Thursday, May 4, 2017

ಮಂಗಳಂ ಎತ್ತಿರುವ ಮೀಡಿಯಾ ಎಥಿಕ್ಸ್ ಪ್ರಶ್ನೆ

ಮೀಡಿಯಾ ಎಥಿಕ್ಸ್ ಮತ್ತು ಜರ್ನಲಿಸ್ಟಿಕ್ ಎಥಿಕ್ಸ್ ಅಂದರೆ ಏನು? ಅದರ ಸ್ವರೂಪ ಹೇಗೆ? ಯಾವುದೆಲ್ಲ ಎಥಿಕ್ಸ್, ಯಾವುದೆಲ್ಲ ಅಲ್ಲ? ಓರ್ವ ಪತ್ರಕರ್ತ ಅಥವಾ ಒಂದು ಸುದ್ದಿ ಸಂಸ್ಥೆ ಎಥಿಕ್ಸ್ ಅನ್ನು ಉಲ್ಲಂಘಿಸಿದೆ ಎಂದು ವಾದಿಸುವುದಕ್ಕೆ ಆಧಾರ ಯಾವುದು? ಮಾಧ್ಯಮಗಳು ತಾನು ನಡೆದದ್ದೇ ದಾರಿ ಎಂಬ ರೀತಿಯಲ್ಲಿ ವರ್ತಿಸುತ್ತಿವೆಯೇ? ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಅವು ಪ್ರಸಾರ ಮಾಡುತ್ತಿರುವ ಸುದ್ದಿಗಳು, ವಿಶ್ಲೇಷಣೆಗಳು ಮತ್ತು ವ್ಯಂಗ್ಯಗಳು ನಿಜಕ್ಕೂ ಮಾಧ್ಯಮ ನೀತಿ ಸಂಹಿತೆಯ ಚೌಕಟ್ಟಿನೊಳಗಡೆ ಇವೆಯೇ? ಮಾರ್ಚ್ 26ರಂದು ಕೇರಳದಲ್ಲಿ ಭಾರೀ ಸದ್ದಿನೊಂದಿಗೆ ಆರಂಭವಾದ ಮಂಗಳಂ ಟಿ.ವಿ. ಈ ಬಗೆಯ ಪ್ರಶ್ನೆಗಳಿಗೆ ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದೆ.
ಮಾರ್ಚ್ 26ರಂದು ಮಂಗಳಂ ನ್ಯೂಸ್ ಚಾನೆಲ್ ಆರಂಭ ವಾಯಿತು. ಪ್ರಥಮ ವಾರ್ತಾ ಪ್ರಸಾರದಲ್ಲಿಯೇ ಅದು 8 ನಿಮಿಷ ಗಳ ಆಡಿಯೋವನ್ನು ಭಿತ್ತರಿಸಿತು. ಈ ಪ್ರಸಾರದ ಕೆಲವೇ ಗಂಟೆ ಗಳಲ್ಲಿ ಕೇರಳದ ಸಾರಿಗೆ ಸಚಿವ ಶಶೀಂದ್ರನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಾವುದೇ ಒಂದು ಚಾನೆಲ್‍ನ ಕನಸಿನ ಆರಂಭ ಇದು. ಪ್ರಾರಂಭವಾಗಿ ಕೆಲವೇ ಗಂಟೆಗಳಲ್ಲಿ ಮಂಗಳಂ ಚಾನೆಲ್ ಕೇರಳದಾದ್ಯಂತ ಚರ್ಚೆಯ ವಸ್ತುವಾಯಿತು. ಇದಾಗಿ ನಾಲ್ಕೇ ದಿನಗಳಲ್ಲಿ ಚಾನೆಲ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಮಾರ್ ಕ್ಷಮೆ ಯಾಚಿಸಿದರು. ಮಾಧ್ಯಮ ನೀತಿ ಸಂಹಿತೆಗೆ ಆ ಆಡಿಯೋ ತಕ್ಕುದಾಗಿರಲಿಲ್ಲ ಎಂದು ಹೇಳಿಕೊಂಡರು. ಕೆ. ಸಚ್ಚಿದಾನಂದನ್, ಎನ್.