Tuesday, May 21, 2013

ಕಸಾಯಿಖಾನೆಗಳನ್ನು ಮುಚ್ಚುವ ಅವಕಾಶವಿದ್ದೂ ಯಾಕೆ ಮೌನ ವಹಿಸಿದಿರಿ, ಹೇಳಿ?

   ಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ ನ  ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
A total ban (on Cattle Slaughter) was not permisseble if, Under economic conditions, keeping useless bull or bullock be a burden on the society and therefore not in the public interest -  ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)
   ನಿಜವಾಗಿ, ಕರ್ನಾಟಕದಲ್ಲಿ ಈ ಮೊದಲೇ ಜಾರಿಯಲ್ಲಿದ್ದ 'ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964'ರ ಬದಲು ರಾಜ್ಯ ಬಿಜೆಪಿ ಸರಕಾರವು ಜಾರಿಗೆ ತರಲು ಹೊರಟಿದ್ದ, ‘ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2010’ರಲ್ಲಿ ಇದ್ದದ್ದು ಈ ಗೊಂದಲಗಳೇ. ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು? ನಿಜವಾಗಿ, ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ 'ಶ್ರದ್ಧೆ'ಯಲ್ಲ. ಕೇವಲ 'ಶ್ರದ್ಧೆ'ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, 'ಶ್ರದ್ಧಾಬಿಂದು' ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣ ಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿ ಕೊಂಡಿತೋ ಆಗಲೇ ಹಸು 'ಶ್ರದ್ಧಾಬಿಂದು'ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, 1964ರ ಗೋಹತ್ಯಾ ತಡೆ ಕಾಯ್ದೆಯನ್ನು ಊರ್ಜಿತದಲ್ಲಿರಿಸಲು ತೀರ್ಮಾನಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರ ನಿಲುವನ್ನು ಪ್ರಶ್ನಿಸುತ್ತಿರುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ಶ್ರದ್ಧೆಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ? ಹೀಗಿರುವಾಗ,
   '.. ಗೋವು, ಕರು, ಗೂಳಿ, ಎತ್ತು, ಎಮ್ಮೆ, ಕೋಣ.. ಸಹಿತ ಜಾನುವಾರು ಪಟ್ಟಿಯಲ್ಲಿ ಬರುವ ಪ್ರಾಣಿಯನ್ನು ಹತ್ಯೆ ಮಾಡುವುದು 1 ಲಕ್ಷ  ರೂಪಾಯಿ ದಂಡ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾಗಬಹುದಾದಷ್ಟು ಭೀಕರ ಅಪರಾಧವಾಗುತ್ತದೆ..' ಎಂಬ ಕಾನೂನನ್ನು ಜಾರಿ ಮಾಡಲು ಹೊರಟಿದ್ದ ಬಿಜೆಪಿ ಸರಕಾರದ ಮಸೂದೆಯನ್ನು ರದ್ದುಪಡಿಸದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಇನ್ನೇನು ಮಾಡಬೇಕಿತ್ತು?  ‘.. 12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆಗೆ ಸಮ್ಮತಿ ನೀಡುವ..’ 1964ರ ಮಸೂದೆಯನ್ನು ಊರ್ಜಿತಗೊಳಿಸದೇ ಅವರಿಗೆ ಬೇರೆ ಯಾವ ದಾರಿಯಿತ್ತು?
 ಗುಜರಾತ್
 ಮಧ್ಯಪ್ರದೇಶ
 ಹಿಮಾಚಲ ಪ್ರದೇಶ
   ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಸದ್ಯ ಇರುವಂಥ ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಉಳಿದೆರಡು ರಾಜ್ಯಗಳಲ್ಲೂ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, 'ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ದಾರಾಳ ಜಾನು ವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..' ಎಂದು ಅನುಷಾ ನಾರಾಯಣ್ ದಿ ಹಿಂದೂವಿನಲ್ಲಿ ಇತ್ತೀಚೆಗೆ (5-5-2013) ಬರೆದಿದ್ದರು. ನಿಜವಾಗಿ, ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷಿದ್ಧಗೊಳಿಸ ಬೇಕಾದರೆ ನಿರುಪಯುಕ್ತ ಜಾನುವಾರುಗಳಿಗೆ ಏನಾದರೂ ವ್ಯವಸ್ಥೆ ಆಗಬೇಕಲ್ಲವೇ? ಒಂದು ರೀತಿಯಲ್ಲಿ, ಇಂಥ ಜಾನುವಾರುಗಳನ್ನು ಪೋಷಕರು ಮಾರಾಟ ಮಾಡದಿರಬೇಕಾದರೆ ಅಥವಾ ರಸ್ತೆಗೆ ಬಿಡಬಾರದೆಂದಾದರೆ ಅವುಗಳನ್ನು ಸೂಕ್ತ ಬೆಲೆ ಕೊಟ್ಟು ಖರೀದಿಸುವ ವ್ಯವಸ್ಥೆ ಸರಕಾರದಿಂದಲೇ ಆಗಬೇಕು. ಗೋಶಾಲೆ, ಮೇವು, ಹಿಂಡಿ..ಗಳ ಸಹಿತ ದೊಡ್ಡದೊಂದು ಬಜೆಟ್ ತಯಾರಾಗಬೇಕು. ಆದರೆ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ತರಲು ಹೊರಟ ಬಿಜೆಪಿ ಸರಕಾರ ಇಂಥದ್ದೊಂದು ಯೋಜನೆಯನ್ನು ತಯಾರಿಸಿರುವ ಬಗ್ಗೆ ಎಲ್ಲಾದರೂ ಹೇಳಿಕೊಂಡದ್ದು ನಿಮಗೆ ಗೊತ್ತೇ? ಇಲ್ಲವಲ್ಲ. ಹಾಗಾದರೆ, ಅದರ ಪೋಷಕರೇ ಅದನ್ನು ಸಾಕಬೇಕು ಎಂದಲ್ಲವೇ ಇದರರ್ಥ? ಇದು ಎಷ್ಟು ಪ್ರಾಯೋಗಿಕ? ಬಿಜೆಪಿ ಯಾರನ್ನು ಮೊರ್ಖರನ್ನಾಗಿಸಲು ಹೊರಟಿದೆ? ಮುಂದೊಂದು ದಿನ, ಜಾನುವಾರುಗಳನ್ನು ರಸ್ತೆಗೆ ಅಟ್ಟಿದ ಆರೋಪ ಹೊರಿಸಿ ಅದರ ಪೋಷಕರನ್ನೇ ಜೈಲಿಗಟ್ಟುವ ಪ್ರಯತ್ನಕ್ಕೂ ಅದು ಮುಂದಾಗಲಾರದು  ಎಂದು ಯಾವ ಆಧಾರದಿಂದ ಹೇಳಬಲ್ಲಿರಿ? ಅಲ್ಲದೇ, 1998ರಲ್ಲಿ ಬಿಜೆಪಿಯ ವಾಜಪೇಯಿ ಯವರೇ ಪ್ರಧಾನಿಯಾಗಿದ್ದರಲ್ಲ, ಆಗ ಈ ದೇಶದಲ್ಲಿರುವ 3500ರಷ್ಟು ಕಸಾಯಿಖಾನೆಗಳನ್ನು ಮುಚ್ಚಿಸಲು ಅವರು ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ (ದಿ ಹಿಂದೂ, ಮೇ 5, 2013 ) ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೆ, ಯಾಕೆ ಹೀಗಾಯಿತೆಂಬುದು ಬಿಜೆಪಿಗರಿಗೆ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. ಕಳೆದ ವರ್ಷ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. 2013ರಲ್ಲಿ ಈ ರಫ್ತಿನ ಪ್ರಮಾಣವನ್ನು 29%ಕ್ಕೆ ಹೆಚ್ಚಿಸಬೇಕೆಂಬ ಗುರಿಯನ್ನೂ ಸರಕಾರ ಇಟ್ಟುಕೊಂಡಿದೆ. ಅಷ್ಟಕ್ಕೂ, 1988ರಿಂದ ವಿಶ್ವದಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ, 2016-17ನೇ ವರ್ಷದ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲಿನ ಗುರಿಯನ್ನು ಹೊಂದಿದ್ದು, ಮೇವಿಗಾಗಿ 2,242 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವ ಮತ್ತು ಮಿಲಿಯಾಂತರ ಜಾನುವಾರಗಳ ಸೃಷ್ಟಿಗೆ ಯೋಜನೆ ರೂಪುಗೊಂಡಿರುವ ದೇಶವೊಂದರಲ್ಲಿ, ರಾಜಕೀಯ ಲಾಭಕ್ಕಾಗಿ ಜಾನುವಾರುಗಳನ್ನು ಕಟಕಟೆಗೆ ತರುವುದು ಎಷ್ಟು ಸರಿ?
    ನಿಜವಾಗಿ, ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕ್ರುತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ. (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಬಿಜೆಪಿಯ ಕಾರ್ಯಕರ್ತರು ದೇಶದಾದ್ಯಂತ ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಅಷ್ಟಕ್ಕೂ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು. ಹಾಸ್ಯಾಸ್ಪದ ಏನೆಂದರೆ, ಬಿಜೆಪಿಯ ಗೋಹತ್ಯಾ ನಿಷೇಧ ಮಸೂದೆಯನ್ನು ಹಿಂದೂ ಪರ ಮತ್ತು ಮುಸ್ಲಿಮ್ ವಿರೋಧಿಯೆಂಬಂತೆ ಅದರ ಕಾರ್ಯಕರ್ತರು ಬಿಂಬಿಸುತ್ತಿದ್ದಾರೆ. ನಿಜವಾಗಿ, ಅದು ಮುಸ್ಲಿಮ್ ವಿರೋಧಿಯಲ್ಲ, ಹಿಂದೂ ವಿರೋಧಿ. ಒಂದು ರೀತಿಯಲ್ಲಿ, ಗೋವಿಗೆ ಬಿಜೆಪಿ ಕೊಡುತ್ತಿರುವ ವ್ಯಾಖ್ಯಾನವನ್ನು ಈ ದೇಶದ ಜನಸಾಮಾನ್ಯರು ಖಂಡಿತ ಕೊಡುತ್ತಿಲ್ಲ. ಅವರು ಅದನ್ನು ಗೌರವಿಸುವಂತೆಯೇ ಆಹಾರ ಕ್ರಮಗಳ ಒಂದು ಭಾಗವಾಗಿಯೂ ಪರಿಗಣಿಸಿದ್ದಾರೆ. ನಿರುಪಯುಕ್ತ ಜಾನುವಾರುಗಳನ್ನು ಮಾರುವುದಕ್ಕೂ ಆಹಾರವಾಗಿ ಬಳಕೆ ಮಾಡುವುದಕ್ಕೂ ಮತ್ತು ಗೌರವಿಸುವುದಕ್ಕೂ ಅವರು ಸಂಬಂಧವನ್ನು ಕಲ್ಪಿಸುತ್ತಿಲ್ಲ. ಅವೆಲ್ಲವನ್ನೂ ಅವರು ಭಿನ್ನಭಿನ್ನವಾಗಿಯೇ ಪರಿಗಣಿಸುತ್ತಿದ್ದಾರೆ. ಅಷ್ಟಕ್ಕೂ,
   ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮಾತ್ರ ಮಾತಾಡಿದರೆ ಈ ಬಿಜೆಪಿಯನ್ನು ಯಾರು ನಂಬುತ್ತಾರೆ,  ಹೇಳಿ?

No comments:

Post a Comment