Thursday, August 31, 2017

ಉಸ್ತಾದ್, ಪ್ರಿನ್ಸ್, ಜೈ, ಬಿಟ್ಟು ಮತ್ತು ...

       ಹುಲಿಗಳಲ್ಲಿ ಸೆಲೆಬ್ರಿಟಿ ಹುಲಿಗಳು ಯಾಕಿವೆ? ಯಾವ ಕಾರಣಕ್ಕಾಗಿ ಒಂದು ಹುಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುತ್ತದೆ? ಅದಕ್ಕೆ ಮಾನದಂಡಗಳಿವೆಯೇ? ಅದು ಪ್ರತಿಭೆ ಆಧಾರಿತವೇ, ಆಕಾರ ಆಧಾರಿತವೇ ಅಥವಾ ಇನ್ನಾವುದಾದರೂ ವಿಶೇಷತೆ ಒಂದು ಹುಲಿಯನ್ನು ಸೆಲೆಬ್ರಿಟಿಗೊಳಿಸುವುದರಲ್ಲಿದೆಯೇ? ರಾಜಸ್ಥಾನದ ರಾಂತಂಬೋರೆ ರಾಷ್ಟ್ರೀಯ ರಕ್ಷಿತಾರಣ್ಯದ ಉಸ್ತಾದ್ ಅಥವಾ ಮಚಲಿ ಎಂಬ ಹುಲಿ, ಕರ್ನಾಟಕದ ಬಂಡೀಪುರ ರಾಷ್ಟ್ರೀಯ ರಕ್ಷಿತಾರಣ್ಯದ ಪ್ರಿನ್ಸ್ ಎಂಬ ಹುಲಿ, ಮಹಾರಾಷ್ಟ್ರದ ಚಂದ್ರಾಪುರದ ರಕ್ಷಿತಾರಣ್ಯದ ಜೈ ಮತ್ತು ಬಿಟ್ಟು ಎಂಬ ಹುಲಿಗಳು ಇಂಥ ಪ್ರಶ್ನೆಗಳನ್ನು ಆಗಾಗ ಹುಟ್ಟು ಹಾಕುತ್ತಲೇ ಇರುತ್ತವೆ. ಈ ಹಿಂದೆ ಒಮ್ಮೆ ಉಸ್ತಾದ್ ಹುಲಿಯು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿತ್ತು. ಚಂದ್ರಾಪುರ್ ಅರಣ್ಯದಿಂದ ಜೈ ಹುಲಿಯು ಕಾಣೆಯಾಗಿದೆ ಎಂಬ ಸುದ್ದಿಯೂ ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯುವಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಈ ದೇಶದ ರಕ್ಷಿತಾರಣ್ಯಗಳಲ್ಲಿ ನೂರಾರು ಹುಲಿಗಳಿವೆ. ಈ ಹುಲಿಗಳ ನಡುವೆ ಪ್ರಣಯ, ಜಗಳ, ಸಾವು, ಅನಾರೋಗ್ಯ.. ಎಲ್ಲವೂ ನಡೆಯುತ್ತಲೂ ಇರುತ್ತವೆ. ಆದರೆ ಇವುಗಳಲ್ಲಿ ನಾಲ್ಕೈದು ಹುಲಿಗಳನ್ನು ಆಯ್ದು, ಅವುಗಳಿಗೆ ಪ್ರತ್ಯೇಕ ಹೆಸರು ಕೊಟ್ಟು, ಅವುಗಳ ಬಗ್ಗೆ ವಿಶೇಷ ಗಮನ ಹರಿಯುವಂತೆ ಮಾಡುವುದು ಯಾತಕ್ಕಾಗಿ? ಅದರ ಉz್ದÉೀಶವೇನು? ಬಹುಶಃ, ಜನರನ್ನು ಈ ರಕ್ಷಿತಾರಣ್ಯಗಳ ಕಡೆಗೆ ಆಕರ್ಷಿಸಲು ಮತ್ತು ಅವರಲ್ಲಿ ಈ ಹುಲಿಗಳ ಬಗ್ಗೆ ಕುತೂಹಲವನ್ನು ಹುಟ್ಟಿಸುವುದರ ಹೊರತಾಗಿ ಇದಕ್ಕೆ ಬೇರೆ ಕಾರಣಗಳಿರುವ ಸಾಧ್ಯತೆಯಿಲ್ಲ. ಬಹುಶಃ, ಉಸ್ತಾದ್ ನಂಥ ಹುಲಿಗಳು ನಮ್ಮ ದೇಶದ ರಕ್ಷಿತಾರಣ್ಯಗಳಲ್ಲಿ ಅನೇಕ ಇರಬಹುದು ಮತ್ತು ಅವುಗಳಲ್ಲಿ ಉಸ್ತಾದ್‍ಗಿಂತಲೂ ಗಟ್ಟಿಮುಟ್ಟಾದ ಹಾಗೂ ಚೆಲುವಾದ ಹುಲಿಗಳೂ ಇರಬಹುದು. ಮುಂದೊಂದು ದಿನ ಇವುಗಳಲ್ಲಿ ಒಂದು ಹುಲಿಗೆ ಕುತೂಹಲಕಾರಿ ಕತೆಯೊಂದಿಗೆ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಭಾಗ್ಯವೂ ಸಿಗಬಹುದು. ಆದಾಯ ಹೆಚ್ಚಿಸಿಕೊಳ್ಳುವ ತಂತ್ರ ಇದು. ಜನರನ್ನು ಸೆಳೆಯುವ ಬುದ್ಧಿವಂತಿಕೆಯೂ ಇದರ ಹಿಂದಿದೆ. ಹಾಗಂತ, ಒಂದು ಸರಕಾರವೇ ಇಂಥ ತಂತ್ರವನ್ನು ತನ್ನ ಕಾರ್ಯನೀತಿಯಾಗಿ ಅಳ ವಡಿಸಿಕೊಂಡರೆ ಹೇಗಾಗಬಹುದು? ಕಳೆದ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡವಳಿಕೆಗಳು, ವಿದೇಶಾಂಗ ನೀತಿಗಳು, ಉಡುಗೊರೆಗಳು ಮತ್ತು ಕಾರ್ಯಕ್ರಮ ಆಯೋಜನೆಗಳು ಹುಲಿಗಳ ಸೆಲೆಬ್ರಿಟಿ ತಂತ್ರವನ್ನು ನೆನಪಿಸುವಂತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇಪಾಳಕ್ಕೆ ಭೇಟಿ ಕೊಟ್ಟರು. ಪ್ರಸಿದ್ಧ ಪಶುಪತಿನಾಥ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಶನದ ವೇಳೆ ನರೇಂದ್ರ ಮೋದಿಯವರು ಕೇಸರಿ ಶಾಲು, ರುದ್ರಾಕ್ಷಿ ಮಾಲೆ ಮತ್ತು ಹಣೆಗೆ ಗಂಧವನ್ನು ಹಚ್ಚಿಕೊಂಡಿದ್ದರು. ಇದರಲ್ಲಿ ತಪ್ಪು ಖಂಡಿತ ಇಲ್ಲ. ಇದು ಅವರವರ ಸ್ವಾತಂತ್ರ್ಯ. ಇದೇ ವೇಳೆ, ಸೆಕ್ಯುಲರ್ ಭಾರತದ ಪ್ರಧಾನಿಯೋರ್ವರು ಭಾರತದ ಕೆಲವು ನಿರ್ದಿಷ್ಟ ಸಂಘಟನೆಗಳಲ್ಲಿ ಮಾತ್ರ ಕಡ್ಡಾಯದಂತೆ ಪಾಲಿಸಲಾಗುತ್ತಿರುವ ‘ಕೇಸರಿ ಶಾಲು, ಗಂಧ ಮತ್ತು ರುದ್ರಾಕ್ಷಿ ಮಾಲೆ’ ಧಾರಣೆಯಲ್ಲಿ ಕಾಣಿಸಿಕೊಳ್ಳುವುದನ್ನು ತೀರಾ ಸಹಜವಾಗಿ ಕಾಣಬಹುದೇ? ಅದರ ಹಿಂದೆ ಅಸಹಜವಾದುದು ಇರಲಾರದೇ? ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸುತ್ತಿರುವ ಅದೇ ಧರ್ಮವನ್ನು ಅನುಸರಿಸುವವರು ಕಾಂಗ್ರೆಸ್, ಕಮ್ಯುನಿಸ್ಟ್, ಆಪ್, ತೃಣಮೂಲ, ಜನತಾದಳಗಳು, ತೆಲುಗುದೇಶಂ, ಟಿ.ಆರ್.