ಎಸ್. ಮಾಧವನ್, ಪೌಲ್ ಝಕಾರಿಯ ಮುಂತಾದ ಪ್ರಮುಖ ಸಾಹಿತಿ ಗಳು ಆ ಆಡಿಯೋ ಪ್ರಸಾರವನ್ನು ಖಂಡಿಸಿದರು. ‘ನೆಟ್‍ವರ್ಕ್ ಆಫ್ ವುಮನ್ ಇನ್ ಮೀಡಿಯಾ’ ಎಂಬ ಮಹಿಳಾ ಪತ್ರಕರ್ತರ ಗುಂಪು ಮಂಗಳಂ ಚಾನೆಲ್ ಕಚೇರಿಗೆ ಜಾಥಾ ನಡೆಸಿತು. # WE ARE NOT MANGALAM .#apology not accepted.#proud 2 be a women journalist.. ಹೀಗೆ ಪ್ಲಕಾರ್ಡ್ ಹಿಡಿದು ಮಹಿಳಾ ಪತ್ರಕರ್ತರು ಪ್ರತಿಭಟಿಸಿದರು. ಸರಕಾರ ತನಿಖೆಗೆ ಆದೇಶಿಸಿತು. ಚಾನೆಲ್‍ನ 9 ಮಂದಿ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಮಾರ್ ಸಹಿತ 5 ಮಂದಿಯ ಬಂಧನವಾಯಿತು. ಇದರ ಜೊತೆಜೊತೆಗೇ ಮಂಗಳಂ ಬೆತ್ತಲೆಯಾಗುತ್ತಲೇ ಹೋಯಿತು.
8 ನಿಮಿಷಗಳ ಆಡಿಯೋದಲ್ಲಿದ್ದುದು ಶಶೀಂದ್ರನ್ ಮತ್ತು ಓರ್ವ ಅಜ್ಞಾತ ಮಹಿಳೆಯ ನಡುವೆ 8 ನಿಮಿಷಗಳ ವರೆಗೆ ನಡೆದ ಮಾತುಕತೆ. ಲೈಂಗಿಕ ಭಾಷೆ ಮತ್ತು ಲೈಂಗಿಕ ಆಸಕ್ತಿಯನ್ನು ಶಶೀಂದ್ರನ್ ವ್ಯಕ್ತಪಡಿಸುವುದು ಆ ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ವಿಶೇಷ ಏನೆಂದರೆ, ಮಹಿಳೆಯರ ಧ್ವನಿಯನ್ನು ಮ್ಯೂಟ್ ಮಾಡಲಾಗಿದೆ. ಶಶೀಂದ್ರನ್‍ರ ಮಾತಿಗೆ ಮಹಿಳೆ ವಿರೋಧ ವ್ಯಕ್ತಪಡಿಸುತ್ತಾಳೋ ಸಮ್ಮತಿಸುತ್ತಾಳೋ ಬೆದರಿಕೆ ಹಾಕುತ್ತಾಳೋ ಎಂಬುದು ಆಡಿಯೋದಲ್ಲಿ ಸ್ಪಷ್ಟವಾಗುವುದಿಲ್ಲ. ಈ ಮಾತುಕತೆ ಎಲ್ಲಿ ನಡೆದಿದೆ ಎಂಬುದೂ ಗೊತ್ತಾಗುವುದಿಲ್ಲ. ಬರೇ ಶಶೀಂದ್ರನ್ ಅವರ ಮಾತುಗಳನ್ನಷ್ಟೇ ಪ್ರಸಾರ ಮಾಡಿ, ‘ಇದು ಶಶೀಂದ್ರನ್ ಅವರ ಲೈಂಗಿಕ ಟೇಪು’ ಎಂದು ಆರಂಭದಲ್ಲಿ ಚಾನೆಲ್ ಹೇಳಿ ಕೊಂಡಿತು. ‘ನೆರವು ಕೋರಿದ ಮಹಿಳೆಯೊಂದಿಗೆ ಶಶೀಂದ್ರನ್ ವರ್ತಿಸಿದ ರೀತಿ ಇದು’ ಎಂದೂ ಅದು ವಿವರಣೆ ನೀಡಿತು. ಅಲ್ಲದೇ, ಈ ಚಾನೆಲ್‍ನ ಒಡೆತನದಲ್ಲಿ ಈ ಮೊದಲೇ ಮಂಗಳಂ ಎಂಬ ಪತ್ರಿಕೆ ಪ್ರಕಟವಾಗುತ್ತಿತ್ತು. ‘ಭ್ರಷ್ಟಾಚಾರ ನಡೆದರೆ ನಮಗೆ ತಿಳಿಸಿ’ ಎಂದು ಅದರಲ್ಲಿ ಒಂದು ದೂರವಾಣಿ ಸಂಖ್ಯೆ ಯನ್ನೂ ನೀಡಲಾಗುತ್ತಿತ್ತು. ಆ ಸಂಖ್ಯೆಗೆ ಕರೆ ಮಾಡಿದ ಮಹಿಳೆ ಯೋರ್ವರು ಈ ಆಡಿಯೋವನ್ನು ನೀಡಿದ್ದಾರೆ ಎಂದೂ ಅದು ಸಮರ್ಥಿಸಿಕೊಂಡಿತು. ಆದರೆ ಮೊದಲ ದಿನದ ಈ ವಿವರಣೆಗಳು ಮರುದಿನದಿಂದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ ಹೋದುವು. ಸಂತ್ರಸ್ತ ಮಹಿಳೆ ದೂರು ನೀಡಿದ್ಧರೋ, ನೀಡಿದ್ದರೆ ಯಾವ ಪೊಲೀಸ್ ಠಾಣೆಯಲ್ಲಿ ಎಂಬ ಪ್ರಶ್ನೆ ಎದುರಾಯಿತು. ಚಾನೆಲ್ ಉತ್ತರಿಸಲಿಲ್ಲ. ಸಂತ್ರಸ್ತ ಮಹಿಳೆ ದೂರು ನೀಡಿಲ್ಲ ಎಂದ ಮೇಲೆ ಇಬ್ಬರ ನಡುವೆ ನಡೆದ ಖಾಸಗಿ ಸಂಭಾಷಣೆಯಾಗಿ ಅದು ಗುರುತಿಸಿಕೊಳ್ಳಬೇಕೇ ಹೊರತು ಅದನ್ನು ಸಾರ್ವಜನಿಕರ ಎದುರು ಇಡುವ ಅಗತ್ಯ ಏನಿದೆ, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡವು. ಚಾನೆಲ್ ಮತ್ತೂ ಮೌನ ವಾಯಿತು. ಅನುಮಾನಗಳು ಮತ್ತಷ್ಟು ಹೆಚ್ಚಾದುವು. ಇದು ಹನಿಟ್ರ್ಯಾಪ್ ಎಂಬ ಸಂಶಯ ಬಲವಾಗತೊಡಗಿತು. ಇದಕ್ಕೆ ಪೂರಕವಾಗಿ ಮೂರು ದಿನಗಳ ಬಳಿಕ ಇನ್ನಷ್ಟು ಸತ್ಯ ಸುದ್ದಿಗಳು ಬಹಿರಂಗಕ್ಕೆ ಬಂದುವು. ಮಂಗಳಂ ಚಾನೆಲ್‍ಗೆ ರಾಜಿನಾಮೆ ಇತ್ತ ‘ಅಲ್ ನೀಮಾ ಅಶ್ರಫ್’ ಎಂಬ ಪತ್ರಕರ್ತೆ ಇಡೀ ಘಟನೆಯನ್ನು ಇಂಡಿಯನ್ ಎಕ್ಸ್ ಪ್ರೆಸ್‍ನೊಂದಿಗೆ ಹಂಚಿಕೊಂಡರು.
