Wednesday, July 8, 2015

ಇವೆಲ್ಲ ಆಕಸ್ಮಿಕವೋ ಪೂರ್ವಯೋಜಿತವೋ?

ಚೇತನ್ ಭಗತ್
ಅಮರ್ತ್ಯ ಸೇನ್
ಸಲ್ಮಾನ್ ರುಶ್ದಿ
ತಸ್ಲೀಮಾ ನಸ್ರೀನ್
    ಮುಂತಾದವರಂತೆ, ಪರಾಂಜಯ್ ಗುಹಾ ತಾಕುರ್ತಾ, ಸುಬಿರ್ ಘೋಷ್, ಜ್ಯೋತಿರ್ಮಯಿ ಚೌಧರಿ, ಮ್ಯಾಟ್ ಕೆನ್ನಾರ್ಡ್, ಆ್ಯಂಡ್ರೆ ವಾಲ್ಚೆಕ್.. ಇವರೆಲ್ಲ ಸುದ್ದಿಗೀಡಾದವರಲ್ಲ. ಹಾಗಂತ, ಇವರೂ ಬರಹಗಾರರೇ. ಆದರೆ ಇವರು ಬರಹಕ್ಕಾಗಿ ಆಯ್ದುಕೊಳ್ಳುವ ವಿಷಯಗಳು ಇವರನ್ನು ಖ್ಯಾತನಾಮರಿಂದ ಹೊರಗಿರಿಸಿವೆ. ಇವರ ಕುತೂಹಲಗಳನ್ನು ಜಾಣತನದಿಂದ ನಿರ್ಲಕ್ಷಿಸಲಾಗಿದೆ. ಸುದ್ದಿಗೆ ಮತ್ತು ಚರ್ಚೆಗೆ ಒಳಗಾಗಲೇಬೇಕಿದ್ದ ಇವರ ಬರಹಗಳನ್ನು ಸುದ್ದಿಗೀಡಾಗದಂತೆ ನೋಡಿಕೊಳ್ಳ     ಲಾಗಿದೆ. ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. ಮಾನಸಿಕವಾಗಿ ಹಿಂಸಿಸಲಾಗಿದೆ, ಅಗೌರವಿಸಲಾಗಿದೆ. ಅಷ್ಟಕ್ಕೂ, ರುಶ್ದಿಯಂತೆಯೋ ತಸ್ಲೀಮಾರಂತೆಯೋ ಇವರು ಯಾರ ಧಾರ್ಮಿಕ ಭಾವನೆಯನ್ನೂ ಘಾಸಿಗೊಳಿಸಿಲ್ಲ. ಜನರ ಆಚಾರ-ವಿಚಾರಗಳನ್ನು ಪ್ರಶ್ನಿಸಿಲ್ಲ. ಅವರು, ‘ಜಗತ್ತಿನ ಹೆಚ್ಚಿನ ಸಂಪತ್ತು ಕೇವಲ 85 ಮಂದಿ ಶ್ರೀಮಂತರಲ್ಲೇ ಯಾಕೆ ಸುತ್ತುತ್ತಿವೆ’ ಎಂದು ಅನುಮಾನಿಸಿದರು. ಆ ಕುರಿತಂತೆ ಅಧ್ಯಯನ ನಡೆಸಿದರು. ‘ಜಗತ್ತಿನ ಹೆಚ್ಚಿನೆಲ್ಲ ಅತಿಕ್ರಮಣಗಳು ಮತ್ತು ದಾಳಿಗಳು ನಿರ್ದಿಷ್ಟ ಸಂದರ್ಭವೊಂದರಲ್ಲೇ ಯಾಕೆ ಘಟಿಸುತ್ತಿವೆ..’ ಎಂದು ಕುತೂಹಲಗೊಂಡು ಹುಡುಕಾಡಿದರು. ಈ ಹುಡುಕಾಟವೇ ಇವರನ್ನು ಕಪ್ಪು ಪಟ್ಟಿಯಲ್ಲಿರಿಸುವುದಕ್ಕೆ ಕಾರಣವಾದುವು.
    ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಫೈನಾನ್ಶಿಯಲ್ ಟೈಮ್ಸ್.. ಮುಂತಾದ ಪ್ರಸಿದ್ಧ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿದ್ದ ಖ್ಯಾತ ಪತ್ರಕರ್ತ ಮ್ಯಾಟ್ ಕೆನ್ನಾರ್ಡ್‍ರು ಒಮ್ಮೆ ಫೈನಾನ್ಶಿಯಲ್ ಟೈಮ್ಸ್ ಗೆ ಈಜಿಪ್ಟ್ ನ ಸರ್ವಾಧಿಕಾರಿ ಮುಬಾರಕ್‍ರ ಬಗ್ಗೆ ಒಂದು ಲೇಖನ ಬರೆದರು. ಇಸ್ರೇಲ್‍ನ ನಂತರ ಅಮೇರಿಕದಿಂದ ಅತ್ಯಂತ ಹೆಚ್ಚು ನೆರವು ಪಡೆಯುತ್ತಿರುವ ರಾಷ್ಟ್ರ ಈಜಿಪ್ಟ್. ಈ ಹಿನ್ನೆಲೆಯಿಂದಲೇ ಅವರು ‘ಅಮೇರಿಕ ಬೆಂಬಲಿತ’ (US backed ) ಎಂಬ ಪದವನ್ನು ಲೇಖನದ ಮಧ್ಯೆ ಬಳಸಿದರು. ಆದರೆ ಸಂಪಾದಕರು ಆ ಪದವನ್ನು ಕಿತ್ತು ಹಾಕಿದರು. ಇನ್ನೊಮ್ಮೆ, ಲೆಬನಾನ್‍ನಲ್ಲಿ ಅಸ್ತಿತ್ವದಲ್ಲಿರುವ ಹಿಝ್ಬುಲ್ಲಾದ ಬಗ್ಗೆ ಅದೇ ಫೈನಾನ್ಶಿಯಲ್ ಟೈಮ್ಸ್ ಗೆ ಲೇಖನವೊಂದನ್ನು ಬರೆದುಕೊಟ್ಟರು. ‘ಹಿಝ್ಬುಲ್ಲಾಗೆ ಇರಾನ್ ನೆರವಾಗುತ್ತಿದೆ’ (Iranian backed ) ಎಂದೂ ಬರೆದರು. ಆದರೆ ಆ ಪದವನ್ನು ಸಂಪಾದಕರು ಹಾಗೆಯೇ ಉಳಿಸಿಕೊಂಡರು. ಮಾಧ್ಯಮಗಳು ಮತ್ತು ಅವುಗಳ ಭಾಷೆಯನ್ನು ಮೂರನೇ ಶಕ್ತಿಯೊಂದು ಸದಾ ನಿಯಂತ್ರಿಸುತ್ತಿರುತ್ತದೆ ಎಂಬ ತನ್ನ ಅಧ್ಯಯನಾತ್ಮಕ ಬರಹದಲ್ಲಿ ಒಂದು ಉದಾಹರಣೆಯಾಗಿ ಕೆನ್ನಾರ್ಡ್‍ರು ಈ ಘಟನೆಯನ್ನು ಉಲ್ಲೇಖಿಸಿದರು. ಜಗತ್ತಿನಲ್ಲಿ ದೊಡ್ಡದೊಂದು ಜನಸಂಖ್ಯೆ ಹಸಿವಿನಿಂದ ಸಾಯುತ್ತಿರುವಾಗ ಕೆಲವೇ ಕೆಲವು ಶ್ರೀಮಂತರ ಗುಂಪಿನಲ್ಲಿ ಜಗತ್ತಿನ ಸಂಪತ್ತೆಲ್ಲ  ಸೇರಿಕೊಂಡಿರುವುದು ಆಕಸ್ಮಿಕವಲ್ಲ ಎಂದೇ ಅವರು ತನ್ನ ಹೊಸ ಪುಸ್ತಕ ‘The rocket: A Rouge Reporters V/s The Masters of the
ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಕರ್ಕರೆ
 Universe’ದಲ್ಲಿ ವಾದಿಸಿದರು. ಮಾಧ್ಯಮಗಳು ಈ ಶ್ರೀಮಂತರ ದಂಧೆಯನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಕಳಕೊಂಡಿವೆ ಎಂದು ಹಲವಾರು ಉದಾಹರಣೆಗಳ ಮೂಲಕ ಸಾದರಪಡಿಸಿದರು. ಇದಕ್ಕಿಂತ ಮೊದಲು, 2014 ಎಪ್ರಿಲ್ 15ರಂದು ‘ಗ್ಯಾಸ್ ವಾರ್ಸ್: ಕ್ರೋನಿ ಕ್ಯಾಪಿಟಾಲಿಸಂ ಆ್ಯಂಡ್ ದಿ ಅಂಬಾನೀಸ್' ಎಂಬ ಕೃತಿಯೊಂದು ಬಿಡುಗಡೆಯಾಯಿತು. ಪರಾಂಜಯ್ ಗುಹಾ, ಸುಬಿರ್ ಮತ್ತು ಜ್ಯೋತಿರ್ಮಯಿ ಎಂಬ ಮೂವರು ಸಂಶೋಧನಾ ನಿರತ ಬರಹಗಾರರು ಒಟ್ಟು ಸೇರಿ ಈ ಕೃತಿಯನ್ನು ರಚಿಸಿದ್ದರು. ವಿಶೇಷ ಏನೆಂದರೆ, ಅವರು ಈ ಕೃತಿಯ ಪ್ರಕಟಣೆಗಾಗಿ ಎರಡ್ಮೂರು ಪ್ರಕಾಶನ ಸಂಸ್ಥೆಗಳನ್ನು ಸಂಪರ್ಕಿಸಿದ್ದರು. ಅವು ಒಪ್ಪಿಕೊಳ್ಳದೇ ಹೋದಾಗ ಸ್ವಯಂ ಪ್ರಕಟಣೆಗೆ ಮುಂದಾದರು. ಬಿಡುಗಡೆಯಾದ ಎರಡೇ ದಿನಗಳೊಳಗೆ ಅಂಬಾನಿಗಳ ವಕೀಲರಿಂದ ನೋಟೀಸ್ ಬಂತು. ಎಪ್ರಿಲ್ 23ರಂದು ಮತ್ತೊಂದು ನೋಟೀಸು ಬಂತು. 100 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಬೆದರಿಸಲಾದ ನೋಟೀಸ್. ಕೇಂದ್ರ ಸರಕಾರದ ನೀತಿಗಳು ಹೇಗೆ ಅಂಬಾನಿ ಪರವಾಗಿವೆ ಎಂಬುದನ್ನು ‘ಗ್ಯಾಸ್ ವಾರ್..’ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿತ್ತು. ಕೃಷ್ಣ ಮತ್ತು ಗೋದಾವರಿ ನದಿ ತಟದಲ್ಲಿ ತೈಲ ಎತ್ತುವಿಕೆಗೆ ಮತ್ತು ತೈಲ ಬೆಲೆಗೆ ಸಂಬಂಧಿಸಿ ಅನಿಲ್ ಮತ್ತು ಮುಖೇಶ್ ಅಂಬಾನಿ ನಡುವೆ ಇರುವ ತಗಾದೆಗಳು ಕೃತಿಯಲ್ಲಿ ಉಲ್ಲೇಖಿತವಾಗಿದ್ದುವು. ಸರಕಾರವು ರಿಲಯನ್ಸ್ ಪರ ಇರುವುದನ್ನು ಮತ್ತು ಆ ಕಾರಣದಿಂದಲೇ ಈ ಹಿಂದೆ ಪೆಟ್ರೋಲಿಯಂ ಸಚಿವರನ್ನು ಸರಕಾರ ಬದಲಿಸಿರುವುದನ್ನೂ ಕೃತಿಯಲ್ಲಿ ಪುರಾವೆಯಾಗಿ ಮಂಡಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ರಿಲಯನ್ಸ್ ದೇಣಿಗೆ ನೀಡುತ್ತಿದೆ ಮತ್ತು ಪ್ರತಿಯಾಗಿ ವಿವಿಧ ತೈಲ ಮತ್ತಿತರ ಗುತ್ತಿಗೆಗಳನ್ನು ಪಡಕೊಂಡು ಅದು ಶ್ರೀಮಂತವಾಗುತ್ತಾ ಹೋಗುತ್ತಿದೆ ಎಂದೂ ಹೇಳಲಾಗಿತ್ತು.
    ಅಷ್ಟಕ್ಕೂ, ಮ್ಯಾಗಿ ನೂಡಲ್ಸನ್ನು ಸರಕಾರಗಳು ನಿಷೇಧಿಸುವುದಕ್ಕಿಂತ ಮೊದಲು ದೇಶದಲ್ಲಿ ಅದರ ವ್ಯಾಪ್ತಿ, ಮಾರಾಟ, ಬಜೆಟ್ ಇವೆಲ್ಲ ಎಷ್ಟು ಮಂದಿಗೆ ಗೊತ್ತಿತ್ತು? ‘ಮ್ಯಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ, ನಾವು ತಿನ್ನುತ್ತೇವೆ..’ ಎಂಬುದಕ್ಕಿಂತ ಹೊರತಾಗಿ ಅದರ ತಯಾರಿಯ ಬಗ್ಗೆ ನಾವೆಷ್ಟು ತಲೆ ಕೆಡಿಸಿಕೊಂಡಿದ್ದೆವು? ಮ್ಯಾಗಿಯನ್ನು ನಮಗೆ ಇಷ್ಟದ ಆಹಾರವಾಗಿ ಪರಿಚಯಿಸಿದ್ದು ಜಾಹೀರಾತುಗಳೇ. ಕೇವಲ ಕಳೆದ ಒಂದೇ ವರ್ಷದಲ್ಲಿ ಭಾರತದಲ್ಲಿ ಮ್ಯಾಗಿಯ ಪ್ರಚಾರಕ್ಕಾಗಿ 445 ಕೋಟಿ ರೂಪಾಯಿಯನ್ನು ಬಳಸಲಾಗಿದೆ. ಹಾಗಂತ, ಇದರ ತಪಾಸಣೆಗೆ ಕಂಪೆನಿ ವ್ಯಯಿಸಿದ್ದು ಬರೇ 19 ಕೋಟಿ ರೂಪಾಯಿ. ಶ್ರೀಮಂತ ಕಂಪೆನಿಗಳು ಮತ್ತು ವ್ಯಕ್ತಿಗಳು ತಮ್ಮ ಖಜಾನೆಯನ್ನು ತುಂಬಿಸುವುದಕ್ಕಾಗಿ ಮರುಳು ಮಾಡುವ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ. ರಾಷ್ಟ್ರಗಳು ಕೂಡ ಇದರಿಂದ ಹೊರತಾಗಿಲ್ಲ. ಅವು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ನಿರ್ದಿಷ್ಟ ಸಂದರ್ಭಗಳಿಗಾಗಿ ಕಾಯುತ್ತಿರುತ್ತವೆ. 1994ರ  ವಿಶ್ವಕಪ್ ಫುಟ್ಬಾಲ್ ಫೈನಲ್‍ನಲ್ಲಿ ಇಟಲಿ ಆಡುತ್ತಿರುವ ದಿನದಂದೇ ಇಟಲಿಯ ಅಧ್ಯಕ್ಷ ಸಿಲ್ವಿಯೋ ಬೆರ್ಲಸ್ಕೋನಿಯವರು ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದರು. ಭ್ರಷ್ಟ ರಾಜಕಾರಣಿಗಳು ಜೈಲು ಪಾಲಾಗುವುದನ್ನು ತಡೆಯುವ ಉದ್ದೇಶದ ಆದೇಶವಾಗಿತ್ತದು. 2008ರಲ್ಲಿ ರಷ್ಯಾವು ಜಾರ್ಜಿಯಾದ ಮೇಲೆ ಆಕ್ರಮಣ ನಡೆಸುವಾಗ ಬೀಜಿಂಗ್‍ನಲ್ಲಿ ಒಲಿಂಪಿಕ್ಸ್ ನಡೆಯುತ್ತಿತ್ತು. ನಿಜವಾಗಿ, ಮಾಧ್ಯಮಗಳ ಗಮನವಷ್ಟೇ ಅಲ್ಲ, ಜಗತ್ತಿನ ಗಮನವೂ ಇದ್ದದ್ದು ಬೀಜಿಂಗ್‍ನಲ್ಲೇ. ಅಷ್ಟಕ್ಕೂ, ಇಂಥ ಘಟನೆಗಳು ಆಕಸ್ಮಿಕ ಅಲ್ಲ ಎಂಬುದಕ್ಕೆ - Read ದಿ study: Attack when the World is not watching? International media and the Israel-Palestinian conflict' (ಜಗತ್ತು ಗಮನಿಸದಿರುವಾಗ ನಡೆಸುವ ಆಕ್ರಮಣ, ಇಸ್ರೇಲ್-ಫೆಲೆಸ್ತೀನ್ ವಿವಾದ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ) ಎಂಬ ರಾಬಿನ್ ಡ್ಯುರಾಂಟ್ ಮತ್ತು ಎಕತರಿನ್ ಝರಾವ್‍ಸ್ಕಾಯ ಎಂಬವರ ಸಂಶೋಧನಾತ್ಮಕ ಬರಹ ಧಾರಾಳ ಪುರಾವೆಗಳನ್ನು ಒದಗಿಸುತ್ತದೆ. ಪ್ಯಾರಿಸ್‍ನ ಪೊ ಯುನಿವರ್ಸಿಟಿ ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಪ್ರೊಫೆಸರ್‍ಗಳಾಗಿರುವ ಇವರು, ‘ಮಾಧ್ಯಮಗಳು ಇತರ ಸುದ್ದಿಗಳಲ್ಲಿ ಬ್ಯುಸಿಯಾಗಿರುವ ಸಂದರ್ಭವನ್ನು ವಿವಿಧ ರಾಷ್ಟ್ರಗಳು ಹೇಗೆ ಆಕ್ರಮಣಕ್ಕೆ ಬಳಸಿಕೊಳ್ಳುತ್ತವೆ.. ’ ಎಂಬುದನ್ನು ವಿವರವಾಗಿ ಕೃತಿಯಲ್ಲಿ ತೆರೆದಿಟ್ಟರು. 2000ದಿಂದ 2011ರ ವರೆಗಿನ 11 ವರ್ಷಗಳ ಅವಧಿಯ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಈ ಲೇಖಕರು ತಮ್ಮ ಅಧ್ಯಯನಕ್ಕೆ ಒಳಪಡಿಸಿದರು. ಇಸ್ರೇಲ್-ಫೆಲೆಸ್ತೀನ್ ನಡುವಿನ ಸಂಘರ್ಷ ಮತ್ತು ಆ ಸಂದರ್ಭದಲ್ಲಿ ಅಮೇರಿಕದ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳನ್ನು ಪರಸ್ಪರ ಹೋಲಿಸಿ ನೋಡಿಕೊಂಡರು. 2001 ಸೆ. 11ರಂದು ಜಗತ್ತಿನ ಗಮನವೆಲ್ಲ ಅಮೇರಿಕದತ್ತ ನೆಟ್ಟಿತ್ತು. ಎರಡು ನಾಗರಿಕ ವಿಮಾನಗಳು ಅಲ್ಲಿನ ಅವಳಿ ಗೋಪುರವನ್ನು ಹೊಡೆದುರುಳಿಸಿದ ಭಯಾನಕ ಘಟನೆಗೆ ಜಗತ್ತು ತಲ್ಲಣಗೊಂಡಿತ್ತು. ಮಾಧ್ಯಮಗಳು ಮಾತ್ರವಲ್ಲ, ಜಗತ್ತಿನ ಎಲ್ಲರೂ ಅಮೇರಿಕದತ್ತ ಗಮನ ಕೇಂದ್ರೀಕರಿಸಿದ್ದರು. ಇದೇ ಸಂದರ್ಭವನ್ನು ನೋಡಿಕೊಂಡು ಇಸ್ರೇಲ್‍ನ ಪ್ರಧಾನಿ ಏರಿಯಲ್ ಶೆರೋನ್‍ರು ಫೆಲೆಸ್ತೀನ್‍ನ ಗಾಝಾದ ಮೇಲೆ ಹೆಲಿಕಾಪ್ಟರ್ ದಾಳಿ ನಡೆಸಿದರು. ಪಶ್ಚಿಮ ದಂಡೆಯ ಮೇಲೆ ಸೇನೆಯ ಮೂಲಕ ಆಕ್ರಮಣ ನಡೆಸಿದರು. ಇದೊಂದೇ ಅಲ್ಲ, Exposing the lies of the Empire (ಸಾಮ್ರಾಜ್ಯದ ಸುಳ್ಳುಗಳ ಅನಾವರಣ) ಎಂಬ ಆ್ಯಂಡ್ರೆ ವಾಲ್ಚೆಕ್‍ರ ಕೃತಿಯಲ್ಲೂ ಇಂಥ ಮೋಸಗಳ ವಿವರಗಳಿವೆ. ಇರಾಕ್‍ನ ಮೇಲೆ ಅಮೇರಿಕ ನಡೆಸಿದ ಆಕ್ರಮಣದ ಸುತ್ತ ಹೆಣೆಯಲಾದ ಈ ಕೃತಿಯಲ್ಲಿ ಅಮೇರಿಕನ್ ಸುಳ್ಳುಗಳ ದೊಡ್ಡದೊಂದು ಮೂಟೆಯನ್ನೇ ಬಿಚ್ಚಿಡಲಾಗಿದೆ. ಕಾದಂಬರಿಕಾರ, ಸಿನಿಮಾ ನಿರ್ದೇಶಕ ಮತ್ತು ಪತ್ರಕರ್ತರೂ ಆಗಿರುವ ಆ್ಯಂಡ್ರೆ ವಾಲ್ಚೆಕ್‍ರು ಇದೀಗ ಈ ಕೃತಿಯ ದ್ವಿತೀಯ ಭಾಗವನ್ನು ತರುವ ಉಮೇದಿನಲ್ಲಿದ್ದಾರೆ. ಅವರ ವಿಶೇಷತೆ ಏನೆಂದರೆ, ಅವರು ಸುದ್ದಿಗಳ ಮೂಲವನ್ನು ಹುಡುಕಿಕೊಂಡು ಹೋಗುತ್ತಾರೆ. ‘ಚೀನಾದಲ್ಲಿ ಸಮಾಜವಾದ ಸತ್ತಿದೆ..’ ಎಂಬ ಪಾಶ್ಚಾತ್ಯ ಮಾಧ್ಯಮಗಳ ಅಭಿಪ್ರಾಯವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಅವರು ಬೀಜಿಂಗ್‍ನಲ್ಲಿ ನೆಲೆಸಿದರು. ಜಿಂಬಾಬ್ವೆಯ ವಿರುದ್ಧ ಇಕನಾಮಿಕ್ಸ್ ಟೈಮ್ಸ್, ಬಿಬಿಸಿಯಂಥ ಮಾಧ್ಯಮಗಳು ಅಕ್ಷರ ದಾಳಿಯನ್ನು ಪ್ರಾರಂಭಿಸಿದಾಗ ಅವರು ಜಿಂಬಾಬ್ವೆಗೆ ತೆರಳಿದರು. ‘ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಒಂದೇ ಒಂದು ಆಸ್ಪತ್ರೆ ಇಲ್ಲ..’ ಎಂಬಲ್ಲಿವರೆಗೆ ಈ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದುವು. ಒಂದು ಕಾಲದಲ್ಲಿ ಬಿಳಿಯ ರಾಷ್ಟ್ರಗಳ ಅತಿಕ್ರಮಣಕ್ಕೀಡಾಗಿ ಬಸವಳಿದಿದ್ದ ಮತ್ತು ರಾಬರ್ಟ್ ಮುಗಾಬೆಯವರ ನೇತೃತ್ವದಲ್ಲಿ ಕರಿಯರು ಒಟ್ಟು ಸೇರಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಇತಿಹಾಸ ಜಿಂಬಾಬ್ವೆಗಿದೆ. ಬಿಬಿಸಿ ಮತ್ತು ಇಕನಾಮಿಕ್ಸ್ ಗಳು ಹೇಳಿದ್ದು ಪರಮ ಸುಳ್ಳು ಎಂಬುದನ್ನು ವಾಲ್ಚೆಕ್ ಸಾಬೀತುಪಡಿಸಿದರು. ನಿಜವಾಗಿ, ಇಂಥ ಬರಹಗಳಿಗೆ ಮಾಧ್ಯಮಗಳಲ್ಲಿ ಜಾಗ ಸಿಗುವುದು ಕಡಿಮೆ. ಜುಜುಬಿ 85 ಮಂದಿಯ ಕೈಯಲ್ಲಿ ಇಷ್ಟು ದೊಡ್ಡ ಜಗತ್ತಿನ ಹೆಚ್ಚಿನ ಸಂಪತ್ತುಗಳು ಯಾಕೆ ಕೇಂದ್ರೀಕೃತವಾಗಿವೆ ಎಂಬ ಪ್ರಶ್ನೆಯನ್ನು ಕೇಳುವ ಸಾಮರ್ಥ್ಯ ಮುಖ್ಯವಾಹಿನಿಯ ಮಾಧ್ಯಮಗಳಿರುವುದಿಲ್ಲ. ಯಾಕೆಂದರೆ, ಈ ಮಾಧ್ಯಮವನ್ನು ನಿಯಂತ್ರಿಸುತ್ತಿರುವುದೇ ಈ ಶ್ರೀಮಂತರು. ಭಾರತದ ಪ್ರಮುಖ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಯಾರ ನಿಯಂತ್ರಣದಲ್ಲಿವೆ ಎಂಬ ಅಧ್ಯಯನಕ್ಕೆ ಇಳಿದಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಸರಕಾರಗಳಿಗೂ ಅವರನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯ ಬಹುತೇಕ ಇರುವುದಿಲ್ಲ. ಅವರಿಲ್ಲದಿದ್ದರೆ ಪಕ್ಷ ನಡೆಯದಂಥ ಸ್ಥಿತಿ ಇರುತ್ತದೆ. ಅವರಿಗಾಗಿ ನೀತಿ-ನಿಯಮಗಳನ್ನು ಒಂದೋ ಸಡಿಲಿಸಬೇಕಾಗುತ್ತದೆ ಅಥವಾ ಪಕ್ಷಪಾತ ತೋರಬೇಕಾಗುತ್ತದೆ. ಹೀಗೆ ಶ್ರೀಮಂತರೇ ಶ್ರೀಮಂತರಾಗುತ್ತಾರೆ. ಅಷ್ಟಕ್ಕೂ, 
   ರಕ್ಷಣಾ ಹಗರಣದಿಂದಾಗಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರವು ತೀವ್ರ ಮುಜುಗರ ಅನುಭವಿಸುತ್ತಿದ್ದ ಸಂದರ್ಭದಲ್ಲೇ ಪಾರ್ಲಿಮೆಂಟ್ ನ ಮೇಲೆ ದಾಳಿಯಾಗುವುದು ಮತ್ತು ಕರ್ಕರೆ, ಸಾಲಸ್ಕರ್‍ರಂಥ ಪ್ರಮುಖ ಮೂವರು ಪೊಲೀಸಧಿಕಾರಿಗಳು ಆಶ್ಚರ್ಯಕರ ರೀತಿಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಸಾವಿಗೀಡಾಗುವುದನ್ನು ಹೇಗೆ ಅನುಮಾನಿಸದಿರಲು ಸಾಧ್ಯ?




No comments:

Post a Comment