ಎಸ್., ಸಮಾಜವಾದಿ.. ಸಹಿತ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರೆಲ್ಲ ದೇವಾಲಯ ಪ್ರವೇಶದ ವೇಳೆ ಇದೇ ಉಡುಪು ನೀತಿಯನ್ನು ಅನುಸರಿಸುವುದು ಕಡಿಮೆ. ಮೋದಿಯವರ ಉಡುಗೆ ಪ್ರಾಮುಖ್ಯತೆ ಪಡೆಯುವುದೇ ಇಲ್ಲಿ. ಅವರು ಸೆಕ್ಯುಲರ್ ಭಾರತದಲ್ಲಿರುವ ನಿರ್ದಿಷ್ಟ ಧಾರ್ಮಿಕ ಸಂಘ ಟನೆಗಳನ್ನು ತನ್ನ ಉಡುಗೆಯಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ ಆ ಸಂಘಟನೆಗಳನ್ನು ಮತ್ತು ಅವು ಪ್ರತಿಪಾದಿಸುವ ವಿಚಾರ ಧಾರೆಗಳನ್ನು ನೇಪಾಳಿಗರಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಇದೆ. ನಿರ್ದಿಷ್ಟ ವಿಚಾರಧಾರೆಗೆ ಓರ್ವ ಪ್ರಧಾನಿ ರಾಯಭಾರಿ ಯಾಗುವ ತಂತ್ರ ಇದು. ಸೆಕ್ಯುಲರ್ ಸಂವಿಧಾನವನ್ನು ತನ್ನ ನಡೆ-ನುಡಿಯಲ್ಲಿ ಪ್ರತಿನಿಧಿಸಬೇಕಾದ ಪ್ರಧಾನಿಯೋರ್ವರು ಆ ಸಂವಿಧಾನಕ್ಕೆ ತೀರಾ ವಿರುದ್ಧವಾದ ವಿಚಾರಧಾರೆಯನ್ನು ಹೇಗೆ ನಾಜೂಕಾಗಿ ಪ್ರಚಾರ ಮಾಡಿದರು ಅನ್ನುವುದಕ್ಕೆ ಸಾಕ್ಷಿ ಇದು. ಇದಕ್ಕೆ ಇನ್ನೊಂದು ಉದಾಹರಣೆ ಅಬುಧಾಬಿ ಭೇಟಿ. 2015ರಲ್ಲಿ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಯುಎಇ ಸರಕಾರವು ಮಹತ್ವದ ಘೋಷಣೆಯೊಂದನ್ನು ಹೊರಡಿಸಿತು. ಅಬುಧಾಬಿಯಲ್ಲಿ ದೇವಾಲಯ ವೊಂದನ್ನು ನಿರ್ಮಿಸುವುದಕ್ಕೆ ಜಾಗ  ಮಂಜೂರು ಮಾಡಲಾಗಿರುವ ಘೋಷಣೆ ಅದು. ಈ ಘೋಷಣೆಗೆ ಕೇಂದ್ರ ವಿದೇಶಾಂಗ ಸಚಿವಾಲಯವು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ:
“ಭಾರತೀಯ ಸಮುದಾಯದ ದೀರ್ಘಕಾಲದ ಕಾಯುವಿಕೆ ಕೊನೆಗೊಂಡಿದೆ. ಪ್ರಧಾನಿ ಮೋದಿಯವರ ಯುಎಇ ಭೇಟಿಯ ವೇಳೆ ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಲು ಯುಎಇ ಸರಕಾರ ನಿರ್ಧರಿಸಿದೆ.”
ಪ್ರಧಾನಿ ನರೇಂದ್ರ ಮೋದಿಯವರು ಹೀಗೆ ಟ್ವೀಟ್ ಮಾಡಿದರು:
“ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿದ ಯುಎಇ ಆಡಳಿತಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ಮಹತ್ದದ  ಹೆಜ್ಜೆ.”