‘ಪ್ರಾರಂಭದ ದಿನದಂದೇ ಸ್ಫೋಟಕ ಸುದ್ದಿಯೊಂದನ್ನು ಪ್ರಸಾರ ಮಾಡುವುದು ಚಾನೆಲ್‍ನ ಉದ್ದೇಶವಾಗಿತ್ತು. ಅದಕ್ಕಾಗಿ ಈ ಸುದ್ದಿ ಸಂಸ್ಥೆಯು ಓರ್ವ ಪುರುಷ ಮತ್ತು ನಾಲ್ವರು ಮಹಿಳಾ ಪತ್ರಕರ್ತರ ಗುಂಪನ್ನು ರಚಿಸಿತು. ಐವರು ವಿಐಪಿಗಳ ಹೆಸರನ್ನೂ ಅವರ ಮುಂದಿರಿಸಿತು. ಅದರಲ್ಲಿ ಓರ್ವ ಮಹಿಳಾ ವಿಐಪಿಯೂ ಇದ್ದರು. ಶಶೀಂದ್ರನ್‍ರ ಹೆಸರೂ ಇತ್ತು. ಈ ಐವರ ಗುಂಪು ಈ 5 ಮಂದಿ ವಿಐಪಿಗಳನ್ನು ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು. ಸುದ್ದಿ ಸಂಸ್ಥೆಗೆ ಬೇಕಾಗಿರುವುದು ಎಕ್ಸ್‍ಕ್ಲೂಸಿವ್ ನ್ಯೂಸ್. ಅದಕ್ಕೆ ಯಾವ ವಿಧಾನವನ್ನು ಬೇಕಾದರೂ ಅನುಸರಿಸುವ ಸ್ವಾತಂತ್ರ್ಯವನ್ನು ಸುದ್ದಿ ಸಂಸ್ಥೆಯ ಸಂಪಾದಕರು ಈ ಗುಂಪಿಗೆ ನೀಡಿದರು. ವಿಶೇಷ ಏನೆಂದರೆ, ಈ 5 ಮಂದಿ ಪತ್ರಕರ್ತರು ಪತ್ರಿಕಾ ಜಗತ್ತಿಗೆ ಹೊಸಬರು ಮತ್ತು ಅನನುಭವಿಗಳು. ಹೀಗೆ ಆ ಆಡಿಯೋ ತಯಾರಾಯಿತು. ಶಶೀಂದ್ರನ್‍ರನ್ನು ಹನಿಟ್ರ್ಯಾಪ್ (ಬಲೆಗೆ ಬೀಳಿಸುವ)ಗೆ ಒಳಪಡಿಸಲಾಯಿತು. ನಿಜವಾಗಿ, ಇದು ಸಂತ್ರಸ್ತ ಮಹಿಳೆಯ ಆಡಿಯೋ ಅಲ್ಲ. ಇಲ್ಲಿ ಒಂದು ಹಂತದ ವರೆಗೆ ಶಶೀಂದ್ರನ್ ಅವರೇ ಸಂತ್ರಸ್ತ. ಮೋಹಿನಿಯ ಮೂಲಕ ಅವರನ್ನು ಬಲೆಗೆ ಬೀಳಿಸಲಾಯಿತು. ಖಾಸಗಿಯಾಗಿ ಮತ್ತು ಪರಸ್ಪರ ಯಾವ ಒತ್ತಡಗಳೂ ಇಲ್ಲದೇ ನಡೆದ ಮಾತುಕತೆ ಅದು. ಅಲ್ಲಿ ಹೆಣ್ಣು ಸಂತ್ರಸ್ತೆ ಅಲ್ಲ. ಗಂಡು ಪೀಡಕನೂ ಅಲ್ಲ. ನೀಮಾ ಅಶ್ರಪ್ ಅವರು ಇಡೀ ಪ್ರಕರಣವನ್ನು ಬಹಿರಂಗಗೊಳಿಸುತ್ತಿರು ವಂತೆಯೇ ಅಜಿತ್ ಕುಮಾರ್‍ರು ಪ್ರೈಮ್ ಟೈಮ್‍ನಲ್ಲಿ ಕಾಣಿಸಿಕೊಂಡು ಕ್ಷಮೆ ಯಾಚಿಸಿದರು. ಆ ಆಡಿಯೋವನ್ನು ಪ್ರಸಾರ ಮಾಡಿದ್ದು ತಪ್ಪು ಎಂದು ಹೇಳಿಕೊಂಡರು. ಆದರೆ, ಆ ಕ್ಷಮೆ ಯಾಚನೆಯು ಒಟ್ಟು ಚರ್ಚೆಯನ್ನು ಕೊನೆಗೊಳಿಸುವ ಬದಲು ಮಾಧ್ಯಮ ಎಥಿಕ್ಸ್‍ನ ಬಗ್ಗೆ ಗಂಭೀರ ಚರ್ಚೆಗೆ ನಾಂದಿಯನ್ನು ಹಾಡಿತು. ಮಾಧ್ಯಮಗಳು ಎಷ್ಟರ ವರೆಗೆ ಪರಿಶುದ್ಧ? ಅವುಗಳ ಎಲ್ಲೆ ಎಲ್ಲಿವರೆಗೆ? ತೋಚಿದಂತೆ ಸುದ್ದಿ ರಚಿಸಲು, ಪ್ರಸಾರ ಮಾಡಲು ಮತ್ತು ಸಮರ್ಥಿಸಿಕೊಳ್ಳಲು ಅವು ಶ್ರಮಿಸುತ್ತಿವೆಯೇ? ರಾಜಕಾರಣಿ ಗಳು ಮತ್ತು ಸಾರ್ವಜನಿಕರು ಮಾಧ್ಯಮಗಳಿಗೆ ಭಯ ಪಡುವ ಸ್ಥಿತಿ ಬಂದಿದೆಯೇ? ಪ್ರಶ್ನಿಸಿದರೆ ಟಾರ್ಗೆಟ್ ಮಾಡುತ್ತಾರೆ ಎಂಬ ಭೀತಿ ಇದೆಯೇ? ಇಂಥ ಪತ್ರಿಕೋದ್ಯಮ ಎಷ್ಟು ಸರಿ? ಮಾಧ್ಯಮ ನೀತಿ ಸಂಹಿತೆಯು ಇತರೆಲ್ಲ ಕ್ಷೇತ್ರಗಳಲ್ಲಿರುವ ನೀತಿ ಸಂಹಿತೆ ಯಂತೆಯೇ ಪವಿತ್ರ ಮತ್ತು ಪಾಲನಾರ್ಹ. ಕ್ರಿಕೆಟ್‍ನಲ್ಲಿ ನಿರ್ದಿಷ್ಟ ನಿಯಮ ಸಂಹಿತೆಯಿದೆ. ಆಟಗಾರ ಅದನ್ನು ಪಾಲಿಸಬೇಕು. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವ ಭೀತಿ ಪ್ರತಿ ಕ್ರಿಕೆಟಿಗರಲ್ಲೂ ಇರುತ್ತದೆ. ರಾಜಕಾರಣಿಗಳನ್ನು ಒಂದು ಹಂತದ ವರೆಗೆ ಕಟ್ಟಿ ಹಾಕುವ ಅವಕಾಶ ಇದೆ. ಮಾಧ್ಯಮಗಳೇ ಆ ಕೆಲಸವನ್ನು ನಿರ್ವಹಿಸುತ್ತಲೂ ಇವೆ. ಸರಕಾರಿ ಅಧಿಕಾರಿಗಳು, ಕ್ರಿಮಿನಲ್‍ಗಳು ಸಹಿತ ಎಲ್ಲರೂ ಆಗಾಗ ಇಲ್ಲಿ ತರಾಟೆಗೆ ಒಳಗಾಗುತ್ತಲೂ ಇದ್ದಾರೆ. ಆದರೆ ಇದೇ ರೀತಿಯ ವಾತಾವರಣ ಪತ್ರಕರ್ತರಿಗೆ ಸಂಬಂಧಿಸಿ ಇವೆಯೇ? ಕನ್ನಡದಲ್ಲಿ ಸುಮಾರು 10ರಷ್ಟು ಸುದ್ದಿ ಚಾನೆಲ್‍ಗಳಿವೆ. ಅಷ್ಟೇ ಸಂಖ್ಯೆಯ ದೈನಿಕಗಳಿವೆ. ಇವೆಲ್ಲವುಗಳ ಕಾರ್ಯ ನಿರ್ವಹಣೆ ಹೇಗಿದೆ? ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಂದು ಚಾನೆಲ್ ಇನ್ನೊಂದು ಚಾನೆಲನ್ನು ವಿಮರ್ಶಿಸುವುದು ನಡೆಯುತ್ತಿದೆಯೇ? ಇಲ್ಲವಲ್ಲ. ಒಂದು ಪತ್ರಿಕೆಯು ಇನ್ನೊಂದು ಪತ್ರಿಕೆಯನ್ನು ವಿಮರ್ಶಿಸುವ ಮತ್ತು ತಪ್ಪುಗಳನ್ನು ಎತ್ತಿ ಹೇಳುವ ಕೆಲಸಗಳು ಆಗುತ್ತಿವೆಯೇ? ಓರ್ವ ರಾಜಕಾರಣಿಯ ಮೇಲೆ ಒಂದು ಚಾನೆಲ್ ಆರೋಪ ಹೊರಿಸುತ್ತದೆ ಅಥವಾ ಓರ್ವ ವ್ಯಕ್ತಿಯ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡುತ್ತದೆ ಎಂದಿಟ್ಟು ಕೊಳ್ಳೋಣ. ಆ ಬಗ್ಗೆ ಅವರಿಬ್ಬರಿಗೂ ಅವರದೇ ಆದ ಅಭಿಪ್ರಾಯ ಗಳಿರಬಹುದು. ಆ ಸುದ್ದಿ ಚಾನೆಲ್‍ನ ಬಗ್ಗೆಯೂ ನಿರ್ದಿಷ್ಟ ನಿಲುವುಗಳಿರಬಹುದು. ಅವರು ಇನ್ನೊಂದು ಚಾನೆಲ್‍ನಲ್ಲಿ ಇವು ಗಳನ್ನು ಹೇಳಿಕೊಳ್ಳಲು ಅವಕಾಶವನ್ನು ಕೋರಿದರೆ ಆ ಚಾನೆಲ್ ಅದಕ್ಕೆ ಅವಕಾಶ ನೀಡಬ ಹುದೇ? ಹಾಗಂತ, ಕೇವಲ ಚಾನೆಲ್‍ಗಳಿಗೆ ಮಾತ್ರ ಸಂಬಂಧಿಸಿ ಹೇಳುತ್ತಿಲ್ಲ. ಪತ್ರಿಕೆಗಳಿಗೂ ಇದು ಅನ್ವಯಿಸುತ್ತದೆ. ಒಂದು ಪತ್ರಿಕೆಯಲ್ಲಿ ಅಂಕಣ ಬರೆಯುವ ವ್ಯಕ್ತಿ ಇನ್ನೊಂದು ಪತ್ರಿಕೆಯ ತಪ್ಪುಗಳನ್ನು ಎತ್ತಿ ಹೇಳುವ ಕೆಲಸ ಮಾಡುತ್ತಾರೆಯೇ? ಅದಕ್ಕೆ ಅವಕಾಶವನ್ನು ನೀಡಲಾಗುತ್ತಿದೆಯೇ? ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಮುಂತಾದುವುಗಳೆಲ್ಲ ಸೆಲೆಕ್ಟಿವ್ ಆಗಿ ಚಲಾವಣೆಯಲ್ಲಿರುವಂತೆ ಅನಿಸುತ್ತಿಲ್ಲವೇ? ನಿಜವಾಗಿ, ಒಂದು ಸುದ್ದಿ ಸಂಸ್ಥೆ ಇನ್ನೊಂದು ಸುದ್ದಿ ಸಂಸ್ಥೆಯ ಕಾರ್ಯ ನಿರ್ವಹಣೆಯ ಬಗ್ಗೆ ತಜ್ಞರಿಂದ ಚರ್ಚೆಗಳನ್ನು ಏರ್ಪಡಿಸುವುದಿಲ್ಲ. ಅದರಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ತಪ್ಪು-ಒಪ್ಪುಗಳನ್ನು ಚರ್ಚಿಸುವುದಿಲ್ಲ. ಒಂದು ಸುದ್ದಿ ಸಂಸ್ಥೆಯಲ್ಲಿ ಕುಳಿತು ಇನ್ನೊಂದು ಸುದ್ದಿ ಸಂಸ್ಥೆಯ ಮೇಲೆ ಆರೋಪ ಹೊರಿಸುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಒಂದು ರೀತಿಯಲ್ಲಿ, ಮಾಧ್ಯಮ ಕ್ಷೇತ್ರವು ತಮ್ಮನ್ನು ವಿಮರ್ಶಾತೀತಗೊಳಿಸುವುದಕ್ಕೆ ಪರಸ್ಪರ ಅಲಿಖಿತ ಒಪ್ಪಂದಗಳನ್ನು ಏರ್ಪಡಿಸಿಕೊಂಡಿವೆಯೇನೋ ಎಂದು ಅಂದು ಕೊಳ್ಳುವಂತಹ ವಾತಾವರಣ ಇದೆ. ಅದೇ ವೇಳೆ, ಉಳಿದವರನ್ನೆಲ್ಲ ಅವು ಬಿಡುಬೀಸಾಗಿ ವಿಮರ್ಶಿಸುತ್ತವೆ. ಅದನ್ನು ಮಾಧ್ಯಮ ಸ್ವಾತಂತ್ರ್ಯ ಎಂಬ ಚಂದದ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಲೂ ಇವೆ. ಯಾರಾದರೂ ಈ ಸ್ವಾತಂತ್ರ್ಯವನ್ನು ಪ್ರಶ್ನಿಸಿದರೆ ಅವು ಒಟ್ಟಾಗಿ ಮುಗಿ ಬೀಳುತ್ತವೆ. ಮಾಧ್ಯಮಗಳ ಕಾರ್ಯನಿರ್ವಹಣೆಯ ಬಗ್ಗೆ ಸಿದ್ದರಾಮಯ್ಯರ ಸರಕಾರವು ಸದನ ಸಮಿತಿಯನ್ನು ರಚಿಸುವ ಉಮೇದು ತೋರಿಸಿದಾಗ ಅವು ವರ್ತಿಸಿದ್ದು ಇದೇ ರೀತಿಯಲ್ಲಿ. ಮಾಧ್ಯಮ ಸಂಸ್ಥೆಗಳು ಪರಸ್ಪರ ವಿಮರ್ಶಾತೀತರಂತೆ ನಡೆದುಕೊಳ್ಳುವುದು ಮತ್ತು ಉಳಿದವರನ್ನೆಲ್ಲ ವಿಮರ್ಶೆಗೊಡ್ಡುವುದು ಯಾವ ಬಗೆಯ ಎಥಿಕ್ಸ್? ಒಂದು ಪತ್ರಿಕೆ ಇನ್ನೊಂದನ್ನು ಮತ್ತು ಒಂದು ಸುದ್ದಿ ಸಂಸ್ಥೆ ಇನ್ನೊಂದನ್ನು ವಿಮರ್ಶೆಗೊಡ್ಡುವುದೇಕೆ ನಡೆಯುತ್ತಿಲ್ಲ? ಅಲ್ಲೇನು ತಪ್ಪುಗಳು ಸಂಭವಿಸುತ್ತಲೇ ಇಲ್ಲವೇ? ಅಲ್ಲಿಯ ಎಕ್ಸ್‍ಕ್ಲೂಸಿವ್ ನ್ಯೂಸ್‍ಗಳು, ಬ್ರೇಕಿಂಗ್ ನ್ಯೂಸ್‍ಗಳು, ಕವರ್ ಸ್ಟೋರಿಗಳು, ಪದ ಬಳಕೆಗಳೆಲ್ಲ ನೂರಕ್ಕೆ ನೂರು ಪರಿ ಪೂರ್ಣವೇ? ಅಲ್ಲಿ ಪೂರ್ವಾಗ್ರಹ ಇಲ್ಲವೇ? ಪಕ್ಷ ಪಾತಿ ನಿಲುವು ಗಳಿಲ್ಲವೇ? ಅನಗತ್ಯ ವೈಭವೀಕರಣಗಳಿಲ್ಲವೇ? ಭ್ರಷ್ಟಾಚಾರವಿಲ್ಲವೇ? ಜಾಹೀರಾತುದಾರರ ಹಿತ ಕಾಯುವ ಸಂದರ್ಭಗಳಿಲ್ಲವೇ? ನಿರ್ದಿಷ್ಟ ವ್ಯಕ್ತಿಗಳನ್ನು, ರಾಜಕಾರಣಿಗಳನ್ನು, ಪಕ್ಷಗಳನ್ನು, ಸಮು ದಾಯವನ್ನು ಓಲೈಸುವ ವಾತಾವರಣಗಳಿಲ್ಲವೇ?
ಪ್ರತಿದಿನ ರಾಜಕಾರಣಿಗಳನ್ನು ಜೋಕರ್‍ಗಳು, ಕಳ್ಳರು, ಧಗಾ ಕೋರರಂತೆ ಬಿಂಬಿಸುವ ಚಾನೆಲ್‍ಗಳು ಮತ್ತು ಪತ್ರಿಕೆಗಳು ಯಾಕೆ ಈ ಬಗ್ಗೆ ಮಾತಾಡುತ್ತಿಲ್ಲ? ಅವೆಷ್ಟು ಸಾಚಾ?

1 comment: