ಮಾಡಿದವರು ಈ ದೇಶದಲ್ಲಿ ಈಗ ಬದುಕುತ್ತಿದ್ದರೂ ಅವರನ್ನು ಮತ್ತು ಅವರು ಪ್ರತಿನಿಧಿಸುವ ಧರ್ಮವನ್ನು ಗುರಿಯಾಗಿಸಿ ಒಂದೇ ಒಂದು ಮಾತನ್ನೂ ಇಲ್ಲಿ ಆಡಲಾಗಿಲ್ಲ. ದೇಶದ ಸಂಪತ್ತನ್ನು ಲೂಟಿದವರು ಮತ್ತು ದೊರೆಗಳ ಕಾಲದ ಕ್ರೌರ್ಯಕ್ಕೆ ಸಮಗಟ್ಟುವಂತೆ ಕ್ರೌರ್ಯವೆಸಗಿ ದವರು ನಮ್ಮ ನಡುವೆ ಇದ್ದೂ ಅವರನ್ನು ವಿರೋಧಿಸುವು ದಾಗಲಿ ಅವರ ಧರ್ಮವನ್ನು ಅದಕ್ಕೆ ಹೊಣೆ ಮಾಡುವುದಾಗಲಿ ಎಂದೂ ನಡೆದಿಲ್ಲ. ಇದುವೇ ಈ ಎಲ್ಲ ವಿವಾದ, ಹೇಳಿಕೆ, ಚಳವಳಿಗಳ ಒಟ್ಟು ಸಾರಾಂಶವನ್ನು ಹೇಳುತ್ತದೆ. ಇವುಗಳ ಹಿಂದಿರುವುದು ಧರ್ಮ ಹಿತಾಸಕ್ತಿ ಅಲ್ಲ. ದೇಶಪ್ರೇಮವೂ ಅಲ್ಲ. ಬರೇ ರಾಜಕೀಯ ಹಿತಾಸಕ್ತಿ.
           ಒಂದು ವೇಳೆ ಷಹಜಹಾನ್ ಇವತ್ತು ಸಮಾಧಿಯಿಂದ ಎದ್ದು ಬಂದರೆ ಈ ಮಂದಿ ಆತನನ್ನು ತಮ್ಮ ಪಕ್ಷಕ್ಕೇ ಸೇರ್ಪಡೆ ಗೊಳಿಸಿಯಾರು.


No comments:

Post a Comment