      ನಿಜಕ್ಕೂ ಇದು ಮಹತ್ವದ ಹೆಜ್ಜೆಯೇ? ದೇವಾಲಯವನ್ನೋ ಮಸೀದಿಯನ್ನೋ ಅಥವಾ ಚರ್ಚನ್ನೋ ನಿರ್ಮಿಸಿ ಕೊಡುವುದು ಓರ್ವ ಪ್ರಧಾನಿಯ ವಿದೇಶ ಭೇಟಿಯ ಪ್ರಮುಖ ಗುರಿಯೇ? ಅಥವಾ ಒಂದು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸಿದ ವರ್ಚಸ್ಸನ್ನು ಪಡಕೊಳ್ಳುವ ತಂತ್ರದ ಭಾಗವೇ ಈ ಟ್ವೀಟ್? ನಿಜವಾಗಿ ಯಾವುದೇ ದೇಶದ ಆಡಳಿತ ಪ್ರಮುಖರೊಬ್ಬರು ಇನ್ನೊಂದು ದೇಶಕ್ಕೆ ಭೇಟಿ ಕೊಟ್ಟು ಅಲ್ಲಿ ಚರ್ಚನ್ನೋ ಮಸೀದಿ ಯನ್ನೋ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳು ವುದು ಭೇಟಿಯ ಪ್ರಮುಖ ಗುರಿಯಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಯುಎಇಯಲ್ಲಿ ಭಾರತೀಯ ವಲಸಿಗ ಕುಟುಂಬಗಳು ಧಾರಾಳ ಇವೆ. ಅವರಿಗೆ ಅವರದ್ದೇ  ಆದ ಸಾಕಷ್ಟು ಸಮಸ್ಯೆಗಳೂ ಇವೆ. ಉದ್ಯೋಗ ಭದ್ರತೆ ಮತ್ತು ಸುರಕ್ಷಿತತೆ ಇವುಗಳಲ್ಲಿ ಪ್ರಮುಖವಾದುದು. ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಮೂಲವಾಗಿರುವ ಇವರ ಬಗ್ಗೆ ಯಾವ ಮಹತ್ವಪೂರ್ಣ ಒಪ್ಪಂದವನ್ನೂ ಘೋಷಿಸದೆಯೇ ಮಂದಿರವನ್ನು ಸಾಧನೆಯಾಗಿ ಬಿಂಬಿಸಿಕೊಳ್ಳುವುದೆಂದರೇನು? ಒಂದು ವೇಳೆ ಮೋದಿಯವರ ಸ್ಥಾನದಲ್ಲಿ ಓರ್ವ ಮುಸ್ಲಿಮ್ ಇರುತ್ತಿದ್ದರೆ ಮತ್ತು ಅವರು ಜಪಾನಿಗೋ ನಾರ್ವೆಗೋ ಭೇಟಿ ನೀಡಿ ‘ಮಸೀದಿ ನಿರ್ಮಾಣ’ವನ್ನು ಭೇಟಿಯ ಪ್ರಮುಖ ಸಾಧನೆಯಾಗಿ ಟ್ವೀಟ್ ಮಾಡಿರುತ್ತಿದ್ದರೆ ಅದಕ್ಕೆ ಲಭ್ಯವಾಗುವ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು? ಬಹುಶಃ, ಈ ದೇಶದಲ್ಲಿ ಮಂದಿರ ನಿರ್ಮಾಣದ ಗುರಿಯೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದರ ಪ್ರತಿನಿಧಿಯಾದ ಮೋದಿಯವರು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸುವಷ್ಟು ಕಾಳಜಿ ಉಳ್ಳವರು ಎಂದು ಸಾರುವುದೇ ಈ ಟ್ವೀಟ್‍ನ ಉದ್ದೇಶ. ಆ ಮೂಲಕ ಬೆಂಬಲಿಗರಲ್ಲಿ ತನ್ನ ಇಮೇಜನ್ನು ಹೆಚ್ಚಿಸಿಕೊಳ್ಳುವ ಶ್ರಮವೂ ಇದರ ಹಿಂದಿದೆ.
