Friday, October 28, 2016

ದೇಶ ಕಾಯುವವ ಹುತಾತ್ಮನಾಗುವುದಾದರೆ ದೇಶ ಸ್ವಚ್ಛಗೊಳಿಸುವವ ಯಾಕಾಗಲಾರ?

         ಸೇನೆಯು ದೇಶದ ಇತರೆಲ್ಲವುಗಳಿಗಿಂತ ಮಿಗಿಲೇ? ಅದು ಪ್ರಶ್ನಾತೀತವೇ? ಸೇನೆಯ ಕಾರ್ಯ ನಿರ್ವಹಣೆಯ ಮೇಲೆ ಪ್ರಶ್ನೆಗಳನ್ನೆತ್ತುವುದು ದೇಶದ್ರೋಹವಾಗುವುದೇ? ಹುತಾತ್ಮತೆ ಎಂಬ ಗೌರವಕ್ಕೆ ಯಾರೆಲ್ಲ ಅರ್ಹರಾಗಬೇಕು? ಅದು ಸೇನಾ ಯೋಧರಿಗೆ ಮಾತ್ರ ಲಭ್ಯವಾಗುವ ಗೌರವವೇ? ಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು, ಸತ್ತ ಪ್ರಾಣಿಯನ್ನು ವಿಲೇವಾರಿ ಮಾಡುವವರೆಲ್ಲ ಈ ಗೌರವಕ್ಕೆ ಅನರ್ಹರೇ?
     ಸರ್ಜಿಕಲ್ ಸ್ಟ್ರೈಕ್‍ನ ಹವಾ ತಣ್ಣಗಾಗಿರುವ ಈ ಹೊತ್ತಿನಲ್ಲಿ ನಮ್ಮ ಪ್ರಜಾತಂತ್ರ ಮತ್ತು ಅದರ ಭಾಗವಾಗಿರುವ ಮಿಲಿಟರಿ ವ್ಯವಸ್ಥೆಯನ್ನು ವಿಮರ್ಶೆಗೊಳಪಡಿಸುವುದು ಅತ್ಯಂತ ಸೂಕ್ತ ಅನ್ನಿಸುತ್ತದೆ. ಉರಿ ದಾಳಿ ಮತ್ತು ಅದಕ್ಕೆ ಉತ್ತರವಾಗಿ ನಡೆಸ ಲಾದ ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭದಲ್ಲಿ ಇಂಥದ್ದೊಂದು ವಿಮರ್ಶೆಗೆ ಇದ್ದ ಸ್ಪೇಸ್ ತೀರಾ ಸಣ್ಣದಾಗಿತ್ತು. ಅಲ್ಲೊಂದು ಭಾವೋದ್ವೇಗವಿತ್ತು. ದೇಶದಾದ್ಯಂತ ಯುದ್ಧೋನ್ಮಾದದ ವಾತಾವರಣ ವನ್ನು ಹುಟ್ಟು ಹಾಕಲಾಗಿತ್ತು. ಇಂಡಿಯಾ ಟಿ.ವಿ.ಯ ನಿರೂಪಕ ಸ್ವತಃ ಯೋಧರ ಉಡುಪನ್ನು ಧರಿಸಿ ನಿರೂಪಣೆ ಮಾಡಿದ್ದರು. ನ್ಯೂಸ್ ಎಕ್ಸ್ ಚಾನೆಲ್ ಅಂತೂ, ‘ತಾನಿನ್ನು ಪಾಕಿಸ್ತಾನವನ್ನು ಪಾಕಿಸ್ತಾನ ಎಂಬ ಭಯೋತ್ಪಾದಕ ರಾಷ್ಟ್ರ’ ಎಂದು ಕರೆಯುವುದಾಗಿ ಘೋಷಿಸಿತು. ಪಾಕ್ ಕಲಾವಿದರು ದೇಶ ಬಿಟ್ಟು ಹೊರ ಹೋಗಬೇಕೆಂದು ಟೈಮ್ಸ್ ನೌ ಆಗ್ರಹಿಸಿತು. ಎಲ್ಲಿಯ ವರೆಗೆಂದರೆ, ಕೇಂದ್ರದ ಮಾಜಿ ಗೃಹಸಚಿವ ಪಿ. ಚಿದಂಬರಂ ಅವರ ಜೊತೆ ಬರ್ಖಾದತ್ ನಡೆಸಿದ ಸಂದರ್ಶನವನ್ನು ಪ್ರಸಾರ ಮಾಡದೇ ಇರಲು ಎನ್‍ಡಿಟಿವಿ ನಿರ್ಧರಿಸಿತು. ‘ಯೋಧರ ರಕ್ತದಿಂದ ಲಾಭ ಎತ್ತಲು ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸುತ್ತಿದ್ದಾರೆ..’ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೂ ಅದು ಕತ್ತರಿ ಪ್ರಯೋಗಿಸಿತು. ಒಂದು ರೀತಿಯಲ್ಲಿ, ಸರಕಾರ ಮತ್ತು ಮಾಧ್ಯಮ ಒಟ್ಟು ಸೇರಿ ದೇಶದಲ್ಲಿ ಸಮೂಹ ಸನ್ನಿಯೊಂದನ್ನು ನಿರ್ಮಿಸಿದ್ದುವು. ಪಾಕಿಸ್ತಾನಿಯರನ್ನು ತೆಗಳುವುದು ಮತ್ತು ಭಾರತೀಯ ಮಿಲಿಟರಿ ಯನ್ನು ಹೊಗಳುವುದು - ಇದರಾಚೆಗೆ ಮೂರನೇ ಧ್ವನಿಯೊಂದಕ್ಕೆ ಆಸ್ಪದವೇ ಇಲ್ಲವೆಂಬ ದಾಷ್ಟ್ರ್ಯವನ್ನು ಪ್ರದರ್ಶಿಸಿದುವು. ಚಿತ್ರನಟಿ ರಮ್ಯ, ಕರಣ್ ಜೋಹರ್, ಕೇಜ್ರಿವಾಲ್, ಅರುಣ್ ಶೌರಿ..ಗಳೆಲ್ಲ ದೇಶದ್ರೋಹಿಗಳಂತೆ ಚಿತ್ರಿತವಾದದ್ದು ಈ ಕಾರಣದಿಂದಲೇ. ಹಾಗಂತ, ಸೇನೆಯ ತ್ಯಾಗ ಮತ್ತು ಪರಿಶ್ರಮಗಳನ್ನು ಕೀಳಂದಾಜಿಸು ವುದು ಇಲ್ಲಿನ ಉದ್ದೇಶವಲ್ಲ. ಯೋಧರು ಗೌರವಾರ್ಹರು. ಅಪಾಯಕಾರಿ ಸಂದರ್ಭಗಳಿಗೆ ಸದಾ ಮುಖಾಮುಖಿಯಾಗಿದ್ದು ಕೊಂಡು ಬದುಕುವವರು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೇನೆಯ ಸ್ಥಾನ-ಮಾನ ಏನು? ಸೇನಾ ಕಾರ್ಯಾಚರಣೆಯನ್ನು ‘ಪ್ರಶ್ನಾತೀತ’ವೆಂಬ ಭಾಷೆಯಲ್ಲಿ ವ್ಯಾಖ್ಯಾನಿಸುವುದರಿಂದ ಆಗುವ ತೊಂದರೆಗಳೇನು? ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಪಾಕಿಸ್ತಾನ. ಇವತ್ತು ಅಲ್ಲಿನ ಸೇನೆ ಪ್ರಜಾತಂತ್ರಕ್ಕೆ ಪರ್ಯಾಯವಾಗಿ ಗುರುತಿಸಿಕೊಂಡಿದೆ. ಅಲ್ಲಿ ಮಿಲಿಟರಿ ಹೇಳಿಯೇ ಕೊನೆಯ ಮಾತು. ಪ್ರಜಾತಂತ್ರದ ದನಿ ಎಷ್ಟು ದುರ್ಬಲ ಎಂಬುದನ್ನು ಪಾಕಿಸ್ತಾನ ಅನೇಕ ಬಾರಿ ಜಗತ್ತಿಗೆ ಮನದಟ್ಟು ಮಾಡಿಕೊಟ್ಟಿದೆ. ಕಾರ್ಗಿಲ್ ಪ್ರಕರಣ ಅದಕ್ಕೆ ಇತ್ತೀಚಿನ ಉದಾಹರಣೆ. ಸೇನೆಯನ್ನು ಪ್ರಶ್ನಾತೀತವಾಗಿ ಮತ್ತು ಅದರ ಕಾರ್ಯಾಚರಣೆಯನ್ನು ವೈಭವೀಕೃತವಾಗಿ ಬಿಂಬಿಸುವುದರಿಂದ ಸಮಾಜದ ದೇಹಭಾಷೆಯಲ್ಲಿ ಇದಮಿತ್ಥಂ ಎಂಬ ನಿಲುವು ರೂಪು ಪಡೆಯುವುದಕ್ಕೆ ಅವಕಾಶ ವಿರುತ್ತದೆ. ಸಮಾಜವೊಂದು ಮಿಲಿಟರೀಕರಣಗೊಳ್ಳುವುದೆಂದರೆ ಹೀಗೆ. ನಿಧಾನಕ್ಕೆ ಜನರು ಮಿಲಿಟರಿ ಭಾಷೆಯಲ್ಲಿ ಮಾತಾಡುತ್ತಾರೆ. ಯೋಧರ ತ್ಯಾಗ-ಬಲಿದಾನಗಳು ಅಗತ್ಯಕ್ಕಿಂತ ಹೆಚ್ಚು ಚರ್ಚೆಗೊಳ ಗಾಗುತ್ತವೆ. ಸೇನೆಯಿಂದಲೇ ನಾವು ಎಂಬ ಹವಾ ಎಲ್ಲೆಡೆ ಧ್ವನಿಸತೊಡಗುತ್ತದೆ. ನಿಜವಾಗಿ, ಉರಿ ಮತ್ತು ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭದಲ್ಲಿ ದೇಶದ ಹೆಚ್ಚಿನ ಮಾಧ್ಯಮಗಳ ವರ್ತನೆ ಬಹುತೇಕ ಈ ಧಾಟಿಯಲ್ಲೇ ಇದ್ದುವು. ಹುತಾತ್ಮ ಯೋಧರ ಹೆತ್ತವರನ್ನು ಸ್ಟುಡಿಯೋದಲ್ಲಿ ಕೂರಿಸಿ ಅವು ಚರ್ಚಿಸಿದುವು. ಕಲಾವಿದರನ್ನು ಹೊಣೆಗೇಡಿಗಳಾಗಿ ತೋರಿಸಿದುವು. ಕುಕ್ಕರುಗಾಲಿನಲ್ಲೋ ತೆವಳಿ ಕೊಂಡೋ ಕರ್ತವ್ಯನಿರತರಾದ ಯೋಧರನ್ನು ತೋರಿಸುತ್ತಾ, ಭಿನ್ನ ಧ್ವನಿಗಳ ದೇಶನಿಷ್ಠೆಯನ್ನು ಪ್ರಶ್ನಿಸಿದುವು. ಅಷ್ಟಕ್ಕೂ, ದೇಶ ಸೇವೆ, ದೇಶ ರಕ್ಷಣೆ ಎಂಬ ಗೌರವಗಳೆಲ್ಲ ಕೇವಲ ಯೋಧರಿಗೆ ಮಾತ್ರ ಮೀಸಲಾದುದೇ? ಯೋಧರು ದೇಶರಕ್ಷಣೆಯಲ್ಲಿ ನಿರತರಾಗಿರುವಾಗ ದೇಶ ಸ್ವಚ್ಛತೆಯಲ್ಲಿ ಕೋಟ್ಯಂತರ ಕಾರ್ಮಿಕರು ನಿರತರಾಗಿರುವರಲ್ಲ, ಅವರಿಗೇಕೆ ಈ ಗೌರವಾದರಗಳನ್ನು ನಾವು ಅರ್ಪಿಸುತ್ತಿಲ್ಲ? ಕೇವಲ ದೆಹಲಿಯೊಂದರಲ್ಲೇ ಒಂದೂವರೆ ಲಕ್ಷ ಮ್ಯಾನ್‍ಹೋಲ್‍ಗಳಿವೆ. ಈ ಮ್ಯಾನ್‍ಹೋಲ್‍ಗಳಿಗೆ ಇಳಿದು ಮಲ-ಮೂತ್ರವನ್ನು ಮೈಪೂರ್ತಿ ಅಂಟಿಸಿಕೊಂಡು ಚರಂಡಿ ಸ್ವಚ್ಛ ಮಾಡುವವರು ಬಹುತೇಕ ದಲಿತ-ದಮನಿತ ವರ್ಗದವರು. ಗಡಿಯಲ್ಲಿ ಯೋಧರು ನಿದ್ದೆಗೆಟ್ಟು ಕಾಯುವುದರಿಂದ ನಾವು ಆರಾಮವಾಗಿ ನಿದ್ದೆ ಮಾಡುತ್ತೇವೆ... ಎಂದೆಲ್ಲ ಭಾವುಕಗೊಳಿಸುವವರು ಯಾಕೆ ದಲಿತರು ಮಲ ಎತ್ತುವುದರಿಂದಾಗಿ ನಾವು ಆರಾಮವಾಗಿ ಬದುಕುತ್ತಿದ್ದೇವೆ... ಎಂದು ಹೆಮ್ಮೆಪಟ್ಟುಕೊಳ್ಳುವುದಿಲ್ಲ? ಈ ದೇಶದಲ್ಲಿ ಪ್ರತಿದಿನ 2ರಿಂದ 3 ಮಂದಿ ಮ್ಯಾನ್‍ಹೋಲ್‍ನೊಳಗೆ ಉಸಿರುಗಟ್ಟಿ ಸಾಯುತ್ತಿದ್ದಾರೆ ಎಂದು ಅಧಿಕೃತ ವರದಿಗಳೇ ಹೇಳುತ್ತವೆ. ಮಲ ಎತ್ತುವವರಲ್ಲಿ ಪ್ರತಿ ವರ್ಷ 22,327 ಮಂದಿ ಸಾಯುತ್ತಾರೆ ಎಂದು ದಿ ಹಿಂದೂ ಪತ್ರಿಕೆ (2014 ಎಪ್ರಿಲ್) ವರದಿ ಮಾಡಿದೆ. ಯಾಕೆ ಈ ಸಾವನ್ನು ಹುತಾತ್ಮಗೊಳಿಸಲು ನಮ್ಮ ಮಾಧ್ಯಮಗಳಿಗೆ ಸಾಧ್ಯವಾಗುವುದಿಲ್ಲ? ದೇಶ ಕಾಯುವವ ಹುತಾತ್ಮನಾಗುವುದಾದರೆ ದೇಶ ಸ್ವಚ್ಛಗೊಳಿಸುವವ ಏನು? ಆತನೇಕೆ ಹುತಾತ್ಮನಲ್ಲ? ಅದರಲ್ಲೂ ಯೋಧರಿಗೆ ಹೋಲಿಸಿದರೆ ಈ ಬಡಪಾಯಿಗಳ ಬದುಕು ಅತ್ಯಂತ ಘೋರ. ಈ ಕೆಲಸದಲ್ಲಿ ಸುರಕ್ಷತತೆಗೆ ಅತ್ಯಂತ ಕನಿಷ್ಠ ಗಮನವನ್ನು ಕೊಡಲಾಗುತ್ತದೆ. ಕಾರ್ಮಿಕರು ವಿವಿಧ ರೋಗಗಳನ್ನು ತಗುಲಿಸಿಕೊಂಡು ಒದ್ದಾಡುತ್ತಾರೆ. ಸಾಮಾಜಿಕ ಮಾನ್ಯತೆಯಿಂದಲೂ ಅವರು ವಂಚಿತರಾಗುತ್ತಾರೆ. ದೇಶವನ್ನು ವಾಸಯೋಗ್ಯಗೊಳಿಸುವಲ್ಲಿ ತಮ್ಮ ಬದುಕನ್ನೇ ತೇಯುವ ಈ ವರ್ಗದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಮಾತಾಡದೇ ಇರುವುದಕ್ಕೆ ಕಾರಣವೇನು? ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ ಸಾವಿಗೀಡಾಗುವ ಕಾರ್ಮಿಕನ ಶವವನ್ನು ಮೆರವಣಿಗೆಯಲ್ಲಿ ಸಾಗಿಸಿದ ಒಂದೇ ಒಂದು ಉದಾಹರಣೆಯಾದರೂ ಈ ದೇಶ ದಲ್ಲಿದೆಯೇ? ಅಂಥ ಕಾರ್ಮಿಕನ ಹೆತ್ತವರನ್ನು ಟಿ.ವಿ. ಸ್ಟುಡಿಯೋದಲ್ಲಿ ಕೂರಿಸಿ ಚರ್ಚಿಸಲಾಗಿದೆಯೇ? ಈ ಕಾರ್ಮಿಕರ ವೇಷದಂತೆ ಯಾವುದಾದರೂ ಟಿ.ವಿ. ನಿರೂಪಕ ತನ್ನ ಉಡುಪನ್ನು ಬದಲಿಸಿ ಕೊಂಡದ್ದಿದೆಯೇ? ಅವರನ್ನು ಹುತಾತ್ಮರೆಂದು ಕರೆದದ್ದಿದೆಯೇ? ತೆವಳಿಕೊಂಡು ಸಾಗುವ ಯೋಧನಂತೆಯೇ ಮ್ಯಾನ್‍ಹೋಲ್‍ನಿಂದ ದುರ್ನಾತ ಬೀರುತ್ತಾ ಹೊರಬರುವ ಕಾರ್ಮಿಕನನ್ನು ತೋರಿಸಿ ‘ಇವರಿಗೆ ನಮ್ಮ ಸಲಾಂ’ ಎಂದು ಹೇಳಿದ್ದಿದೆಯೇ?
       1999ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಸುಮಾರು 527 ಮಂದಿ ಭಾರತೀಯ ಯೋಧರು ಸಾವಿಗೀಡಾದರು. ಇಷ್ಟು ಯೋಧರ ಸಾವಿಗೆ ಮಿಲಿಟರೀಕರಣಗೊಂಡ ಪಾಕಿಸ್ತಾನ ಕಾರಣ ಎಂಬುದು ಸ್ಪಷ್ಟ. ಸೇನೆಯು ಪ್ರಶ್ನಾತೀತ ಸ್ಥಾನಕ್ಕೆ ತಲುಪಿಬಿಟ್ಟಾಗ ಆಗಬಹುದಾದ ಅಪಾಯ ಇದು. ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಝ ಶರೀಫ್‍ರಿಗೆ ಈ ಕಾರ್ಯಾಚರಣೆಯ ಸುಳಿವೇ ಇರಲಿಲ್ಲ ಎಂದು ಹೇಳಲಾಗುತ್ತದೆ. ಸೇನೆಯ ಮುಖ್ಯಸ್ಥರಾಗಿದ್ದ ಮುಶರ್ರಫ್‍ರವರೇ ಇಡೀ ಕಾರ್ಯಾಚರಣೆಯ ಸ್ವರೂಪವನ್ನು ನಿರ್ಧರಿಸಿದ್ದರು. ನಿಜವಾಗಿ, ಪಾಕ್ ಸೇನೆಯ ಈ ಅನಗತ್ಯ ಯುದ್ಧವನ್ನು ಅಲ್ಲಿನ ಜನರು ಪ್ರಶ್ನಿಸಿರಲಿಲ್ಲ. ಯಾಕೆಂದರೆ, ಒಂದು ಹಂತದ ವರೆಗೆ ಪಾಕ್ ಸಮಾಜ ಮಿಲಿಟರೀಕರಣಗೊಂಡಿದೆ. ಅಲ್ಲಿ ಮಿಲಿಟರಿಯ ಬಗ್ಗೆ ಅನಗತ್ಯ ಉನ್ಮಾದ ಮತ್ತು ಭ್ರಮೆಗಳಿವೆ. ಒಂದು ವೇಳೆ, ಅಮೇರಿಕ ಮತ್ತು ಬ್ರಿಟನ್‍ಗಳಲ್ಲಿ ಸೇನೆಯ ಬಗ್ಗೆ ಇಂಥz್ದÉೂಂದು ಪ್ರಶ್ನಾತೀತ ಮನೋಭಾವ ಇರುತ್ತಿದ್ದರೆ ನಮಗೆ ಇರಾಕ್‍ನ ಅಬೂಗುರೈಬ್ ಜೈಲಿನಲ್ಲಾದ ಕ್ರೌರ್ಯ ಮತ್ತು ಲೈಂಗಿಕ ಹಿಂಸೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತೇ? ಗ್ವಾಂಟನಾಮೋದ ಶಿಕ್ಷೆ ಹೊರಜಗತ್ತಿಗೆ ತಿಳಿಯುತ್ತಿತ್ತೇ? ನಿಜವಾಗಿ, ಅಬೂಗುರೈಬ್‍ನಲ್ಲಿ ಅಥವಾ ಗ್ವಾಂಟನಾಮೋದಲ್ಲಿ ಹಿಂಸಿಸಿದವರು ಸರ್ವಾಧಿಕಾರಿ ರಾಷ್ಟ್ರದ ಅನಾಗರಿಕ ಯೋಧರಾಗಿರಲಿಲ್ಲ. ಮಾನವ ಹಕ್ಕುಗಳಿಗೆ ಅತೀ ಹೆಚ್ಚು ಗೌರವವನ್ನು ಕೊಡುವ ರಾಷ್ಟ್ರಗಳ ಯೋಧರಾಗಿದ್ದರು. ಆದರೂ ಇಂಥ ರಾಷ್ಟ್ರಗಳ ಯೋಧರಿಂದ ಅತೀ ಹೀನ ಮಾನವ ಹಕ್ಕು ದೌರ್ಜನ್ಯಗಳು ನಡೆದುವು ಮತ್ತು ಅವು ಪ್ರಶ್ನೆಗೂ ಒಳಪಟ್ಟುವು. ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ತಮ್ಮ ಯೋಧರನ್ನು ಪ್ರಶ್ನಾತೀತ ದೇಶರಕ್ಷಕರು ಎಂದು ಸಮರ್ಥಿಸುತ್ತಿದ್ದರೆ ಇವೆಲ್ಲ ಬೆಳಕಿಗೆ ಬರುತ್ತಿತ್ತೇ? ಅವರಿಗೆ ಶಿಕ್ಷೆಯಾಗುತ್ತಿತ್ತೇ? ಆದ್ದರಿಂದಲೇ, ಪ್ರಜಾತಂತ್ರ ರಾಷ್ಟ್ರದಲ್ಲಿ ಯಾರೂ ಪ್ರಶ್ನಾತೀತರಾಗಬಾರದು ಎಂದು ಒತ್ತಾಯಿಸುವುದು. ಕಾರ್ಗಿಲ್ ಸಮರದಲ್ಲಿ ಸಾವಿಗೀಡಾದ ಯೋಧರನ್ನು ಹುತಾತ್ಮರಾಗಿ ಇಲ್ಲಿ ಗೌರವಿಸಲಾಯಿತು. ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು. ಆದರೆ, ಇದಾಗಿ ಎರಡು ವರ್ಷಗಳ ಬಳಿಕ ನಡೆದ ಆಪರೇಶನ್ ಪರಾಕ್ರಮ್‍ನಲ್ಲಿ 798 ಮಂದಿ ಯೋಧರು ಸಾವಿ ಗೀಡಾದರು. ಈ ಸಾವು ಯುದ್ಧದಿಂದ ಸಂಭವಿಸಿದ್ದಲ್ಲ. ಪಾರ್ಲಿ ಮೆಂಟ್‍ನ ಮೇಲೆ ನಡೆದ ಆಕ್ರಮಣದ ಬಳಿಕ ವಾಜಪೇಯಿ ನೇತೃತ್ವದ ಸರಕಾರವು ಭಾರತ-ಪಾಕ್ ಗಡಿಯುದ್ದಕ್ಕೂ ಆಪರೇಶನ್ ಪರಾಕ್ರಮ್ ಎಂಬ ಹೆಸರಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿತು. ಅದನ್ನು ಅತ್ಯಂತ ಕಠಿಣ ಮತ್ತು ತಪ್ಪಾದ ಕಾರ್ಯಾಚರಣೆ ಎಂದು ಹೇಳಲಾಗುತ್ತದೆ. ವರ್ಷದ ವರೆಗೆ ನಡೆದ ಈ ಕಾರ್ಯಾ ಚರಣೆಯಲ್ಲಿ ಯೋಧರು ಅಪಘಾತ, ಮದ್ದುಗುಂಡುಗಳನ್ನು ಹುದು ಗಿಸಿಡುವಲ್ಲಿ ಆದ ವೈಫಲ್ಯ, ದುರ್ಬಲ ಶಸ್ತ್ರಾಸ್ತ್ರಗಳು ಇತ್ಯಾದಿ ಇತ್ಯಾದಿಗಳಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟರು. ಆದರೆ ಈ ಯೋಧರಿಗೆ ಹುತಾತ್ಮತೆಯ ಪಟ್ಟ ಸಿಗಲಿಲ್ಲ. ಮೆರವಣಿಗೆಯ ಭಾಗ್ಯವೂ ಸಿಗಲಿಲ್ಲ. ಯುದ್ಧವಲ್ಲದ ಈ ಕಾರ್ಯಾಚರಣೆಯಲ್ಲಿ ಕಾರ್ಗಿಲ್ ಯುದ್ಧಕ್ಕಿಂತ ಹೆಚ್ಚು ಯೋಧರು ಸಾವಿಗೀಡಾದರೂ ಕಾರ್ಗಿಲ್ ಯಾಕೆ ವೈಭವೀಕರಣಗೊಂಡಿತು? ಆಪರೇಶನ್ ಪರಾ ಕ್ರಮ್‍ನ ಯೋಧರು ಯಾಕೆ ಅವಗಣನೆಗೆ ಗುರಿಯಾದರು? ವ್ಯವಸ್ಥೆಯ ತಪ್ಪುಗಳು ಬಹಿರಂಗಕ್ಕೆ ಬರಬಾರದೆಂಬ ನೆಲೆಯಲ್ಲಿ  ಆಪರೇಶನ್ ಪರಾಕ್ರಮ್‍ನ ಸಾವುಗಳನ್ನು ಮುಚ್ಚಿಡಲಾಯಿತೇ? ಅಂದರೆ, ಯೋಧರನ್ನು ಹುತಾತ್ಮಗೊಳಿಸುವುದೂ ಗೊಳಿಸದಿರುವುದೂ ಎರಡೂ ವ್ಯವಸ್ಥೆಯ ಅಣತಿಯಂತೆ ನಡೆಯುತ್ತಿದೆ ಎಂದೇ ಇದರರ್ಥವಲ್ಲವೇ? ಮಾಧ್ಯಮಗಳೇಕೆ ಈ ಬಗ್ಗೆ ಧ್ವನಿ ಎತ್ತಲಿಲ್ಲ? ಬಹುಶಃ, ಸೇನೆಯು ಪ್ರಶ್ನಾತೀತ ಎಂಬ ಮನೋಭಾವ ಹೀಗೆ ಮಾಡಿರಬಹುದೇ? ಈ ನಿಲುವನ್ನೇ ವ್ಯವಸ್ಥೆ ದುರುಪಯೋಗಪಡಿಸಿಕೊಂಡಿತೇ?
       ಅಂದಹಾಗೆ, ದೇಶ ಕಾಯುವುದೊಂದೇ ದೇಶಸೇವೆಯ ಕೆಲಸವಲ್ಲ ಅಥವಾ ಚರಂಡಿ ಸ್ವಚ್ಛ ಮಾಡುವುದೇ ಸರ್ವೋಚ್ಚವಲ್ಲ. ಯಾವ ಕೆಲಸವನ್ನೂ ಶ್ರೇಷ್ಠ-ಕನಿಷ್ಠ ಎಂದು ವಿಭಜಿಸಬೇಕಾಗಿಲ್ಲ. ಎಲ್ಲವೂ ಆಯಾ ಕ್ಷೇತ್ರದಲ್ಲಿ ಶ್ರೇಷ್ಠವೇ. ಎಲ್ಲ ಕರ್ತವ್ಯನಿರತ ಸಾವುಗಳೂ ಆಯಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಾಮುಖ್ಯವೇ. ಯೋಧರು ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕರ್ತವ್ಯನಿರತ ರಾಗುತ್ತಾರೆ ಎಂಬ ಕಾರಣಕ್ಕಾಗಿ ಅವರು ಪ್ರಶ್ನಾತೀತರಾಗಬಾರದು. ಬರಿದೇ ವೈಭವೀಕರಣಕ್ಕೂ ಒಳಗಾಗಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಶ್ನಾರ್ಹರು ಮತ್ತು ಎಲ್ಲರೂ ಸಮಾನರು. ಇಲ್ಲದಿದ್ದರೆ ಭಾರತವೂ ಪಾಕಿಸ್ತಾನವಾದೀತು.

No comments:

Post a Comment