ಯಾವುದೇ ರಾಷ್ಟ್ರದ ಆಡಳಿತ ಪ್ರಮುಖರ ವಿದೇಶ ಭೇಟಿ ಮಹತ್ವಪೂರ್ಣವಾಗಬೇಕಾದುದು ಅಲ್ಲಿ ನಡೆಯುವ ಒಪ್ಪಂದಗಳು ಮತ್ತು ಹೇಳಿಕೆಗಳಿಗಾಗಿ ಮಾತ್ರ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಸೌದಿ ಭೇಟಿ ಇದಕ್ಕೊಂದು ಉದಾಹರಣೆ. ಅವರ ಭೇಟಿಯ ಬಳಿಕ ನಾಲ್ಕು ಗಲ್ಫ್ ರಾಷ್ಟ್ರಗಳು ತಮ್ಮ ಬಹುಕಾಲದ ಮಿತ್ರ ಮತ್ತು ತಮ್ಮ ಗಡಿಯನ್ನೇ ಹಂಚಿಕೊಳ್ಳುವ ಕತರ್ ಮೇಲೆ ದಿಗ್ಬಂಧನ ಹೇರಿದುವು. ಆ ದಿಗ್ಬಂಧನದ ಸರಿ-ತಪ್ಪುಗಳೇನೇ ಇರಲಿ, ಒಂದು ಭೇಟಿಯ ಸ್ಪಷ್ಟ ಫಲಿತಾಂಶವಾಗಿ ಆ ಬೆಳವಣಿಗೆಯನ್ನು ಎತ್ತಿಕೊಳ್ಳಬಹುದಾಗಿದೆ. ವಿಶೇಷ ಏನೆಂದರೆ, ಇವತ್ತು ಮೋದಿಯವರ ವಿದೇಶ ಭೇಟಿಯು ಫಲಿತಾಂಶದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುವುದರ ಬದಲು ಅವರು ಧರಿಸಿದ ಉಡುಪು, ಆಲಿಂಗನ, ಉಡುಗೊರೆಗಳ ಕಾರಣಕ್ಕಾಗಿಯೇ ಚರ್ಚಿತವಾಗುತ್ತಿವೆ. ಅವರ ಜಪಾನ್ ಭೇಟಿಯ ವೇಳೆ ರಾಜ ಅಕಿಹಿಟೋ ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದುದನ್ನು ಭಾರತೀಯ ಮಾಧ್ಯಮಗಳು ವಿಶೇಷ ಕಾಳಜಿ ವಹಿಸಿ ಚರ್ಚಿಸಿದುವು. ಅಲ್ಲದೇ ಜಪಾನ್ ಪ್ರಧಾನಿ ಶಿನೊಝೊ ಅಬೆಯವರಿಗೂ ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಿದುದೂ ಚರ್ಚೆಗೊಳಗಾಯಿತು. ‘ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕು’ ಎಂದು 2014ರಲ್ಲಿ ಸುಶ್ಮಾ ಸ್ವರಾಜ್ ಆಗ್ರಹಿಸಿದುದೂ ಈ ಸಂದರ್ಭದಲ್ಲಿ ಪ್ರಚಾರ ಪಡೆಯಿತು. ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್‍ಗೂ ಪ್ರಧಾನಿ ಮೋದಿಯವರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು. ನಿಜವಾಗಿ, ಭಗವದ್ಗೀತೆ ಭಾರತದ ಸಂವಿಧಾನ ಅಲ್ಲ. ಹೀಗಿದ್ದೂ ಭಾರತದ ಪ್ರಧಾನಿಯೋರ್ವರು ಉಡುಗೊರೆಯಾಗಿ ಸಂವಿಧಾನವನ್ನೋ ಅಥವಾ ತಾಜ್‍ಮಹಲ್ ಮತ್ತಿತರ
ವಾಸ್ತುಶಿಲ್ಪಗಳ ಪ್ರತಿಕೃತಿಗಳನ್ನೋ ನೀಡುವುದರ ಬದಲು ಭಗವದ್ಗೀತೆಯನ್ನೇ ಉಡುಗೊರೆಯಾಗಿ ಆಯ್ದುಕೊಂಡದ್ದೇಕೆ? ಬಹುಶಃ, ಇದೊಂದು ಅಳೆದೂ ತೂಗಿ ಮಾಡಲಾದ ಆಯ್ಕೆ. ಸೆಕ್ಯುಲರ್ ಭಾರತದ ಪ್ರಧಾನಿಯಾಗಿದ್ದೂ ಮೋದಿಯವರು ಹೇಗೆ ಭಗವದ್ಗೀತೆಯನ್ನು ಪ್ರಚಾರಪಡಿಸುತ್ತಿದ್ದಾರೆ ಎಂಬುದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಸಾರುವ ತಂತ್ರ ಇದು. ಮೋದಿಯವರ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಇದು ತೀರಾ ಅಗತ್ಯ. 2016ರಲ್ಲಿ ನರೇಂದ್ರ ಮೋದಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲೂ ಇದನ್ನು ಗುರುತಿಸಬಹುದು. ಅಫಘಾನ್, ಪಾಕ್ ಮತ್ತು ಬಾಂಗ್ಲಾ ದೇಶದಿಂದ ಭಾರತಕ್ಕೆ ವಲಸೆ ಬರುವ ಹಿಂದೂ, ಕ್ರೈಸ್ತ, ಸಿಕ್ಖ್, ಫಾರ್ಸಿಗಳನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗದು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಪಟ್ಟಿಯಲ್ಲಿ ಮುಸ್ಲಿಮರ ಪ್ರಸ್ತಾಪವೇ ಇಲ್ಲ. ಅಂದರೆ, ಈ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಮುಸ್ಲಿಮ್ ವಲಸಿಗರನ್ನು ಕಾನೂನುಬಾಹಿರವಾಗಿಯೇ ಪರಿಗಣಿಸಲಾಗುತ್ತದೆ ಎಂದರ್ಥ. ನಿಜವಾಗಿ, ಭಾರತದ ಗಡಿಯಲ್ಲಿ ಅತ್ಯಂತ ಹೆಚ್ಚು ನಿರಾಶ್ರಿತರಾಗಿರುವವರೆಂದರೆ ಹಿಂದೂಗಳು ಮತ್ತು ಮುಸ್ಲಿಮರು. ಇಲ್ಲೂ ಮೋದಿಯವರ ಬೆಂಬಲಿಗ ವರ್ಗದ ‘ಮುಸ್ಲಿಮ್ ವಿರೋಧಿ’ ಭಾವನೆಯನ್ನು ತಣಿಸುವ ಶ್ರಮ ನಡೆದಿರುವುದು ಅತ್ಯಂತ ಸ್ಪಷ್ಟ. ತನ್ನ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಮಂದಿರ, ಭಗವದ್ಗೀತೆ, ದೇವಾಲಯ ಭೇಟಿ, ಮುಸ್ಲಿಮ್ ವಿರೋಧಿ ನೀತಿಗಳಿಂದ ಸಾಧ್ಯವಿದೆ ಎಂದು ಮೋದಿ ಮತ್ತು ಅವರ ಚಿಂತಕ ಛಾವಡಿ ತಿಳಿದುಕೊಂಡಿದೆ. ಒಂದು ರೀತಿಯಲ್ಲಿ, ಇಂಥ ನಿಲುವುಗಳೇ ಈ ಸರಕಾರದ ವರ್ಚಸ್ಸಿನ ಉಳಿವಿನಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಉಸ್ತಾದ್, ಪ್ರಿನ್ಸ್, ಜೈ ಮತ್ತು ಬಿಟ್ಟು ಹುಲಿಗಳಂತೆ ಈ ಸರಕಾರದ ಪಾಲಿಗೆ ಈ ವಿಷಯಗಳೇ ಸೆಲೆಬ್ರಿಟಿಗಳು. ಇವನ್ನು ಆಗಾಗ ಚರ್ಚೆಗೊಳಗಾಗುವಂತೆ ನೋಡಿಕೊಂಡು ಸರಕಾರದ ವರ್ಚಸ್ಸನ್ನು ತಾಜಾ ಆಗಿ ಉಳಿಸಿಕೊಳ್ಳುವ ಶ್ರಮ ನಡೆಯುತ್ತಿದೆ.

No comments:

Post a Comment